ಅಸಿಡಿಟಿ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಯಾರಿಗೆ ಯಾವಾಗ ಬೇಕಾದರು ಬರಬಹುದು. ತುಂಬಾ ಖಾರ ಅಥವಾ ಎಣ್ಣೆ ಪದಾರ್ಥತಿಂದರೆ ಈ ಸಮಸ್ಯೆ ಕಂಡು ಬರುವುದು. ಪಿಜ್ಜಾ, ಪಾಸ್ತಾ, ಚಿಪ್ಸ್, ಫ್ರೈ ಇವುಗಳನ್ನು ತಿಂದರೆ ಅಸಿಡಿಟಿ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು. ಇನ್ನು ಅತಿ ಹೆಚ್ಚು ಕಾಫಿ ಕುಡಿಯುವುದು, ಕಡಿಮೆ ನೀರು ಕುಡಿಯುವುದು ಇವೆಲ್ಲಾ ದೇಹದಲ್ಲಿರುವ pH ಪ್ರಮಾಣದಲ್ಲಿ ವ್ಯತ್ಯಾಸ ಉಂಟು ಮಾಡಿ ಅಸಿಡಿಟಿ ಸಮಸ್ಯೆ ತರುವುದು. ಇದರ ನಿವಾರಣೆಗೆ ಗುಳಿಗೆಗಳ ಮೊರೆ ಹೋಗುವುದಕ್ಕಿಂತ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು.
ಮಜ್ಜಿಗೆ
ಹೊಟ್ಟೆ, ಜೀರ್ಣಕ್ರಿಯೆಗೆ ಸಂಬಂಧಿತ ಅನೇಕ ಸಮಸ್ಯೆಗೆ ಮಜ್ಜಿಗೆ ರಾಮಬಾಣ. ಎಸಿಡಿಟಿ ಆಗದಂತೆ ತಡೆಯಲು ಊಟದ ಬಳಿಕ ಮಜ್ಜಿಗೆ ಕುಡಿಯುವ ಪದ್ದತಿ ಈಗಲೂ ಇದೆ. ಎಸಿಡಿಟಿ ಆದಲ್ಲಿ, ತಂಪಾದ ಮಜ್ಜಿಗೆ ನಿಯಮಿತವಾಗಿ ಸೇವಿಸುವುದು ಒಳ್ಳೆಯದು.
ಶುಂಠಿ
ಶುಂಠಿ ಹಲವು ವಿಧಗಳಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ. ನಿತ್ಯವೂ ಶುಂಠಿಯ ಟೀಯನ್ನು ಕುಡಿಯುವ ಅಭ್ಯಾಸವಿದ್ದರೆ ಹಲವಾರು ಪ್ರಯೋಜನಗಳನ್ನು ನೀಡುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಇರಿಸುತ್ತದೆ. ವಿಶೇಷವಾಗಿ ಹೊಟ್ಟೆಯ ಆಮ್ಲೀಯತೆಯಿಂದ ವಾಕರಿಕೆ ಎದುರಾಗಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಶುಂಠಿ ಅತ್ಯುತ್ತಮ ಉರಿಯೂತ ನಿವಾರಕ ಗುಣ ಹೊಂದಿದ್ದು ಹೊಟ್ಟೆಯುರಿಯನ್ನು ತಕ್ಷಣವೇ ಶಮನಗೊಳಿಸುತ್ತದೆ. ಅಷ್ಟೇ ಅಲ್ಲ, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ, ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವ, ಜೀರ್ಣಶಕ್ತಿ ಉತ್ತಮಗೊಳಿಸುವ ಹಾಗೂ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುವ ಮೂಲಕವೂ ಶುಂಠಿ ಹೆಚ್ಚು ಪ್ರಯೋಜನ ನೀಡುತ್ತದೆ.
ಎಳನೀರು
ಎಳನೀರನ್ನು ಪವಿತ್ರವಾದ ನೈಸರ್ಗಿಕ ಕೊಡುಗೆ ಎಂದೇ ಪರಿಗಣಿಸಲಾಗುತ್ತದೆ. ಇದನ್ನು ದೇವರ ಅಭಿಷೇಕಕ್ಕೆ ಬಳಸುತ್ತಾರೆ. ಕಲ್ಪವೃಕ್ಷ ಎನಿಸಿದ ತೆಂಗಿ ಮರದಿಂದ ಸಿಗುವ ಎಳನೀರು ದೇವರ ಪೂಜೆಗೆ ಮಾತ್ರವಲ್ಲದೆ ಅದರಲ್ಲಡಗಿರುವ ಆರೋಗ್ಯದಾಯಕ ಅಂಶಗಳಿಂದ ಶ್ರೇಷ್ಠ ಎನಿಸಿದೆ. ಇದು ಇಷ್ಟಕ್ಕೆ ಮಾತ್ರ ಸೀಮಿತ ವಾಗಿಲ್ಲ, ಎಳೆನೀರು ಸೇವನೆ ಅಸಿಡಿಟಿ ನಿವಾರಣೆಗೆ ಉತ್ತಮ ಔಷಧಿಯಾಗಿದೆ. ಹೊಟ್ಟೆಯಲ್ಲಿ ಲೋಳೆ ಪ್ರಮಾಣವನ್ನು ಹೆಚ್ಚಿಸಿ ಪಿತ್ತವನ್ನು ಇದು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಎಳೆನೀರು ಸೇವಿಸುವುದರಿಂದ ಆಗಾಗ ಪಿತ್ತವಾಗುವುದು ಕಡಿಮೆಯಾಗುತ್ತದೆ.
ತುಳಸಿ ಎಲೆ
ಜೀರ್ಣಕ್ರಿಯೆಯನ್ನು ಸರಿಪಡಿಸುವಲ್ಲಿ ತುಳಸಿಯನ್ನು ಔಷಧಿ ಎಂದೇ ಪರಿಗಣಿಸಲಾಗುತ್ತದೆ. ಅಷ್ಟು ಮಾತ್ರ ಅಲ್ಲ, ಆಯುರ್ವೇದದಲ್ಲಿ ತುಳಸಿ ರಸ ಔಷಧವೆಂದೇ ಪರಿಗಣಿಸಲಾಗಿದೆ. ತುಳಸಿ ಎಲೆಯನ್ನು ಹಾಗೆಯೇ ತಿನ್ನಬಹುದು, ಅಥವಾ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿಯೂ ಸೇವಿಸಬಹುದು. ಇದನ್ನು ನಿಮ್ಮ ಊಟದ ಬಳಿಕ ಸೇವಿಸಿದರೆ ಇನ್ನೂ ಒಳ್ಳೆಯದು, ಇದಲ್ಲದೆ, ಜೀರಿಗೆಯೂ ಹೊಟ್ಟೆಯ ಸಮಸ್ಯೆಗಳನ್ನು ದೂರವಾಗಿಸಲು ಬಳಸುತ್ತಾರೆ. ಜೀರಿಗೆಯನ್ನು ನೇರ ಬಾಯಿಗೆ ಹಾಕಬಹುದು ಅಥವಾ ಅವನ್ನು ನೀರಿನಲ್ಲಿ ಕುದಿಸಿ, ಬಿಸಿ ನೀರನ್ನೂ ಕುಡಿಯುವುದರಿಂದ ಹೆಚ್ಚು ಅನುಕೂಲವಾಗುತ್ತದೆ.
ಅಸಿಡಿಟಿ ತಡೆಯಲು ಹೀಗೆ ಮಾಡಿ
- ಊಟವಾದ ತಕ್ಷಣ ಮಲಗಬೇಡಿ, ಇದು ಅಸಿಡಿಟಿ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.
- ಊಟವಾದ ಬಳಿಕ 40 ನಿಮಿಷಕ್ಕಿಂತ ಮೊದಲು ಮಲಗಲೇಬೇಡಿ
- ತಂಪು ಪಾನೀಯ ಕುಡಿಯಬೇಡ
- ನಿಂಬು ಪಾನೀಯ, ಕುತ್ತಳೆ ಜ್ಯೂಸ್, ದ್ರಾಕ್ಷಿ ಜ್ಯೂಸ್ ಕುಡಿಯಬೇಡಿ
- ಹುಳಿಯಂಶ ಅಸಿಡಿಟಿಯನ್ನು ಮತ್ತಷ್ಟು ಹೆಚ್ಚಿಸುವುದು
- ಹೊಟ್ಟೆ ಉರಿ ಇದ್ದರೆ ಖಾಲಿ ಹೊಟ್ಟೆಗೆ ಸಮಪ್ರಮಾಣದ ಹುರಿದ ಜೀರಿಗೆ ಮತ್ತು ಒಣಗಿಸಿದ ಬೆಲ್ಲ ಹಾಗೂ ತುಪ್ಪ ಸೇವಿಸಬೇಕು
- ಒಂದು ಚಮಚ ಕೊತ್ತಂಬರಿ ಬೀಜವನ್ನು ಎರಡು ಲೋಟ ತಣ್ಣೀರಿನಲ್ಲಿ ಹಾಕಿ ನೆನೆಸಿ. ನಂತರ ಸೋಸಿದ ನೀರನ್ನು ಕುಡಿದರೆ ಅಸಿಡಿಟಿ ಗುಣವಾಗುತ್ತದೆ
- 10 ಗ್ರಾಂ ಒಣ ದ್ರಾಕ್ಷಿ ಹಾಗೂ 5 ಗ್ರಾಂ ಸೊಂಪು ಎರಡನ್ನೂ ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ಕಲಸಿ ಸೇವಿಸಿದರೆ ಅಸಿಡಿಟಿ ನಿವಾರಣೆಯಾಗುತ್ತದೆ
- ಒಂದು ಚಮಚ ಪುದೀನಾ ರಸಕ್ಕೆ 1/2 ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ಎದೆ ಉರಿ ನಿವಾರಣೆಯಾಗುತ್ತದೆ
- ಒಂದು ನಿಂಬೆ ರಸಕ್ಕೆ 5 ಗ್ರಾಂ ಸಕ್ಕರೆ ಕಲಸಿ ಸೇವಿಸಿದರೆ ಎದೆ ಉರಿ ಹಾಗೂ ಅಸಿಡಿಟಿ ಕಡಿಮೆಯಾಗುತ್ತದೆ.