ಕಾಂಗ್ರೆಸ್​ ಸೋಲಿಸಲು BJP, ಗುಜರಾತ್​ ಉದ್ಯಮಿಗಳ ಜೊತೆಗೆ ಕುಮಾರಸ್ವಾಮಿ ಡೀಲ್​ ಆರೋಪ: ದೂರು ದಾಖಲು

ಕರ್ನಾಟಕದಲ್ಲಿ ಕಾಂಗ್ರೆಸ್​​ನ್ನು ಸೋಲಿಸಲು ಈ ಬಾರಿಯೂ ಬಿಜೆಪಿ ಜೊತೆಗೆ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್​​ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ.

ಗುಜರಾತ್​ ಉದ್ಯಮಿಗಳ ಜೊತೆ ಕುಮಾರಸ್ವಾಮಿ ಒಪ್ಪಂದ..?

ಅಲ್ಲದೇ ಕರ್ನಾಟಕದಲ್ಲಿ ಕಾಂಗ್ರೆಸ್​ ಸೋಲಿಸುವ ರಣತಂತ್ರದ ಭಾಗವಾಗಿ ಗುಜರಾತ್​ ಮೂಲದ ಉದ್ಯಮಿಗಳ ಜೊತೆಗೂ ಕುಮಾರಸ್ವಾಮಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಗುಜರಾತ್​ ಉದ್ಯಮಿಗಳಿಂದ ಜೆಡಿಎಸ್​ಗೆ ಹಣಕಾಸು ನೆರವು ..?

ಕರ್ನಾಟಕದಲ್ಲಿ ಕಾಂಗ್ರೆಸ್​ ಸೋಲಿಸಲು ಜೆಡಿಎಸ್​​ಗೆ ಗುಜರಾತ್​ ಮೂಲದ ಪ್ರಮುಖ ಉದ್ಯಮಿಗಳ ಹಣಕಾಸು ನೆರವು ನೀಡಲಿದ್ದಾರೆ ಎಂಬ ಒಪ್ಪಂದವನ್ನು ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗುಜರಾತ್​ ಉದ್ಯಮಿಗಳ ಜೊತೆ ಕುಮಾರಸ್ವಾಮಿ ರಹಸ್ಯ ಭೇಟಿ..?

ಮಾಜಿ ಸಿಎಂ ಹೆಚ್​ಡಿಕೆ ಮತ್ತು ಗುಜರಾತ್ ಮೂಲದ ಉದ್ಯಮಿಗಳ ಜೊತೆಗೆ ರಾಮನಗರದಲ್ಲಿ ರಹಸ್ಯ ಭೇಟಿ ನಡೆದಿದ್ದು, ಈ ರಹಸ್ಯ ಭೇಟಿಯನ್ನು ಸಚಿವ ಅಶ್ವತ್ಥ್​ ನಾರಾಯಣ ಅವರು ವ್ಯವಸ್ಥೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ದೇವೇಗೌಡರ ಜೊತೆಗೆ ಬಿಜೆಪಿ ನಾಯಕನ ಸಭೆ..?

ಇದಲ್ಲದೇ ಇದೇ ಏಪ್ರಿಲ್​ 5ರಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿ ರಾಜ್ಯಸಭಾ ಸಂಸದ ಲೆಹರ್​ ಸಿಂಗ್​ ಅವರು ಮಾತುಕತೆಯನ್ನೂ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಕುಮಾರಸ್ವಾಮಿ ತೋಟದ ಮನೆಯಲ್ಲಿ ರಹಸ್ಯ ಮಾತುಕತೆ..?

ಮಾರ್ಚ್​ 29ರಂದು ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಕುಮಾರಸ್ವಾಮಿ, ಕೆ ಆರ್​ ನಗರ ಜೆಡಿಎಸ್​ ಶಾಸಕ ಸಾ ರಾ ಮಹೇಶ್​ ಮತ್ತು ಸಚಿವ ಆರ್​ ಅಶೋಕ್​ ರಹಸ್ಯ ಸಭೆ ನಡೆಸಿದ್ದರು ಎಂದೂ ಆರೋಪಿಸಲಾಗಿದೆ.

ಜೆಡಿಎಸ್​ನಿಂದ ದೂರು:

ಕಾಂಗ್ರೆಸ್​ನ್ನು ಸೋಲಿಸಲು ಕರ್ನಾಟಕದಲ್ಲಿ ಜೆಡಿಎಸ್​​ಗೆ ಹಣಕಾಸು ವ್ಯವಸ್ಥೆ ಮಾಡುವ ಭಾಗವಾಗಿ ಕುಮಾರಸ್ವಾಮಿ ಗುಜರಾತ್​ ಮೂಲದ ಉದ್ಯಮಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಜೆಡಿಎಸ್​ ಪಕ್ಷ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ. 

ಇಂತಹ ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹಾಕುತ್ತಿರುವ ಟ್ವಿಟ್ಟರ್​ ಹ್ಯಾಂಡಲ್​ನ್ನು ಬ್ಲಾಕ್​ ಮಾಡ್ಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಸೈಬರ್​ ಪೊಲೀಸರಿಗೆ ಸೂಚಿಸಬೇಕು ಎಂದು ಜೆಡಿಎಸ್​ ಕಾನೂನು ಘಟಕದ ಅಧ್ಯಕ್ಷ ಎ ಪಿ ರಂಗನಾಥ್​ ಅವರು ದೂರು ನೀಡಿದ್ದಾರೆ,