ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ, ಗಣಿ ಉದ್ಯಮಿ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ವಾಪಸ್ ಆಗಲಿದ್ದಾರೆ.
ಜನಾರ್ದನ ರೆಡ್ಡಿ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವ ಸಂಬಂಧ ಬಿಜೆಪಿ ರಾಷ್ಟ್ರೀಯ ನಾಯಕರ ಮಟ್ಟದಲ್ಲೇ ಮಾತುಕತೆ ನಡೆದಿದೆ.
ರೆಡ್ಡಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ರಾಷ್ಟ್ರೀಯ ನಾಯಕರು ಮನಸ್ಸು ಮಾಡಿದ್ದಾರೆ.
ಚುನಾವಣೆ ನಂತರವೋ..? ಮೊದಲೋ..?
ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ಖಚಿತ. ಆದರೆ ಆ ಘಟನಾವಳಿ ಚುನಾವಣೆಗೂ ಮೊದಲೋ..? ಅಥವಾ ಚುನಾವಣೆ ನಂತರವೋ ಎನ್ನುವುದಷ್ಟೇ ಪ್ರಶ್ನೆ.
ಜನಾರ್ದನ ರೆಡ್ಡಿ ತಮ್ಮದೇ ಹೊಸ ಪಕ್ಷ ಕಲ್ಯಾಣ ಕರ್ನಾಟಕ ಕ್ರಾಂತಿ ಪಕ್ಷವನ್ನು ರಚಿಸಿದ್ದಾರೆ. ಕರ್ನಾಟಕದಲ್ಲಿ 31 ವಿಧಾನಸಭಾ ಕ್ಷೇತ್ರಗಳಲ್ಲಿ ರೆಡ್ಡಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಇವುಗಳಲ್ಲಿ ಕನಿಷ್ಠ 21 ಸೀಟುಗಳನ್ನು ಗೆಲ್ಲುವುದು ರೆಡ್ಡಿ ಗುರಿ.
ರೆಡ್ಡಿ ಪಕ್ಷ ಸ್ಥಾಪನೆ ಹಿಂದೆ ಬಿಜೆಪಿಯದ್ದೇ ರಣತಂತ್ರ:
ಗಣಿ ಹಗರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ರೆಡ್ಡಿ ಬಿಜೆಪಿಯನ್ನು ಎದುರುಹಾಕಿಕೊಂಡು ಹೊಸ ಪಕ್ಷ ಸ್ಥಾಪಿಸಲು ಸಾಧ್ಯವೇ ಇಲ್ಲ. ಮಾಹಿತಿಗಳ ಪ್ರಕಾರ ರೆಡ್ಡಿ ಹೊಸ ಪಕ್ಷದ ಸ್ಥಾಪನೆ ಹಿಂದೆ ಇರುವುದೇ ಬಿಜೆಪಿ ಲೆಕ್ಕಾಚಾರ.
ರೆಡ್ಡಿ ಪಕ್ಷದಿಂದ ಕಾಂಗ್ರೆಸ್ನ ಮತ ಬ್ಯಾಂಕ್ಗೆ ಹಿನ್ನಡೆ ಆಗಬಹುದು ಮತ್ತು ಬಿಜೆಪಿಗೆ ಲಾಭ ಮಾಡಿಕೊಡಬಹುದು ಬಿಜೆಪಿಯ ಲೆಕ್ಕಾಚಾರ.
ಬಿಜೆಪಿ ನಾಲ್ಕು ತಂತ್ರ:
1) ಯಡಿಯೂರಪ್ಪ ಅವರ ಕಡೆಗಣನೆಯಿಂದ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಲಿಂಗಾಯತ ಮತಗಳನ್ನು ಕಾಂಗ್ರೆಸ್ಗೆ ಹೋಗದಂತೆ ತಡೆಯುವುದು. ಇದಕ್ಕೆ ಪೂರಕವಾಗಿ ರೆಡ್ಡಿ ಯಡಿಯೂರಪ್ಪ ಅವರನ್ನು ಹೊಗಳಿದ್ದಾರೆ.
2) ಕಾಂಗ್ರೆಸ್ ನಿಷ್ಠ ಮುಸಲ್ಮಾನ ಮತಗಳನ್ನು ವಿಭಜಿಸುವುದು
3) ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಮತಗಳನ್ನು ವಿಭಜಿಸುವ ಪ್ರಮುಖ ಹೊಣೆ ರೆಡ್ಡಿ ಪಕ್ಷದ್ದು.
4) ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಎ ಆಗಬಹುದಾದ ಹಿನ್ನಡೆಯನ್ನು ತಪ್ಪಿಸುವುದು.
ಬಿಜೆಪಿಗೆ ಇರುವ ಆತಂಕ:
ಆದರೆ ಒಂದು ವೇಳೆ ಲೆಕ್ಕಾಚಾರ ತಲೆಕೆಳಾಗಿ ರೆಡ್ಡಿ ಪಕ್ಷದಿಂದ ಬಿಜೆಪಿಯ ಮತಗಳೇ ವಿಭಜನೆ ಆದರೆ ತಿರುಗುಬಾಣವಾಗಬಹುದು ಎಂಬ ಆತಂಕವನ್ನು ಪಕ್ಷದ ರಾಷ್ಟ್ರೀಯ ನಾಯಕರಿಗೂ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರೆಡ್ಡಿ ಅವರನ್ನು ಮತ್ತೆ ಬಿಜೆಪಿಗೆ ವಾಪಸ್ ಕರೆಸಿಕೊಳ್ಳೋಣ ಎಂಬ ಸಲಹೆ ಮೇರೆಗೆ ರೆಡ್ಡಿ ಜೊತೆಗೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಡಕತ್ತರಿಯಲ್ಲಿ ಬಿಜೆಪಿ:
ಆದರೆ ರೆಡ್ಡಿ ಅವರನ್ನು ಬಿಜೆಪಿಗೆ ಮತ್ತೆ ಸೇರ್ಪಡೆ ಮಾಡಿಕೊಳ್ಳುವುದರ ಬಗ್ಗೆ ಪಕ್ಷದಲ್ಲೇ ಗೊಂದಲ ಇದೆ.
ಕಾರಣ ರೆಡ್ಡಿ ಅವರನ್ನು ಮತ್ತೆ ಪಕ್ಷಕ್ಕೆ ಬರಮಾಡಿಕೊಂಡರೆ ಗಣಿ ಹಗರಣದ ಆರೋಪಿಗೆ ಮಣೆ ಹಾಕಿದರು ಎಂಬ ಕಳಂಕ, ರೆಡ್ಡಿಗಳ ಹಿಡಿತಕ್ಕೆ ಬಿಜೆಪಿ ಹೋಗುತ್ತದೆ ಮತ್ತು ಮತ್ತೆ 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಇದ್ದಂತೆ ರೆಡ್ಡಿಗಳ ಅಬ್ಬರ ಶುರುವಾಗುತ್ತೆ ಎಂಬ ಜನಾಭಿಪ್ರಾಯ ಮೂಡಿ ಚುನಾವಣೆಯಲ್ಲಿ ಹಿನ್ನಡೆ ಆಗಬಹುದು ಎಂಬ ಆತಂಕ ಬಿಜೆಪಿಯದ್ದು.
ಈ ಹಿನ್ನೆಲೆಯಲ್ಲಿ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಚುನಾವಣೆಗೆ ಮೊದಲೋ ಅಥವಾ ಚುನಾವಣೆ ನಂತರವೋ ಎಂಬ ಗೊಂದಲದಲ್ಲಿ ಬಿಜೆಪಿಯಿದೆ.
ADVERTISEMENT
ADVERTISEMENT