ಸಿದ್ದರಾಮಯ್ಯ ಪ್ರಮಾಣವಚನಕ್ಕೆ ಇವರಿಗೆ ಆಹ್ವಾನ ಇಲ್ಲ – ಕಾರಣ ಏನು ಗೊತ್ತಾ..?

ನಾಳೆ ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್​ ಮತ್ತು 28 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಐತಿಹಾಸಿಕ ಎಂದು ಕಾಂಗ್ರೆಸ್ಸೇ ಹೇಳಿರುವ ಪ್ರಮಾಣವಚನಕ್ಕೆ ಕಾಂಗ್ರೆಸ್​ ಕೆಲವು ನಾಯಕರಿಗೆ ಆಹ್ವಾನವನ್ನೇ ಕೊಟ್ಟಿಲ್ಲ.

ರಾಷ್ಟ್ರೀಯ ರಾಜಕೀಯ ಸಂದೇಶ ಬೀರಬಹುದಾದ ಈ ಕಾರ್ಯಕ್ರಮಕ್ಕೆ ಆಹ್ವಾನ ಪಡೆಯದ ನಾಯಕರು:

ಪಿಣರಾಯ್​ ವಿಜಯನ್​ – ಕೇರಳ ಮುಖ್ಯಮಂತ್ರಿ 

ನವೀನ್​ ಪಟ್ನಾಯಕ್​ – ಒಡಿಶಾ ಮುಖ್ಯಮಂತ್ರಿ, ಬಿಜು ಜನತಾ ದಳ ನಾಯಕ

ಮಾಯಾವತಿ – ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ, ಬಹುಜನ ಸಮಾಜ ಪಕ್ಷದ ನಾಯಕಿ 

ಅರವಿಂದ್​ ಕೇಜ್ರಿವಾಲ್​ – ದೆಹಲಿ ಸಿಎಂ ಮತ್ತು ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ

ಕೆ ಚಂದ್ರಶೇಖರ್​ ರಾವ್​ – ತೆಲಂಗಾಣ ಸಿಎಂ, ಬಿಆರ್​ಎಸ್​ ಮುಖ್ಯಸ್ಥ

ಜಗನ್ಮೋಹನ್​ ರೆಡ್ಡಿ – ಆಂಧ್ರ ಮುಖ್ಯಮಂತ್ರಿ ಮತ್ತು ವೈಎಸ್​ಆರ್​ ಕಾಂಗ್ರೆಸ್​ ಮುಖ್ಯಸ್ಥ

ವಿಶೇಷ ಎಂದರೆ 2018ರಲ್ಲಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಚನೆಯಾದ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ, ಮಾಯಾವತಿ ಭಾಗವಹಿಸಿದ್ದರು. ಮಾಯಾವತಿ ಮತ್ತು ಸೋನಿಯಾ ಗಾಂಧಿ ಕೈ ಕೈ ಹಿಡಿದು ಮೇಲಕ್ಕೆತ್ತಿದ್ದರು.

ಮಮತಾ ಬ್ಯಾನರ್ಜಿ ಬರುತ್ತಿಲ್ಲ: 

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಹ್ವಾನ ನೀಡಲಾಗಿದೆಯಾದರೂ ಅವರು ಸಿದ್ದರಾಮಯ್ಯ ಅವರ ಪ್ರಮಾಣವಚನಕ್ಕೆ ಬರುತ್ತಿಲ್ಲ ಅಥವಾ ತಮ್ಮ ಪ್ರತಿನಿಧಿಗಳಾಗಿ ಯಾರನ್ನೂ ಕಳುಹಿಸಿಕೊಡುತ್ತಿಲ್ಲ. 

ಒಂದು ವೇಳೆ ತಾವೇ ಖುದ್ದಾಗಿ ಸಮಾರಂಭಕ್ಕೆ ಹಾಜರಾದರೆ ಅಥವಾ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರೆ ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲುವಿಗೆ ರಾಷ್ಟ್ರೀಯ ಮಹತ್ವ ಕೊಟ್ಟಂತ್ತಾಗುತ್ತದೆ ಎನ್ನುವುದು ಮಮತಾ ಅವರ ಆಲೋಚನೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಟಿಎಂಸಿಗೆ ಎಡಪಕ್ಷಗಳು ಮತ್ತು ಕಾಂಗ್ರೆಸ್​ ಮೈತ್ರಿ ಟಕ್ಕರ್​ ಕೊಡುತ್ತಿದೆ.

ಉತ್ತರಪ್ರದೇಶದಲ್ಲಿ ಬಹುಜನಸಮಾಜ ಪಕ್ಷದ ಬದ್ಧ ಎದುರಾಳಿ ಆಗಿರುವ ಸಮಾಜವಾದಿ ಪಕ್ಷದ ಜೊತೆಗೆ ಈ ಹಿಂದೆ ಕಾಂಗ್ರೆಸ್​ ಚುನಾವಣಾ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮತ್ತು ಮಾಯಾವತಿ ಅವರು ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣರಾದರು ಎಂಬ ಕಾರಣಕ್ಕೆ ಅವರಿಗೂ ಕಾಂಗ್ರೆಸ್​ ಆಹ್ವಾನ ನೀಡಿಲ್ಲ. 

ದೆಹಲಿ ವಿಧಾನಸಭಾ ಚುನಾವಣೆ, ದೆಹಲಿ ಪಾಲಿಕೆ ಚುನಾವಣೆ ಮತ್ತು ಪಂಜಾಬ್​ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಪ್ರಮುಖ ಎದುರಾಳಿ ಆಪ್​. ಪಂಜಾಬ್​ನಲ್ಲಿ ಆಪ್​ ವಿರುದ್ಧವೇ ಕಾಂಗ್ರೆಸ್​ ಹೀನಾಯವಾಗಿ ಸೋತಿದ್ದರೆ, ಇತ್ತ ಗುಜರಾತ್​ನಲ್ಲಿ ಕಾಂಗ್ರೆಸ್​ನ ಹೀನಾಯ ಸೋಲು ಮತ್ತು ಬಿಜೆಪಿ ಗೆಲುವಿನಲ್ಲಿ ಆಪ್​ ಕೊಡುಗೆ ದೊಡ್ಡದು. ಈ ಹಿನ್ನೆಲೆಯಲ್ಲಿ ಆಪ್​ಗೂ ಆಹ್ವಾನ ನೀಡಲಾಗಿಲ್ಲ.

ತೆಲಂಗಾಣದಲ್ಲಿ ಟಿಆರ್​​ಎಸ್​ ಮತ್ತು ಆಂಧ್ರದಲ್ಲಿ ವೈಆರ್​ಎಸ್​ ವಿರುದ್ಧ ಕಾಂಗ್ರೆಸ್​ ಹೋರಾಡುತ್ತಿದೆ. ಒಡಿಶಾದಲ್ಲಿ ಕಾಂಗ್ರೆಸ್​​ಗೆ ಬಿಜೆಡಿ ನೇರ ಎದುರಾಳಿಯಾಗಿದ್ದು, ಹಲವು ಸಂದರ್ಭಗಳಲ್ಲಿ ಬಿಜೆಪಿ ಪರ ಬಿಜೆಡಿ ನಿಲುವು ತಳೆದಿತ್ತು.

ಕೇರಳದಲ್ಲೂ ಕಾಂಗ್ರೆಸ್​ ಮತ್ತು ಎಡಪಕ್ಷಗಳ ಜೊತೆಗೆಯೇ ನೇರ ಸಂಘರ್ಷ. ಆದರೆ ಸಿಪಿಐ ಮತ್ತು ಸಿಪಿಐಎಂನ ರಾಷ್ಟ್ರೀಯ ನಾಯಕರಿಗೆ ಕಾಂಗ್ರೆಸ್​ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.