BREAKING: ರಾಹುಲ್​ ಗಾಂಧಿ ತತ್​ಕ್ಷಣವೇ ಅನರ್ಹ ಆಗಲ್ಲ – ಕಾರಣ ಏನು ಗೊತ್ತಾ..?

ವರದಿ: ಅಕ್ಷಯ್​ ಕುಮಾರ್​, ಮುಖ್ಯ ಸಂಪಾದಕರು

ಕ್ರಿಮಿನಲ್​ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್​ ನಾಯಕ ತಕ್ಷಣವೇ ಅನರ್ಹರಾಗ್ತಾರಾ..? ಕಾನೂನು ಏನು ಹೇಳುತ್ತದೆ..?

1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್​ 8ರ ಉಪ ಕಲಂ 3ರಡಿಯಲ್ಲಿ:

2 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಒಳಗಾದ ಶಾಸಕ ಅಥವಾ ಸಂಸದರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬಹುದು. ಜೈಲು ಶಿಕ್ಷೆ ಪೂರೈಸಿ ಬಿಡುಗಡೆ ಆದ ಬಳಿಕ ಮುಂದಿನ 6 ವರ್ಷಗಳವರೆಗೆ ಚುನಾವಣೆಗೆ ನಿಲ್ಲದಂತೆ ನಿರ್ಬಂಧ ಹೇರಬಹುದು.

2013ರಲ್ಲಿ ಸುಪ್ರಿಂಕೋರ್ಟ್​ ಐತಿಹಾಸಿಕ ತೀರ್ಪು:

2013ರಲ್ಲಿ ಲಿಲ್ಲಿ ಥಾಮಸ್​ v/s ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಎ ಜೆ ಪಟ್ನಾಯಕ್​ ಮತ್ತು ಎಸ್​ ಜೆ ಮುಖ್ಯೋಪಾಧ್ಯಾಯ ಅವರಿದ್ದ ದ್ವಿಸದದ್ಯ ಪೀಠ ಐತಿಹಾಸಿಕ ತೀರ್ಪು ನೀಡಿತ್ತು.

2 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಒಳಗಾದ ಶಾಸಕರು ಅಥವಾ ಸಂಸದರು ಶಿಕ್ಷೆ ಪ್ರಮಾಣ ಪ್ರಕಟವಾದ ದಿನದಿಂದಲೇ ಅನರ್ಹರಾಗ್ತಾರೆ.

ಈ ತೀರ್ಪಿನ ಪ್ರಕಾರ ರಾಹುಲ್​ ಗಾಂಧಿ ಅವರು ಇವತ್ತಿನಿಂದಲೇ ಸಂಸದ ಸ್ಥಾನ ಕಳೆದುಕೊಳ್ಳುತ್ತಾರೆ, ಅನರ್ಹರಾಗ್ತಾರೆ.

ಅನರ್ಹತೆಯಿಂದ ತಾತ್ಕಾಲಿಕ ವಿನಾಯ್ತಿ:

1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್​ 8ರ ಉಪ ಕಲಂ 4ರ ಅಡಿಯಲ್ಲಿ 2 ವರ್ಷಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಗೊಳಗಾದ ಶಾಸಕರು ಅಥವಾ ಸಂಸದರನ್ನು ಮೂರು ತಿಂಗಳವರೆಗೆ ಅನರ್ಹಗೊಳಿಸುವಂತಿಲ್ಲ.

2013ರ ಪರಿಣಾಮ:

ಆದರೆ 2013ರಲ್ಲಿ ಲಿಲ್ಲಿ ಥಾಮಸ್​ ಪ್ರಕರಣದಲ್ಲಿ ಸುಪ್ರೀಂಕೋರ್ಟ್​​ ಉಪ ಕಲಂ 4ನ್ನು ರದ್ದುಪಡಿಸಿತು.

ಸುಗ್ರೀವಾಜ್ಞೆ ಹರಿದು ಹಾಕಿದ್ದ ರಾಹುಲ್​:

ಸುಪ್ರೀಂಕೋರ್ಟ್​ನ 2013ರ ತೀರ್ಪಿನ ವಿರುದ್ಧ ಮತ್ತು ಉಪ ಕಲಂ 4ನ್ನು ಮತ್ತೆ ಜನಪ್ರತಿನಿಧಿ ಕಾಯ್ದೆಯಲ್ಲಿ ಸೇರ್ಪಡೆಗೊಳಿಸುವ ಸಲುವಾಗಿ ಆಗ ಯುಪಿಎ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೆ ತರಲು ಯತ್ನಿಸಿತು. ಆದರೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್​ ಆ ಸುಗ್ರೀವಾಜ್ಞೆಯನ್ನು ನಾನ್​ಸೆನ್ಸ್​ ಎಂದು ಹೇಳಿ ಹರಿದು ಹಾಕಿದರು.

2018ರ ಸುಪ್ರೀಂಕೋರ್ಟ್​ ತೀರ್ಪು:

2018ರಲ್ಲಿ ಲೋಕಪ್ರಹಾರಿ ಪ್ರಕರಣದಲ್ಲಿ ಈಗ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಆಗಿರುವ ಡಿ ವೈ ಚಂದ್ರಚೂಡ್​ ಅವರಿದ್ದ ಮೂವರು ನ್ಯಾಯಮೂರ್ತಿಗಳ ಪೀಠ:

ಒಂದು ವೇಳೆ ಶಾಸಕರು ಮತ್ತು ಸಂಸದರಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗಿ ಆ ಶಿಕ್ಷೆಯನ್ನು ಕೋರ್ಟ್​ ಅಮಾನತಿನಲ್ಲಿಟ್ಟರೆ ಆಗ ಶಿಕ್ಷೆ ಅಮಾನತಿನಲ್ಲಿರುವ ಅವಧಿಗೆ ಶಿಕ್ಷೆಗೊಳಗಾದ ಅಂತಹ ಶಾಸಕರು ಅಥವಾ ಸಂಸದರನ್ನು ಅನರ್ಹಗೊಳಿಸುವಂತಿಲ್ಲ ಎಂದು ತೀರ್ಪು ನೀಡಿತ್ತು.

ಈ ವರ್ಷದ ಪ್ರಕರಣ:

2019ರ ಲೋಕಸಭಾ ಚುನಾವಣೆಯ ವೇಳೆ ಕೊಲೆ ಯತ್ನ ಪ್ರಕರಣದಲ್ಲಿ ಜನವರಿ 13ರಂದು ಕೆಳ ಹಂತದ ನ್ಯಾಯಾಲಯದ ಲಕ್ಷದ್ವೀಪದ ಎನ್​ಸಿಪಿ ಸಂಸದ ಮೊಹ್ಮದ್​ ಫೈಜಲ್​ ಅವರನ್ನು ದೋಷಿ ಎಂದು ಪರಿಗಣಿಸಿ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಈ ತೀರ್ಪು ಪ್ರಕಟವಾದ ಬಳಿಕ ಜನವರಿ 13ರಿಂದಲೇ ಅನ್ವಯವಾಗುವಂತೆ ಸಂಸದ ಮೊಹಮ್ಮದ್​ ಫೈಜಲ್​ ಅವರನ್ನು ಅನರ್ಹಗೊಳಿಸಿ ಲೋಕಸಭಾ ಕಾರ್ಯಾಲಯ ಅಧಿಸೂಚನೆ ಹೊರಡಿಸಿತ್ತು.

ಸಂಸದ ಫೈಜಲ್​ ಅನರ್ಹತೆಯ ಹಿನ್ನೆಲೆಯಲ್ಲಿ ಜನವರಿಯಲ್ಲೇ ಚುನಾವಣಾ ಆಯೋಗ ಲಕ್ಷದ್ವೀಪಕ್ಕೆ ಉಪ ಚುನಾವಣೆ ಘೋಷಿಸಿತ್ತು.

ಆದರೆ ಕೆಳಹಂತದ ನ್ಯಾಯಾಲಯದ ತೀರ್ಪಿನ ವಿರುದ್ಧ ಫೈಜಲ್​ ಅವರು ಕೇರಳ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ಪುರಸ್ಕರಿಸಿದ ಹೈಕೋರ್ಟ್​ ಫೈಜಲ್​ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಉಪ ಚುನಾವಣೆ ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತು. ಪೆಬ್ರವರಿ 27ರಂದು ನಡೆಯಬೇಕಿದ್ದ ಉಪ ಚುನಾವಣೆಯನ್ನು ಆಯೋಗ ರದ್ದುಗೊಳಿಸಿತು.

ಫೈಜಲ್​ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಅಮಾನತಿನಲ್ಲಿಟ್ಟಿರಲಿಲ್ಲ.

ಆದರೆ ರಾಹುಲ್​ ಗಾಂಧಿ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯವೇ ಶಿಕ್ಷೆಯನ್ನು 30 ದಿನ ಅಮಾನತಿನಲ್ಲಿಟ್ಟಿದೆ, ಮೇಲ್ಮನವಿಗೆ ಅನುಮತಿ ನೀಡಿದೆ.

2018ರ ಸುಪ್ರೀಂಕೋರ್ಟ್​ ತ್ರಿಸದಸ್ಯ ಪೀಠದ ತೀರ್ಪಿನ ಅನ್ವಯ ರಾಹುಲ್​ ಗಾಂಧಿ ತತ್​​ಕ್ಷಣಕ್ಕೆ ಸಂಸದ ಸ್ಥಾನದಿಂದ ಅನರ್ಹರಾಗಲ್ಲ.