ADVERTISEMENT
ಕಳೆದ ವರ್ಷ ಪಂಜಾಬ್ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಆಗಿದ್ದ ಲೋಪ ಸಂಬಂಧ ಪಂಜಾಬ್ನ ಆಮ್ ಆದ್ಮಿ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಧರಿಸಿದೆ.
ಪಂಜಾಬ್ ರಾಜ್ಯದ ಪೊಲೀಸ್ ಇಲಾಖೆ ಮುಖ್ಯಸ್ಥರಾಗಿದ್ದ ನಿವೃತ್ತ ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ, ಫಿರೋಜ್ಪುರ್ ವಲಯದ ಡಿಐಜಿ ಇಂದೆರ್ಬಿರ್ ಸಿಂಗ್, ಫಿರೋಜ್ಫುರ್ ಎಸ್ಎಸ್ಪಿ ಆಗಿದ್ದ ಹರ್ಮನ್ದೀಪ್ ಸಿಂಗ್ ಹನ್ಸ್ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯದ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಸಿಬ್ಬಂದಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ತನಿಖಾ ಸಮಿತಿ ಶಿಫಾರಸ್ಸಿನಂತೆ ನಿಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮಗಳನ್ನು ಕೈಗೊಳ್ಳಬಾರದು ಎಂದು ಕೇಳಿ ಇತರೆ ಆರು ಮಂದಿ ಅಧಿಕಾರಿಗಳಿಗೂ ಗೃಹ ಇಲಾಖೆ ನೋಟಿಸ್ ಜಾರಿ ಮಾಡಿದೆ.
ತನಿಖಾ ಸಮಿತಿಯ ವರದಿ ಬಳಿಕವೂ ಪಂಜಾಬ್ ಸರ್ಕಾರ ಕ್ರಮಕ್ಕೆ ವಿಳಂಬ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಗೃಹ ಸಚಿವಾಲಯ ಕಳೆದ ವಾರ ಪಂಜಾಬ್ನ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿತ್ತು. ಒಂದು ವೇಳೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳದೇ ಹೋದರೆ ವಿಶೇಷ ಭದ್ರತಾ ತಂಡ ಕಾಯ್ದೆ (SPG ACT) ಅಡಿಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೇಂದ್ರ ಸರ್ಕಾರವೇ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿತ್ತು.
ಪಂಜಾಬ್ ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲು ಜನವರಿ 5ರಂದು ಪ್ರಧಾನಿ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಿದ್ದರು.
ಜನವರಿ 5ರಂದು ಭಟಿಂಡಾ ವಿಮಾನನಿಲ್ದಾಣದಿಂದ ಫಿರೋಜ್ಪುರ್ಗೆ ರಸ್ತೆ ಮಾರ್ಗದಲ್ಲಿ ಸಂಚರಿಸುವ ವೇಳೆ ಮೇಲ್ಸುತೆಯಲ್ಲಿ ಅರ್ಧಗಂಟೆ ಸಿಲುಕೊಂಡಿತ್ತು. ಮೇಲ್ಸುತೆಯ ಒಂದು ತುದಿಯಲ್ಲಿ 300 ಮಂದಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಹೀಗಾಗಿ ಪ್ರಧಾನಿ ಮೋದಿಯವರು ವಾಪಸ್ ತೆರಳಬೇಕಾಯಿತು.
ಪ್ರಧಾನಿಯವರ ಭದ್ರತಾ ಲೋಪ ಸಂಬಂಧ ತನಿಖೆ ನಡೆಸುವ ಸಂಬಂಧ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಕಳೆದ ವರ್ಷದ ಆಗಸ್ಟ್ನಲ್ಲಿ ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲಾಗಿತ್ತು.
ADVERTISEMENT