ADVERTISEMENT
ಅಕ್ಷಯ್ ಕುಮಾರ್ ಉಪ್ಪಡುಕುಕ್ಕು -ಮುಖ್ಯ ಸಂಪಾದಕರು, ಪ್ರತಿಕ್ಷಣ ನ್ಯೂಸ್
ಬಂಟ್ವಾಳ ವಿಧಾನಸಭಾ ಕ್ಷೇತ್ರ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಇದು ಕಾಂಗ್ರೆಸ್ ಭದ್ರಕೋಟೆ. ಮಾಜಿ ಸಚಿವ ರಮಾನಾಥ್ ರೈ ಅವರ ವೈಯಕ್ತಿಕ ವರ್ಚಸ್ಸು, ಪ್ರಭಾವ ಹೊಂದಿರುವ ಕ್ಷೇತ್ರ.
1985ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ರಮಾನಾಥ್ ರೈ ಅವರು ಆ ಬಳಿಕ 1989, 1994, 1999ರಲ್ಲಿ ನಿರಂತರವಾಗಿ ಗೆದ್ದು ವಿಧಾನಸೌಧ ಪ್ರವೇಶಿಸಿದರು.
ರಮಾನಾಥ್ ರೈ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಸೋಲಾಗಿದ್ದು 2004ರಲ್ಲಿ. ಸಮ್ಮಿಶ್ರ ಸರ್ಕಾರ ರಚನೆಗೆ ಕಾರಣವಾಗಿದ್ದ 2004ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ನಾಗರಾಜ್ ಶೆಟ್ಟಿ ಅವರು ಬಿಜೆಪಿಯಿಂದ ಗೆದ್ದು ಮೊದಲ ಬಾರಿಗೆ ಬಂಟ್ವಾಳ ಶಾಸಕರಾದರು.
ಆದರೆ 2008ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಸ್ವತಂತ್ರವಾಗಿ ಸರ್ಕಾರ ರಚಿಸಲು ಕಾರಣವಾಗಿದ್ದ ಚುನಾವಣೆಯಲ್ಲಿ ಬಿಜೆಪಿಗೆ ಬಂಟ್ವಾಳದಲ್ಲಿ ಸೋಲಾಯಿತು. ಮತ್ತೆ ರಮಾನಾಥ್ ರೈ ಅವರೇ ಗೆದ್ದರು. 2013ರಲ್ಲೂ ಸತತ ಎರಡನೇ ಬಾರಿಯೂ ಗೆದ್ದು ರೈ ಅವರೇ ಶಾಸಕರಾದರು.
ಆದರೆ 2018ರ ಚುನಾವಣೆಯಲ್ಲಿ ಬಂಟ್ವಾಳದಲ್ಲಿ ಮತ್ತೆ ಬಿಜೆಪಿ ಗೆಲ್ತು, ಕಾಂಗ್ರೆಸ್ ಸೋಲ್ತು. ಆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಹೊಸ ಮುಖವನ್ನು ಪರಿಚಯಿಸಿತು, ಅವರೇ ಉಳಿಪ್ಪಾಡಿ ರಾಜೇಶ್ ನಾಯ್ಕ್. ಕಳೆದ ಚುನಾವಣೆಯಲ್ಲಿ ರಾಜೇಶ್ ನಾಯಕ್ 15,971 ಮತಗಳಿಂದ ರಮಾನಾಥ್ ರೈ ಅವರ ವಿರುದ್ಧ ಗೆದ್ದು ಮೊದಲ ಬಾರಿಗೆ ಶಾಸಕರಾದರು.
2018ರಲ್ಲಿ ಬಂಟ್ವಾಳದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದ ಅಂಶಗಳು:
1. ಆಡಳಿತ ವಿರೋಧಿ ಅಲೆ:
ಸಿದ್ದರಾಮಯ್ಯನವರ ಸರ್ಕಾರ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆ
2. ಹಿಂದೂ ಕಾರ್ಯಕರ್ತರ ಕೊಲೆ:
ಬಂಟ್ವಾಳದಲ್ಲಿ ನಡೆದಿದ್ದ ಶರತ್ ಮಡಿವಾಳ, ಹರೀಶ್ ಪೂಜಾರಿ ಕೊಲೆಯನ್ನು ಮುಂದಿಟ್ಟುಕೊಂಡು ಹಿಂದೂಗಳಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ರಕ್ಷಣೆ ಇಲ್ಲ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿ ಹಿಂದೂ ಮತಗಳ ಕ್ರೋಢೀಕರಣ ಮಾಡುವಲ್ಲಿ ಯಶಸ್ವಿ ಆಯಿತು.
3. ಕಲ್ಲಡ್ಕ ಪ್ರಭಾಕರ್ ವಿದ್ಯಾಕೇಂದ್ರದ ವಿವಾದ:
ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುತ್ತಿರುವ ಶ್ರೀರಾಮಕೇಂದ್ರಕ್ಕೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಿಂದ ದತ್ತಿ ಕೇಂದ್ರದಿಂದ ನೀಡಲಾಗುತ್ತಿದ್ದ ಅನುದಾನವನ್ನು ಆಗಿನ ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿದ್ದನ್ನು ಬಿಜೆಪಿ ಮತ್ತು ಆರ್ಎಸ್ಎಸ್ ಹಿಂದೂ ವಿರೋಧಿ ನಡೆ ಎಂದು ಬಣ್ಣಿಸಿ ಮತ ಸೆಳೆಯಲು ಬಳಸಿಕೊಂಡವು. ಯಶಸ್ವಿ ಆದವು.
4. ವಿವಾದಾತ್ಮಕ ಮಾತುಗಳು:
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ್ ರೈ ಅವರು ಆಡಿದ್ದ ವಿವಾದಾತ್ಮಕ ಮಾತುಗಳು ಅವರಿಗೆ ಕ್ಷೇತ್ರದಲ್ಲಿ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.
5. ಪೂಜಾರಿ ಅವರ ಆಪ್ತ ಬಿಜೆಪಿಗೆ ಹೋಗಿದ್ದು:
ಕರಾವಳಿ ಕಾಂಗ್ರೆಸ್ ರಾಜಕೀಯ ಮುತ್ಸದಿ ಜನಾರ್ದನ ಪೂಜಾರಿ ಅವರು 2018ರ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದು ಮತ್ತು ಅವರ ಆಪ್ತ ವಲಯದಲ್ಲಿದ್ದ ಹರಿಕೃಷ್ಣ ಬಂಟ್ವಾಳ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ವಾಲಿದ್ದು ಕೂಡಾ ಬಿಜೆಪಿಗೆ ಲಾಭ ಆಗಿತ್ತು.
6. ಪೊಳಲಿ ದೇವಸ್ಥಾನ ಕೊಡಿಮರ ವಿಷಯ:
ಪೊಳಲಿ ದೇವಸ್ಥಾನದ ಕೊಡಿಮರವನ್ನು ಆಗ ಅರಣ್ಯ ಸಚಿವ ರಮನಾಥ್ ರೈ ಅವರು ಮಾಡಿಸಿಕೊಟ್ಟಿದ್ದರು. ಆದರೆ ಅದಕ್ಕೆ ಸರ್ಕಾರಕ್ಕೆ 21 ಲಕ್ಷ ರೂಪಾಯಿ ಕಟ್ಟಬೇಕಾಗಿತ್ತು. ಕಾಂಗ್ರೆಸ್ ಸರ್ಕಾರ ಬಿಲ್ಲವರಿಂದ ದುಡ್ಡು ಕಟ್ಟಿಸಿಕೊಂಡಿತು ಎಂದು ಕೊನೆ ಕ್ಷಣದಲ್ಲಿ ಹಬ್ಬಿಸಿ ಬಿಜೆಪಿ ಮತ ಅಸ್ತ್ರವಾಗಿ ಬಳಸಿಕೊಂಡಿತ್ತು.
ಏನಾಗಬಹುದು..?
ಈ ಬಾರಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಬಹುದು ಎನ್ನುವ ಅಂದಾಜಿದೆ.
ಹಾಲಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸೋಲು ಖಚಿತ ಎನ್ನುವ ಅಭಿಪ್ರಾಯ ಈ ಕ್ಷೇತ್ರದ ಜನರದ್ದು.
ಕಳೆದ ಬಾರಿ ಸೋತಿದ್ದ ರಮಾನಾಥ್ ರೈ ಅವರನ್ನು ಬಂಟ್ವಾಳ ಕ್ಷೇತ್ರದ ಜನ ಈ ಬಾರಿ ಮತ್ತೆ ಕೈ ಹಿಡಿಯಬಹುದು ಎನ್ನುವುದು ಜನಾಭಿಪ್ರಾಯ.
ಈ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿರುವ ಅಂಶಗಳು:
1. ಶಾಸಕ ವಿರುದ್ಧ ಆಡಳಿತ ವಿರೋಧಿ ಅಲೆ:
ಮೊದಲ ಬಾರಿಗೆ ಶಾಸಕರಾಗಿರುವ ರಾಜೇಶ್ ನಾಯ್ಕ್ ಅವರ ವಿರುದ್ಧ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ತೀವ್ರವಾಗಿದೆ.
2. ಜನರಿಂದ ದೂರವಾದ ಶಾಸಕ:
ರಾಜೇಶ್ ನಾಯ್ಕ್ ಅವರು ಬಂಟ್ವಾಳ ಕ್ಷೇತ್ರದವರಲ್ಲ. ಇವರು ಊರು ಮಂಗಳೂರು ತಾಲೂಕಿನ ಗುರುಪುರದ ಬಳಿಯ ವಡ್ಡೂರುಪದವು. ಹೀಗಾಗಿ ಶಾಸಕರು ಬಂಟ್ವಾಳದಲ್ಲಿ ವಾಸವಿಲ್ಲ. ಇವರು ಇರುವುದು ಮಂಗಳೂರಿನಲ್ಲಿ ವಾಸ. ಹೀಗಾಗಿ ಮತ ಹಾಕಿರುವ ಕ್ಷೇತ್ರದ ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ ಎನ್ನುವ ಅಸಮಾಧಾನ ಕ್ಷೇತ್ರದ ಜನರಲ್ಲಿದೆ.
3. ಹಿಂದೂ, ಬಿಜೆಪಿ ಕಾರ್ಯಕರ್ತರ ಕಡೆಗಣನೆ:
ರಾಜೇಶ್ ನಾಯ್ಕ್ ಅವರಿಂದ ಕ್ಷೇತ್ರದಲ್ಲಿ ದೂರವಾಗಿರುವ ಮೂಲ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು. ಹಿಂದೂ ಪರ ಹೋರಾಟದಲ್ಲಿ ಭಾಗಿ ಆಗಿ ಕೇಸ್, ಕೋರ್ಟ್-ಕಟ್ಟಲೆಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಹಿಂದೂ ಕಾರ್ಯಕರ್ತರ ಪರ ರಾಜೇಶ್ ನಾಯ್ಕ್ ನೆರವಿಗೆ ಬರುತ್ತಿಲ್ಲ. ಹಿಂದುತ್ವ ಮಾತ್ರ ಕಾರಣದಿಂದ ಆಯ್ಕೆ ಆಗಿದ್ದ ರಾಜೇಶ್ ನಾಯ್ಕ್ ಈಗ ಅದೇ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ರಕ್ಷಿಸ್ತಿಲ್ಲ, ಬೆನ್ನಿಗೆ ನಿಂತಿಲ್ಲ ಎಂಬ ಸಿಟ್ಟು ದೊಡ್ಡ ಮಟ್ಟದಲ್ಲಿ ಕ್ಷೇತ್ರದಲ್ಲಿದೆ.
4. ತಗ್ಗಿದ ಕಲ್ಲಡ್ಕ ಪ್ರಭಾಕರ್ ಭಟ್ ಪ್ರಭಾವ:
ಕಲ್ಕಡ್ಕ ಪ್ರಭಾಕರ್ ಭಟ್ ಅವರ ಊರು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಲ್ಲಡ್ಕ. ಆದರೆ ಈ ಬಾರಿ ಕಲ್ಕಡ್ಕ ಪ್ರಭಾಕರ್ ಭಟ್ ಅವರ ಪ್ರಭಾವ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕುಗ್ಗಿದೆ. ಕಳೆದ ಚುನಾವಣೆಯಲ್ಲಿ ಬಂಟ್ವಾಳದಲ್ಲಿ ಚುನಾವಣೆ ಕಲ್ಲಡ್ಕ ಮತ್ತು ರೈ ನಡುವಿನ ಸಂಘರ್ಷವಾಗಿಯೇ ಬದಲಾಗಿತ್ತು.
5. ಜನರೊಂದಿಗೆ ನಿರಂತರ ಸಂಪರ್ಕದಲ್ಲಿ ರೈ:
ಸೋತ ಬಳಿಕವೂ ನಿರಂತರವಾಗಿ ಜನಸಂಪರ್ಕದಲ್ಲಿರುವ ರಮಾನಾಥ್ ರೈ. ಕ್ಷೇತ್ರದಲ್ಲಿ 8 ಬಾರಿ ಸ್ಪರ್ಧಿಸಿ 6 ಬಾರಿ ಗೆದ್ದಿರುವ ರಮಾನಾಥ್ ರೈ ಅವರು ಕ್ಷೇತ್ರದಲ್ಲಿ ಹಿಡಿತ ಇಟ್ಟುಕೊಂಡಿದ್ದಾರೆ. ಇದು ರೈ ಅವರಿಗೆ ದೊಡ್ಡ ಪ್ಲಸ್ ಪಾಯಿಂಟ್. ರೈ ಅವರ ವೈಯಕ್ತಿಕ ವರ್ಚಸ್ಸು ಕಾಂಗ್ರೆಸ್ಗೆ ಈ ಕ್ಷೇತ್ರದಲ್ಲಿ ಈ ಬಾರಿ ಲಾಭ ಆಗುವ ನಿರೀಕ್ಷೆ ಇದೆ.
6. ಹಿಂದುತ್ವವೇ ಬಿಜೆಪಿಗೆ ತಿರುಗುಬಾಣ:
ಕಳೆದ ಚುನಾವಣೆಯಲ್ಲಿ ಹಿಂದುತ್ವ ಬಿಜೆಪಿಗೆ ಕ್ಷೇತ್ರದಲ್ಲಿ ಪ್ರಮುಖ ಅಸ್ತ್ರವಾಗಿತ್ತು. ಆದ್ರೆ ಈ ಬಾರಿ ಹಿಂದುತ್ವ ಅಸ್ತ್ರ ಬಿಜೆಪಿ ರಕ್ಷಣೆಗೆ ಬಂದಂತಿಲ್ಲ. ಹಿಜಾಬ್, ಮುಸಲ್ಮಾನ ವ್ಯಾಪಾರಸ್ಥರಿಗೆ ಹಿಂದೂಗಳ ಜಾತ್ರೆಯಲ್ಲಿ ನಿಷೇಧ ಈ ಕ್ಷೇತ್ರದಲ್ಲಿ ವಿಷಯವೇ ಅಲ್ಲ. ಪ್ರವೀಣ್ ನೆಟ್ಟಾರು ಹತ್ಯೆ ಬಿಜೆಪಿಯ ಹಿಂದುತ್ವದ ಅಸ್ತ್ರಕ್ಕೆ ದೊಡ್ಡ ಘಾಸಿ ನೀಡಿದೆ.
7. ಎಸ್ಡಿಪಿಐ ಲೆಕ್ಕಕಿಲ್ಲ:
ಬಿಜೆಪಿಯನ್ನು ಗೆಲ್ಲಿಸಲು ಬಿ ಟೀಂ ಆಗಿ ಎಸ್ಡಿಪಿಐ ಕೆಲಸ ಮಾಡಬಹುದು ಎನ್ನುವ ಆರೋಪಗಳಿದ್ದರೂ ಬಂಟ್ವಾಳ ಕ್ಷೇತ್ರದಲ್ಲಿ ಎಸ್ಡಿಪಿಐ ಪ್ರಭಾವ ಅಷ್ಟಿಲ್ಲ. ಕಳೆದ ಬಾರಿ ಮುಸಲ್ಮಾನ ಮತ ವಿಭಜನೆಗೆ ಬಿಜೆಪಿಗೆ ಎಸ್ಡಿಪಿಐ ಸಹಕಾರ ಕೊಟ್ಟಿತ್ತು ಎನ್ನುವುದು ಈ ಕ್ಷೇತ್ರದಲ್ಲಿ ಕೇಳಿಬಂದಿದ್ದ ಪ್ರಮುಖ ಅಭಿಪ್ರಾಯ. ಈ ಬಾರಿಯೂ ಎಸ್ಡಿಪಿಐ ಇಲಿಯಾಸ್ ತುಂಬೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
8. ಹೊಸ ಯೋಜನೆಗಳಿಲ್ಲ, ಹಳೆದು ಜಾರಿ ಆಗಿಲ್ಲ:
ಬಂಟ್ವಾಳ ಕ್ಷೇತ್ರದಲ್ಲಿ ರಾಜೇಶ್ ನಾಯ್ಕ್ ಅವರು ಹೊಸದಾಗಿ ಯಾವುದೇ ಯೋಜನೆಗಳನ್ನು ತಂದಿಲ್ಲ. ಜೊತೆಗೆ ರಮಾನಾಥ್ ರೈ ಅವರು ಸಚಿವರಾಗಿದ್ದ ಅವಧಿಯಲ್ಲಿ ಅನುಮೋದನೆಗೊಂಡಿದ್ದ ಯೋಜನೆಗಳನ್ನೂ ಬಿಜೆಪಿ ಶಾಸಕ ರಾಜೇಶ್ ನಾಯಕ್ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ.
9. ಬೆಲೆ ಏರಿಕೆ ಹೊಡೆತ:
ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಉಳಿದ ಕ್ಷೇತ್ರಗಳಂತೆ ಬಂಟ್ವಾಳ ಕ್ಷೇತ್ರದಲ್ಲೂ ಚುನಾವಣಾ ವಿಷಯವಾಗಿದೆ.
10. ಬಿಜೆಪಿಗೆ ಭ್ರಷ್ಟಾಚಾರದ ಮುಳ್ಳು:
ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳು ಈ ಬಾರಿ ಬಿಜೆಪಿಗೆ ಈ ಕ್ಷೇತ್ರದಲ್ಲೂ ಮುಳುವಾಗಬಹುದು.
11. ಬಿಜೆಪಿಯಲ್ಲಿ ನಾಯಕತ್ವ ಇಲ್ಲ:
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯವರಾದರೂ ಬಿಜೆಪಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಹೇಳಿಕೊಳ್ಳುವ ನಾಯಕತ್ವ ಇಲ್ಲ.
12. ರೈ ಅವರ ಮೇಲೆ ಪೂಜಾರಿಯವರ ಆರ್ಶೀವಾದ:
ಕಳೆದ ಬಾರಿ ತಮ್ಮ ಪಕ್ಷದ ವಿರುದ್ಧವೇ ಮುನಿಸಿಕೊಂಡಿದ್ದ ಜನಾರ್ದನ ಪೂಜಾರಿ ಅವರು ಈ ಬಾರಿ ರಮಾನಾಥ್ ರೈ ಅವರಿಗೆ ಆರ್ಶೀವಾದ ಮಾಡಿದ್ದಾರೆ.
13. ಅನುಕಂಪದ ಅಲೆ:
ರಮಾನಾಥ್ ರೈ ಅವರಿಗೆ ಇದು ಕಡೆಯ ಚುನಾವಣೆ ಆಗಿರುವ ಕಾರಣ ಅನುಕಂಪದ ಅಲೆಯೂ ಅವರ ಪರ ಕೆಲಸ ಮಾಡುವ ನಿರೀಕ್ಷೆ ಇದೆ.
ಬಿಜೆಪಿ ರಣತಂತ್ರ:
ಈ ಬಾರಿ ಮತ್ತೆ ಗೆಲ್ಲುವ ಸಲುವಾಗಿ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಗ್ರಾಮ ವಿಕಾಸ ಯಾತ್ರೆಯನ್ನು ಕೈಗೊಂಡಿದ್ದರು. ಅದರ ಜೊತೆಗೆ ದೂರ ಆಗಿರುವ ಬಿಜೆಪಿ ಕಾರ್ಯಕರ್ತರು ಮತ್ತೆ ಸೆಳೆಯುವ ಭಾಗವಾಗಿ ಶಾಸಕರ ಮಂಗಳೂರಲ್ಲಿರುವ ಮನೆಯಲ್ಲಿ ಕಾರ್ಯಕರ್ತರನ್ನು ಕರೆದು ಸಮಾಧಾನಪಡಿಸು ಸಲುವಾಗಿ ಕಮಲ ಉತ್ಸವ ಮಾಡಲಾಗಿದೆ.
ಕಾಂಗ್ರೆಸ್ ರಣತಂತ್ರ:
ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ನಮ್ಮ ನಡೆ ಬೂತ್ ಕಡೆ ಹೆಸರಲ್ಲಿ 249 ಬೂತ್ಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿದೆ. ಕಾಂಗ್ರೆಸ್ ಹಿರಿಯ ನಾಯಕರು, ಕಾರ್ಯಕರ್ತರ ಮನೆಗೆ ಮನೆ ಮನೆ ಭೇಟಿ ಕಾರ್ಯಕ್ರಮವನ್ನು ನಡೆಸಿದೆ. ಮೂರನೇ ಹಂತದಲ್ಲಿ ಬಂಟ್ವಾಳದಲ್ಲಿ ಯಾತ್ರೆ ಕೈಗೊಳ್ಳುವುದಕ್ಕೂ ಕಾಂಗ್ರೆಸ್ ತೀರ್ಮಾನಿಸಿದೆ.
ಕಳೆದ ಬಾರಿ ವಿವಾದಾತ್ಮಕ ಹೇಳಿಕೆಗಳಿಂದ ಹಿನ್ನಡೆ ಅನುಭವಿಸಿದ್ದ ರೈ ಅವರು ಈ ಬಾರಿ ಅಂತಹ ಹೇಳಿಕೆಗಳಿಂದಲೇ ದೂರ ಉಳಿದಿದ್ದಾರೆ.
ಮಾಜಿ ಕೇಂದ್ರ ಸಚಿವರು ಮತ್ತು ಬಿಲ್ಲವ ಸಮುದಾಯದ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ಜೊತೆಗೆ ರಮಾನಾಥ್ ರೈ ಅವರ ನಂಟು ಈಗ ಸುಧಾರಿಸಿರುವುದು ಕಾಂಗ್ರೆಸ್ ನಾಯಕರ ಗೆಲ್ಲುವ ವಿಶ್ವಾಸ ಹೆಚ್ಚಿಸಿದೆ.
ಜಾತಿ ಲೆಕ್ಕಾಚಾರ:
ಬಿಲ್ಲವ – 58 ಸಾವಿರ
ಮುಸಲ್ಮಾನ – 55 ಸಾವಿರ
ಬಂಟರು – 12 ಸಾವಿರ
ಕ್ರಿಶ್ಚಿಯನ್ – 18 ಸಾವಿರ
ದಲಿತರು – 25 ಸಾವಿರ
ಕೊಂಕಣಿ: 2 ಸಾವಿರ
ADVERTISEMENT