ಯಡಿಯೂರಪ್ಪ ಮೆಚ್ಚಿಸಲು ಬೊಮ್ಮಾಯಿ ಸರ್ಕಾರದ ಅವಿವೇಕಿ ನಿರ್ಧಾರ – ವಿಮಾನನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು

ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಮತಗಳು ಕೈ ತಪ್ಪುವ ಆತಂಕದಲ್ಲಿರುವ ಕರ್ನಾಟಕ ಬಿಜೆಪಿ ಈಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮೆಚ್ಚಿಸುವ ಸಲುವಾಗಿ ತೀರಾ ಅವಿವೇಕಿ ನಿರ್ಧಾರವೊಂದನ್ನು ಕೈಗೊಂಡಿದೆ.
ಶಿವಮೊಗ್ಗದಲ್ಲಿ ಹೊಸದಾಗಿ ನಿರ್ಮಾಣ ಆಗಿರುವ ವಿಮಾನನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರನ್ನು ಇಡಲು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ನಿರ್ಧರಿಸಿದೆ.
ವಿಮಾನನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರನ್ನು ಇಡುವ ಸಂಬಂಧ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ವಿಮಾನನಿಲ್ದಾಣಕ್ಕೆ ನಾಮಕರಣ ಸಂಬಂಧ ಪ್ರಸ್ತಾಪವನ್ನು ಪ್ರಧಾನಿ ಮೋದಿ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಶಿವಮೊಗ್ಗದಲ್ಲಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮಾಹಿತಿ ನೀಡಿದ್ದಾರೆ.
ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಆರ್ಶೀವಾದ ಇದ್ದ ಕಾರಣ ಶಿವಮೊಗ್ಗ ಅಭಿವೃದ್ಧಿ ಆಗಿದೆ. ಶಿವಮೊಗ್ಗ ಕರ್ನಾಟಕದ ಭವಿಷ್ಯದ ನಗರಿ. ಶಿವಮೊಗ್ಗ ಏರ್​ಪೋರ್ಟ್​ಗೆ ಯಡಿಯೂರಪ್ಪನವರ ಹೆಸರು ಇಡಲು ನಿರ್ಧಾರ ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಯಡಿಯೂರಪ್ಪ ಅವರ ಹೆಸರು ಇಡಲು ಒಪ್ಪಿಕೊಳ್ಳಲಾಗಿದೆ. ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸುವುದಕ್ಕೆ ಯಡಿಯೂರಪ್ಪನವರು ಬೇಡ ಎಂದರು. ಅಭಿಮಾನಿಗಳ ಪ್ರೀತಿಗೆ ಮನ್ನಣೆ ನೀಡಬೇಕು ಎಂದು ಹೇಳಿದ್ದೇವೆ. ಅಭಿಮಾನದಿಂದ ನಾವು ಯಡಿಯೂರಪ್ಪನವರ ಹೆಸರನ್ನು ಕೇಂದ್ರ ಕಳುಹಿಸುತ್ತೇವೆ
ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ.
ಶಿವಮೊಗ್ಗ ರಾಷ್ಟ್ರಕವಿ ಕುವೆಂಪು, ರೈತ ಹೋರಾಟಗಾರ ಕಡಿದಾಳು ಶಾಮಣ್ಣ, ಸಾಮಾಜಿಕ ಹೋರಾಟಗಾರ ಕಡಿದಾಳ್​ ಮಂಜಪ್ಪರಂತ ಮಹಾನ್​ ವ್ಯಕ್ತಿಗಳನ್ನು ಕೊಟ್ಟ ನಾಡು.
ಆದರೆ ಈಗ ಈ ಕ್ಷಣದ ರಾಜಕೀಯ ಲಾಭಕ್ಕಾಗಿ ಯಡಿಯೂರಪ್ಪ ಅವರನ್ನು ಮೆಚ್ಚಿಸುವ ಸಲುವಾಗಿ ವಿಮಾನನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರನ್ನು ಇಡುತ್ತಿರುವುದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here