ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಟೆಂಡರ್ ಹಗರಣದಲ್ಲಿ ಮೊದಲ ಅರೋಪಿಯಾಗಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸರು ಲುಕ್ಔಟ್ ನೋಟಿಸ್ ಹೊರಡಿಸಿದ್ದಾರೆ.
ಮಾರ್ಚ್ 2ರಂದು ಟೆಂಡರ್ ಮಂಜೂರಾತಿ ಸಂಬಂಧ ಪ್ರಶಾಂತ್ ಮಾಡಾಳು ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಬಳಿಕ ಹಗರಣದಲ್ಲಿ ಮೊದಲ ಆರೋಪಿಯಾಗಿರುವ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಶಾಸಕ ಮಾಡಾಳು ಪತ್ತೆಗಾಗಿ ಲುಕೌಟ್ ನೋಟಿಸ್ ಹೊರಡಿಸಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿ ದೇಶ ಬಿಟ್ಟು ಹೋಗದಂತೆ ಎಚ್ಚರವಹಿಸುವ ಸಲುವಾಗಿ ಮತ್ತು ಆ ಆರೋಪಿ ಓಡಾಟದ ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಸೂಚಿಸುವ ಸಲುವಾಗಿ ತನಿಖಾ ಸಂಸ್ಥೆಗಳು ಹೊರಡಿಸುವ ನೋಟಿಸೇ ಲುಕೌಟ್ ನೋಟಿಸ್.
ದೇಶದ ಎಲ್ಲ ವಿಮಾನನಿಲ್ದಾಣಗಳು, ಬಂದರುಗಳಿಗೆ ಲುಕೌಟ್ ನೋಟಿಸ್ನ್ನು ರವಾನಿಸಲಾಗುತ್ತದೆ. ಒಂದು ವೇಳೆ ಲುಕೌಟ್ ನೋಟಿಸ್ ಎದುರಿಸುತ್ತಿರುವ ಆರೋಪಿ ಪತ್ತೆ ಆದಲ್ಲಿ ವಲಸೆ ಅಧಿಕಾರಿಗಳಿಗೆ ಆತನನ್ನು ಬಂಧಿಸುವ ಅಧಿಕಾರವಿತರುತ್ತದೆ.
ಬಳಿಕ ಆತನನ್ನು ಸಂಬಂಧಿಸಿದ ತನಿಖಾ ಸಂಸ್ಥೆಗೆ ಹಸ್ತಾಂತರ ಮಾಡಲಾಗುತ್ತದೆ.
ಆರೋಪಿತನ ಪತ್ತೆಗೆ ಅಗತ್ಯವಾಗಿರುವ ಆರೋಪಿತನ ಚಹರೆಯ ಬಗ್ಗೆ ಮೂರು ಮಾಹಿತಿಗಳನ್ನು ಲುಕೌಟ್ ನೋಟಿಸ್ನಲ್ಲಿ ಉಲ್ಲೇಖ ಮಾಡಲಾಗುತ್ತದೆ.
ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಲುಕೌಟ್ ನೋಟಿಸ್ ಜಾರಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಒಂದು ಬಾರಿ ಹೊರಡಿಸಲಾದ ಲುಕೌಟ್ ನೋಟಿಸ್ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ. ಒಂದು ವೇಳೆ ಅದಕ್ಕೂ ಮೊದಲೇ ಆರೋಪಿ ಬಂಧಿತನಾದ್ದಲ್ಲಿ ಆ ಲುಕೌಟ್ ನೋಟಿಸ್ನ್ನು ಹಿಂಪಡೆಯಬಹುದು.
ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ:
ಟೆಂಡರ್ ಹಗರಣದಲ್ಲಿ ಮೊದಲ ಆರೋಪಿ ಆಗಿರುವ, ತಲೆಮರೆಸಿಕೊಂಡಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಕರ್ನಾಟಕ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ನಾಳೆ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ.
ADVERTISEMENT
ADVERTISEMENT