Union Budget: ಮೋದಿ ಸರ್ಕಾರದಿಂದ ರಸಗೊಬ್ಬರ, ಆಹಾರ ಸಬ್ಸಿಡಿಯಲ್ಲಿ ಭಾರೀ ಕಡಿತ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇವತ್ತು ಮಂಡನೆ ಆದ ತನ್ನ ಬಜೆಟ್​ನಲ್ಲಿ ಪ್ರಮುಖ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿದೆ.

ಅದರಲ್ಲೂ ಪ್ರಧಾನಿ ಕಿಸಾನ್​ ಸಮ್ಮಾನ್​ ನಿಧಿ, ರಸಗೊಬ್ಬರ ಸಹಾಯಧನ, ನರೇಗಾ ಯೋಜನೆಗೆ ಅನುದಾನ ಕಡಿತಗೊಳಿಸಲಾಗಿದೆ.

ಕಳೆದ ಬಾರಿ ಯೂರಿಯಾ ಸಬ್ಸಿಡಿ ಮೊತ್ತವನ್ನು 1 ಲಕ್ಷದ 54 ಸಾವಿರದ 97 ಕೋಟಿ ರೂಪಾಯಿಗೆ ಕಡಿತಗೊಳಿಸಲಾಗಿತ್ತು. ಈ ಬಾರಿ ಈ ಮೊತ್ತವನ್ನು 1ಲಕ್ಷದ 31 ಸಾವಿರದ 100 ಕೋಟಿ ರೂಪಾಯಿಗೆ ಇಳಿಸಲಾಗಿದೆ. ಅಂದರೆ ಸಬ್ಸಿಡಿ ಮೊತ್ತ ಸುಮಾರ 23 ಸಾವಿರ ಕೋಟಿ ರೂಪಾಯಿಯಷ್ಟು ಇಳಿಕೆ ಆಗಿದೆ.

ಪೌಷ್ಠಿಕಾಂಶ ಆಧಾರಿತ ಸಬ್ಸಿಡಿ ಮೊತ್ತವನ್ನೂ ಕಡಿತಗೊಳಿಸಲಾಗಿದೆ. ಕಳೆದ ಬಜೆಟ್​ನಲ್ಲಿ 71,122 ಕೋಟಿ ರೂಪಾಯಿ ಮೊತ್ತವನ್ನು ಸಬ್ಸಿಡಿಗೆ ಮೀಸಲಿಡಲಾಗಿತ್ತು. ಆದರೆ ಈ ಬಾರಿ ಈ ಮೊತ್ತವನ್ನು ಸರಿಸುಮಾರು ಅರ್ಧದಷ್ಟು ಅಂದರೆ 44,000 ಕೋಟಿ ರೂಪಾಯಿಗೆ ಇಳಿಸಲಾಗಿದೆ.

ಸ್ಟಾರ್ಟ್​​ ಅಪ್​ ಇಂಡಿಯಾ ಯೋಜನೆಗೆ ಕಳೆದ ಬಾರಿ 44 ಕೋಟಿ ರೂಪಾಯಿ ನೀಡಲಾಗಿತ್ತು. ಈ ಬಾರಿ ಆ ಮೊತ್ತ 30 ಕೋಟಿಗೆ ಇಳಿಕೆ ಆಗಿದೆ.

ಆಹಾರ ಭದ್ರತೆ ಅಡಿಯಲ್ಲಿ ಆಹಾರ ನಿಗಮಗಳಿಗೆ ನೀಡಲಾಗುತ್ತಿದ್ದ ಮೊತ್ತವನ್ನು 1 ಲಕ್ಷದ 37 ಸಾವಿರದ 207 ಕೋಟಿ ರೂಪಾಯಿಗೆ ಇಳಿಸಲಾಗಿದೆ. ಕಳೆದ ಬಾರಿ ಈ ಮೊತ್ತ 2 ಲಕ್ಷದ 14 ಸಾವಿರದ 696 ಕೋಟಿ ರೂಪಾಯಿ ಆಗಿತ್ತು.

ಆಹಾರ ಭದ್ರತೆ ಕಾಯ್ದೆಯಡಿ ಧಾನ್ಯಗಳ ವಿಕೇಂದ್ರೀಕೃತ ಖರೀದಿಗೆ ನೀಡಲಾಗುವ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಕಳೆದ ಬಾರಿ 72 ಸಾವಿರದ 282 ಕೋಟಿ ರೂಪಾಯಿ ಮೊತ್ತ ಮೀಸಲಿರಿಸಲಾಗಿತ್ತು. ಈ ಬಾರಿ 59,973 ಕೋಟಿ ರೂಪಾಯಿಗೆ ಇಳಿಸಲಾಗಿದೆ.

ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಕಳೆದ ಬಾರಿ 11,868 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಆದರೆ ಈ ಬಾರಿ ಆ ಮೊತ್ತ 8,820 ಕೋಟಿ ರೂಪಾಯಿಗೆ ಇಳಿಕೆ ಆಗಿದೆ.

ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಗೆ ಕಳೆದ ಬಾರಿ 8,269 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ ಈ ಬಜೆಟ್​ನಲ್ಲಿ ಆ ಮೊತ್ತವನ್ನು 3,365 ಕೋಟಿ ರೂಪಾಯಿಗೆ ಇಳಿಸಲಾಗಿದೆ.

ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯಡಿ ರೈತರ ಖಾತೆಗಳಿಗೆ ಜಮೆ ಮಾಡಲಾಗುವ ಮೊತ್ತವನ್ನು 60 ಸಾವಿರ ಕೋಟಿ ರೂಪಾಯಿಗೆ ಮಿತಿಗೊಳಿಸಲಾಗಿದೆ.

ಈ ಬಾರಿ ರಾಷ್ಟ್ರೀಯ ಜೇನುಕೃಷಿ ಯೋಜನೆಗೆ ಅನುದಾನ ಸಿಕ್ಕಿಲ್ಲ.

 

LEAVE A REPLY

Please enter your comment!
Please enter your name here