ಬಿಜೆಪಿ ಪಕ್ಷದ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ಪೊಲೀಸರು ಬೆಳ್ಳಾರೆ ಗೌರಿಹೊಳೆ 22 ವರ್ಷದ ಅಬಿದ್ ಮತ್ತು 28 ವರ್ಷದ ನೌಫಾಲ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತರು ಪ್ರಮುಖ ಆರೋಪಿಗಳಿಗೆ ನೆರವು ನೀಡಿದ ಆರೋಪದಡಿ ಬಂಧಿಸಲಾಗಿದೆ.
ಬಂಧಿತ ಆರೋಪಿ ಬೆಳ್ಳಾರೆ ಗೌರಿಹೊಳೆ ನಿವಾಸಿ ಮೊಹಮ್ಮದ್ ಪುತ್ರ ನೌಫಾಲ್ ಹಾಗೂ ನಾವೂರು ನಿವಾಸಿ ಯಾಕೂಬ್ ಪುತ್ರ ಅಬಿದ್ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಇಲ್ಲಿಯವರೆಗೂ 6 ಜನರನ್ನು ಬಂಧಿಸಲಾಗಿದೆ.
ಈ ಹಿಂದೆ ಮಂಗಳೂರು ಪೊಲೀಸರು ಶಫೀಕ್, ಜಾಕೀರ್, ಸದ್ದಾಂ ಹಾಗೂ ಹ್ಯಾರಿಸ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನು ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಶಫೀಕ್ ಮತ್ತು ಜಾಕೀರ್ ಎಂಬುವರನ್ನು ಜುಲೈ 28ರಂದು ಬಂಧಿಸಲಾಗಿತ್ತು. ಈ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ನಂತರ ವಿಚಾರಣೆ ಮುಂದುವರೆಸಿದಾಗ ಸಿಕ್ಕ ಮತ್ತಷ್ಟು ಸಾಕ್ಷಿ ಆಧಾರಗಳೊಂದಿಗೆ ಸದ್ದಾಂ ಮತ್ತು ಹ್ಯಾರಿಸ್ ಅವರನ್ನು ಬಂಧಿಸಿದ್ದರು. ಇದೀಗ ಅಬಿದ್ ಮತ್ತು ನೌಫಾಲ್ ನನ್ನು ಬಂಧಿಸಲಾಗಿದೆ.
ಜುಲೈ 26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ನನ್ನು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು. ಆ ಬೆನ್ನಲ್ಲೇ, ಬಿಜೆಪಿ ಕಾರ್ಯಕರ್ತರೇ ತಮ್ಮದೇ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದರು.