ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ಹಾಗೂ ಮಸೀದಿಗಳ ಪ್ರಮುಖರು ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಿಭಟನೆ ಮಾಡಲು ತೀರ್ಮಾನಿಸಿದ್ದರೆ ರದ್ದು ಮಾಡಿ ಎಂದು ಸೂಚನೆ ನೀಡಿದ್ದಾರೆ.
ಕಳೆದ ವಾರ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದಿದ್ದವು. ಈ ಗಲಾಟೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಅಲ್ಲದೇ, ಪೊಲೀಸರು ಸೇರಿದಂತೆ 30 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಇಸ್ಲಾಂ ಧರ್ಮವನ್ನು ಯಾರೇ ಅವಮಾನ ಮಾಡಿದ್ದರೂ ಮುಸ್ಲಿಮರೆಲ್ಲ ಒಟ್ಟಾಗಿ ಪ್ರತಿಭಟಿಸುವುದು ಎಲ್ಲರ ಕರ್ತವ್ಯವಾಗಿದೆ. ಆದರೆ, ಅದೇ ಸಂದರ್ಭದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ದೇಶಾದ್ಯಂತ ಕಾರ್ಯನಿರ್ವಹಿಸುವ ಜಮಾತೆ ಇ ಇಸ್ಲಾಂ ಹಿಂದ್ ಸಂಘಟನೆಯ ಹಿರಿಯ ಸದಸ್ಯ ಮಲೀಕ್ ಅಸ್ಲಾಂ ಹೇಳಿದ್ದಾರೆ.
ಕಳೆದ ತಿಂಗಳ ಕೊನೆಯ ವಾರದಲ್ಲಿ ಬಿಜೆಪಿಯ ಇಬ್ಬರು ವಕ್ತಾರರು, ಪ್ರವಾದಿ ಮೊಹಮ್ಮದ್ ಅವರನ್ನು ವಾಹಿನಿಯ ಚರ್ಚೆಯೊಂದರಲ್ಲಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಇಬ್ಬರನ್ನು ಬಿಜೆಪಿ ಅಮಾನತು ಮಾಡಿದೆ.
ಇದೇ ಜೂನ್ 10 ರಂದು ಶುಕ್ರವಾರದ ಪ್ರಾರ್ಥನೆ ಮುಗಿದ ಬಳಿಕ ದೇಶಾದ್ಯಂತ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಕೆಲವೆಡೆ ಹಿಂಸಾಚಾರಕ್ಕೆ ತಿರುಗಿತ್ತು. ಇದೀಗ, ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು 400 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ, ದೇಶಾದ್ಯಂತ ಮುಸ್ಲಿಂ ಸಮುದಾಯ ಏಕಾಏಕಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು ಮತ್ತು ಈ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದಿರುವುದರ ಬಗ್ಗೆ ಹಲವು ಸಮುದಾಯಗಳಿಂದ ಆಕ್ಷೇಪ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಜಮಾತ್ ಎ ಇಸ್ಲಾಂ ಹಿಂದ್ ಸಂಘಟನೆ ಗುಂಪು ಸೇರಿ ಪ್ರತಿಭಟನೆ ಮಾಡದಂತೆ ಮುಸ್ಲಿಂ ಸಮುದಾಯಕ್ಕೆ ಸೂಚನೆ ನೀಡಿದೆ.