ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುನರ್ ಪರಿಷ್ಕರಣಾ ಸಮಿತಿಯ ಪಠ್ಯ ಪುಸ್ತಕಗಳನ್ನು ಹಿಂಪಡೆಯಬೇಕು ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಸಿಎಂ ಬೊಮ್ಮಾಯಿಗೆ ಪತ್ರ ಬರೆದು ಆಗ್ರಹಿಸಿದ್ದರು. ಈ ಬೆನ್ನಲ್ಲೇ, ಸಿಎಂ ಬೊಮ್ಮಾಯಿಯವರು ತುರ್ತು ಸಭೆ ಕರೆದಿದ್ದಾರೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರು ಸಿಎಂಗೆ ಪತ್ರ ಬರೆದು, ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಮಾಡಿದ ವ್ಯಕ್ತಿ(ರೋಹಿತ್ ಚಕ್ರತೀರ್ಥ)ಯನ್ನು ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದೇಕೆ.
ಕುವೆಂಪು, ಡಾ.ಬಿಆರ್ ಅಂಬೇಡ್ಕರ್, ಬಸವಣ್ಣ, ಕನಕದಾಸ, ಶಿಶುನಾಳ ಶರೀಪರು, ಹಲಗಲಿಯ ಬೇಡರು ಸೇರಿದಂತೆ ಹಲವು ತಳ ಸಮುದಾಯದ ಮಹಾನ್ ವ್ಯಕ್ತಿಗಳಿಗೆ ಈ ಸಮಿತಿ ಅಪಮಾನ ಮಾಡಿದೆ.
ಅಲ್ಲದೇ, ಈ ಪಠ್ಯದಲ್ಲಿ ಅಸಂಖ್ಯ ತಪ್ಪುಗಳಿಗೆ. ಆದ್ದರಿಂದ, ಈ ಸಮಿತಿ ಪರಿಷ್ಕರಿಸಿದ ಪಠ್ಯವನ್ನು ವಾಪಾಸು ಪಡೆಯಬೇಕು. ಈ ಹಿಂದಿನ ಸಮಿತಿಯ ಪಠ್ಯವನ್ನೇ ಈ ವರ್ಷ ಮುಂದುವರೆಸಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದ್ದರು.
ದೇವೇಗೌಡರ ಪತ್ರಕ್ಕೆ ಬೆಚ್ಚಿರುವ ಸಿಎಂ ಬೊಮ್ಮಾಯಿಯವರು ನಾಳೆ ಬುಧವಾರ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕ ಹಿಂತೆಗದುಕೊಳ್ಳುವ ನಿರ್ಣಯ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.