ನಾಳೆ ಮಧ್ಯಾಹ್ನ 1 ಗಂಟೆಯಿಂದ ಉಚಿತ ಬಸ್​ ಪ್ರಯಾಣ ಯೋಜನೆ ಜಾರಿ

KSRTC
KSRTC
ಕಾಂಗ್ರೆಸ್​ ಸರ್ಕಾರದ ಬಹು ನಿರೀಕ್ಷಿತ ಮಹಿಳೆಯರಿಗೆ ಉಚಿತ ಬಸ್​ ಪಾಸ್​ ಯೋಜನೆ ನಾಳೆಯಿಂದ ಜಾರಿ ಆಗಲಿದೆ. 
ಮದ್ಯಾಹ್ನ 1 ಗಂಟೆಯ ಬಳಿಕ ಯೋಜನೆ ಜಾರಿ:
ನಾಳೆ ಅಂದರೆ ಜೂನ್​ 11ರ ಮಧ್ಯಾಹ್ನ 1 ಗಂಟೆಯ ಬಳಿಕ ಶಕ್ತಿ ಯೋಜನೆ ಜಾರಿಯಾಗಲಿದೆ. ಅಂದರೆ ನಾಳೆ ಮಧ್ಯಾಹ್ನ 1 ಗಂಟೆಯವರೆಗೆ ಸರ್ಕಾರಿ ಬಸ್​ಗಳಲ್ಲಿ ಓಡಾಡುವ ಮಹಿಳಾ ಪ್ರಯಾಣಿಕರು ದುಡ್ಡುಕೊಟ್ಟು ಓಡಾಡಬೇಕು.
ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆ ಉದ್ಘಾಟಿಸಿದ ಮರುಕ್ಷಣವೇ ಉಚಿತ ಪ್ರಯಾಣದ ಯೋಜನೆ ಜಾರಿಯಾಗಲಿದೆ.
ನಾಳೆ ಬೆಂಗಳೂರಿನ ಕೆಂಪೇಗೌಡ ಬಸ್​ ನಿಲ್ದಾಣದಿಂದ ಹೊರಡುವ ಬಸ್​ನಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್​ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ.
ವಿದ್ಯಾರ್ಥಿಗಳಿಗೆ ಬಸ್​ ಪಾಸ್​ ಬೇಕಿಲ್ಲ:
ಕರ್ನಾಟಕ ರಾಜ್ಯದ ನಿವಾಸಿಗಳಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣದ ಲಾಭ ಸಿಗಲಿದೆ.
ಅಂದರೆ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿನಿಯರು ಬಸ್​ ಪಾಸ್​ ಮೊತ್ತವನ್ನು ಇನ್ಮುಂದೆ ಕಟ್ಟಬೇಕಾದ ಅಗತ್ಯವಿರಲ್ಲ. ಅವರೂ ಕೂಡಾ ಉಚಿತವಾಗಿಯೇ ಓಡಾಡಬಹುದು.
ಬಿಎಂಟಿಸಿ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ ಮತ್ತು ವೇಗದೂತ ಸಾರಿಗೆ (Express) ಬಸ್​ಗಳಲ್ಲಿ ಮಹಿಳೆಯರು ರಾಜ್ಯಾದ್ಯಂತ ಓಡಾಡಬಹುದು.
ಎಸಿ ಸ್ಲೀಪರ್​, ನಾನ್​ ಎಸಿ ಸ್ಲೀಪರ್​, ರಾಜಹಂಸ, ವಜ್ರ, ವಾಯುವಜ್ರ, ಅಂಬಾರಿ ಒಳಗೊಂಡಂತೆ ಐಷಾರಾಮಿ ಬಸ್​ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಇಲ್ಲ.
ಮಹಿಳಾ ಪ್ರಯಾಣಿಕರಿಗೆ ರಾಜ್ಯದೊಳಗೆ ಪ್ರಯಾಣಿಸಲು ದೂರದ ಮಿತಿ ಇರುವುದಿಲ್ಲ.
ಅಂತಾರಾಜ್ಯ ಬಸ್​ಗಳಲ್ಲಿ (ಹೊರರಾಜ್ಯಕ್ಕೆ ಹೋಗುವ ಬಸ್​ಗಳಲ್ಲಿ) ಉಚಿತ ಪ್ರಯಾಣಕ್ಕೆ ಅವಕಾಶವಿರಲ್ಲ.
ವಾಸಸ್ಥಳದ ದಾಖಲೆಗಾಗಿ ಅಧಾರ್​ ಕಾರ್ಡ್​ ಅಥವಾ ಗುರುತಿನ ಚೀಟಿ ಅಥವಾ ಡ್ರೈವಿಂಗ್​ ಲೈಸನ್ಸ್​​ ಅಥವಾ ಸರ್ಕಾರ ನೀಡಿರುವ ಇತರೆ ಗುರುತಿನ ಚೀಟಿಗಳನ್ನು ತೋರಿಸಬಹುದು.
ಮಹಿಳಾ ಪ್ರಯಾಣಿಕರು ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ ಮೂರು ತಿಂಗಳೊಳಗೆ ಶಕ್ತಿ ಸ್ಮಾರ್ಟ್​ ಪಡೆಯಬೇಕು. ಅಲ್ಲಿಯವರೆಗೆ ಇತರೆ ಗುರುತಿನ ಚೀಟಿಯನ್ನು ಬಳಸಲು ಅವಕಾಶ ನೀಡಲಾಗಿದೆ.