BREAKING: ಭಾರತ್​ ಜೋಡೋ ಯಾತ್ರೆ ಸ್ಥಗಿತಗೊಳಿಸಿ – ಕೇಂದ್ರ ಆರೋಗ್ಯ ಸಚಿವರಿಂದ ರಾಹುಲ್​ ಗಾಂಧಿಗೆ ಪತ್ರ

ಕೋವಿಡ್​ ಪ್ರಕರಣ ಹೆಚ್ಚಳ ಆಗುವ ಆತಂಕದ ಹಿನ್ನೆಲೆಯಲ್ಲಿ ಭಾರತ್​ ಜೋಡೋ ಯಾತ್ರೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಖುದ್ದು ಕೇಂದ್ರ ಆರೋಗ್ಯ ಸಚಿವರೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಮೂಲಕ ಭಾರತ್​ ಜೋಡೋ ಯಾತ್ರೆ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರ ನಡುವಿನ ಸಂಘರ್ಷ ಈಗ ಹೊಸ ತಿರುವು ಪಡೆದಿದೆ.

ರಾಜಸ್ಥಾನದಲ್ಲಿ ಭಾರತ್​ ಜೋಡೋ ಯಾತ್ರೆ ಮುಗಿದಿದ್ದು, ಈಗ ಬಿಜೆಪಿ ಆಡಳಿತವಿರುವ ಹರಿಯಾಣದಲ್ಲಿ ಭಾರತ್​ ಜೋಡೋ ಯಾತ್ರೆ ಸಾಗುತ್ತಿದೆ.

ರಾಜಸ್ಥಾನದಲ್ಲಿ ಸಾಗುತ್ತಿರುವ ಭಾರತ್​ ಜೋಡೋ ಯಾತ್ರೆಯಿಂದ ಕೋವಿಡ್​ ಸೋಂಕು ಹಬ್ಬುತ್ತಿರುವ ಬಗ್ಗೆ ರಾಜಸ್ಥಾನದ ಬಿಜೆಪಿ ಸಂಸದರಾದ ಪಿ ಪಿ ಚೌಧರಿ, ನಿಹಾಲ್​ ಚಂದ್​ ಮತ್ತು ದೇವಜಿ ಪಟೇಲ್​ ಅವರು ಡಿಸೆಂಬರ್​ 20ರಂದು ಪತ್ರವನ್ನು ಬರೆದು ಆತಂಕ ಹಂಚಿಕೊಂಡಿದ್ದಾರೆ
ಎಂದು ಕೇಂದ್ರ ಆರೋಗ್ಯ ಸಚಿವ ಡಾ ಮನ್ಶುಖ್​ ಮಾಂಡವಿಯ ಅವರು ರಾಹುಲ್​ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೋವಿಡ್​ನಿಂದ ರಾಜಸ್ಥಾನವನ್ನು ಮತ್ತು ದೇಶವನ್ನು ಕಾಪಾಡುವ ಸಲುವಾಗಿ ಎರಡು ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡುತ್ತಿದ್ದೇನೆ.
1. ಭಾರತ್​ ಜೋಡೋ ಯಾತ್ರೆಯಲ್ಲಿ ಕೋವಿಡ್​ ಮಾರ್ಗಸೂಚಿಗಳ ಪಾಲನೆ ಆಗಬೇಕು. ಮಾಸ್ಕ್​ ಧರಿಸಬೇಕು. ಸ್ಯಾನಿಟೈಸರ್​ ಬಳಕೆ ಮಾಡಬೇಕು. ಲಸಿಕೆ ಪಡೆದವರು ಮಾತ್ರ ಭಾರತ್​ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಈಗಾಗಲೇ ಯಾತ್ರೆಯಲ್ಲಿ ಪಾಲ್ಗೊಂಡವರನ್ನು ಐಸೋಲೇಟ್​ ಮಾಡಬೇಕು.
2. ಒಂದು ವೇಳೆ ಭಾರತ್​ ಜೋಡೋ ಯಾತ್ರೆಯಲ್ಲಿ ಕೋವಿಡ್​ ಮಾರ್ಗಸೂಚಿಯ ಪಾಲನೆ ಸಾಧ್ಯವಾಗದೇ ಇದ್ದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೋವಿಡ್​ ಮಹಾಮಾರಿಯಿಂದ ದೇಶವನ್ನು ರಕ್ಷಿಸುವ ಸಲುವಾಗಿ ಭಾರತ್​ ಜೋಡೋ ಯಾತ್ರೆಯನ್ನು ಸ್ಥಗಿತಗೊಳಿಸುವಂತೆ
ಆರೋಗ್ಯ ಸಚಿವರು ರಾಹುಲ್​ ಗಾಂಧಿ ಅವರಿಗೆ ಮನವಿ ಮಾಡಿ ಡಿಸೆಂಬರ್​ 20ರಂದೇ ಪತ್ರ ಬರೆದಿದ್ದಾರೆ.