ಭ್ರಷ್ಟಾಚಾರ ಆರೋಪ, ಹಿಂದುತ್ವ ಮರೆತ ಸಚಿವ ಸುನಿಲ್​ ಕುಮಾರ್​​ ಸೋಲ್ತಾರಾ..? – ಕಾರ್ಕಳ ರಾಜಕೀಯದಲ್ಲಿ ಕಂಪನ

V Sunil Kumar Energy Minister
V Sunil Kumar Energy Minister

ವಿಶ್ಲೇಷಣೆ: ಅಕ್ಷಯ್​ ಕುಮಾರ್​, ಮುಖ್ಯ ಸಂಪಾದಕರು, ಪ್ರತಿಕ್ಷಣ 

ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಈ ಬಾರಿ ಭಾರೀ ಕುತೂಹಲ ಕೆರಳಿಸಿರುವ ವಿಧಾನಸಭಾ ಕ್ಷೇತ್ರ ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ.

ಇಂಧನ ಸಚಿವ ಸುನಿಲ್​ ಕುಮಾರ್​ ಪ್ರತಿನಿಧಿಸುತ್ತಿರುವ ವಿಧಾನಸಭಾ ಕ್ಷೇತ್ರ.

1999ರ ವಿಧಾನಸಭಾ ಚುನಾವಣೆವರೆಗೆ ಕಾಂಗ್ರೆಸ್​​ ಹಿಡಿತದಲ್ಲಿದ್ದ ಕ್ಷೇತ್ರ. 2004ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಸುನಿಲ್​ ಕುಮಾರ್​ ಶಾಸಕರಾದರು.

2008ರಲ್ಲಿ ಗೋಪಾಲ ಭಂಡಾರಿಯವರು ಮತ್ತೆ ಕಾಂಗ್ರೆಸ್​ ಶಾಸಕರಾಗಿ ವಿಧಾನಸಭೆಗೆ ಎರಡನೇ ಬಾರಿಗೆ ಆಯ್ಕೆಯಾದರು.

ಆದರೆ 2013 ಮತ್ತು 2018ರಲ್ಲಿ ಸುನಿಲ್​ ಕುಮಾರ್​ ಅವರು ಸತತವಾಗಿ ಎರಡು ಬಾರಿ ಗೆದ್ದರು.

ಸುನಿಲ್​​ ಕುಮಾರ್​ಗೆ ಪ್ರಮೋದ್​ ಮುತಾಲಿಕ್​ ಸವಾಲು:

ಮೂರು ಬಾರಿ ಶಾಸಕರಾಗಿ ಇಂಧನ ಸಚಿವರಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸುನಿಲ್​ ಕುಮಾರ್​ ಅವರಿಗೆ ಈ ಬಾರಿ ಹಿಂದುತ್ವವೇ ಸವಾಲಾಗಿದೆ.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​​ ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಈ ಮೂಲಕ ಆರಂಭದಲ್ಲಿ ಹಿಂದುತ್ವದ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಹಿಂದುತ್ವದ ಮೂಲಕವೇ ಆರಂಭಿಕ ಜನಪ್ರಿಯತೆ ಪಡೆದು ಅದರ ರಾಜಕೀಯ ಲಾಭವನ್ನು ಪಡೆದಿರುವ ಸುನಿಲ್​ ಕುಮಾರ್​ ಅವರಿಗೆ ಹಿಂದುತ್ವದ ಪ್ರಖರ ಮುಖ ಮುತಾಲಿಕ್​ ಅವರೇ ಸವಾಲಾಗಿದ್ದಾರೆ.

ಮುತಾಲಿಕ್​​ ಚುನಾವಣಾ ಸೇನೆಯಲ್ಲಿ 2 ಸಾವಿರ ಕಾರ್ಯಕರ್ತರ ಪಡೆ:

ಕಾರ್ಕಳದಲ್ಲಿ ಚುನಾವಣಾ ಸ್ಪರ್ಧೆ ಹಿನ್ನೆಲೆಯಲ್ಲಿ ಮುತಾಲಿಕ್​ ಅವರು ಸಿದ್ಧತೆ ಆರಂಭಿಸಿಯಾಗಿದೆ. ಕಾರ್ಕಳ ಕ್ಷೇತ್ರದಲ್ಲಿ ಹಲವು ಸುತ್ತಿನ ಸಭೆಗಳನ್ನೂ ನಡೆಸಿ ಆಗಿದೆ. ಮೂಲಗಳ ಪ್ರಕಾರ 2 ಸಾವಿರ ಕಾರ್ಯಕರ್ತರ ಪಡೆ ಮುತಾಲಿಕ್​ ಅವರನ್ನು ಗೆಲ್ಲಿಸುವ ಸಲುವಾಗಿ ಅಖಾಡಕ್ಕಿಳಿಯಲು ಅಣಿಯಾಗಿದೆ.

ಹಿಂದುತ್ವ ಮರೆತಿದ್ದು, ದೂರ ಮಾಡಿದ್ದೇ ಮುಳ್ಳಾಗುತ್ತಾ..?

ಈಗ ಸಚಿವರಾಗಿರುವ ಸುನೀಲ್​ ಕುಮಾರ್​ ಒಂದು ಕಾಲದಲ್ಲಿ ಹಿಂದುತ್ವದ ಪ್ರಖರ ಮುಖವಾಗಿದ್ದರು. ಅವರ ಆರಂಭದ ಜನಪ್ರಿಯತೆಗೆ ಹಿಂದುತ್ವವೇ ಅಡಿಪಾಯವಾಗಿತ್ತು. ಆದರೆ ರಾಜಕೀಯ ಅಧಿಕಾರ ಸಿಕ್ಕ ಬಳಿಕ ಅಂದರೆ ಶಾಸಕರಾದ ಬಳಿಕ ಸುನಿಲ್​ ಕುಮಾರ್​ ತಾವು ಬೆಳೆದು ಬಂದ ಹಾದಿಯನ್ನೇ ಮರೆತರೆಂಬ ಸಿಟ್ಟು ಹಿಂದೂ ಸಂಘಟನೆಗಳ ನಾಯಕರಲ್ಲಿದೆ.

ಆರಂಭದಲ್ಲಿ ಬಜರಂಗದಳ ರಾಜ್ಯ ಸಂಚಾಲಕರಾಗಿದ್ದರು ಸುನಿಲ್​ ಕುಮಾರ್​. ಆದರೆ ರಾಜಕೀಯ ಅಧಿಕಾರ ಸಿಕ್ಕ ಬಳಿಕ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಸಂಘಟನೆಗಳ ಶಕ್ತಿಯನ್ನೇ ಕುಂದಿಸಿದ್ದು ಇದೇ ಸುನಿಲ್​ ಕುಮಾರ್​. ಹಿಂದೂ ಸಂಘಟನೆಗಳನ್ನು ಸಂಪೂರ್ಣ ದುರ್ಬಲಗೊಳಿಸಿ ಕಾರ್ಕಳದಲ್ಲಿ ನನ್ನನ್ನು ಬಿಟ್ಟರೇ ಯಾರೂ ಪರ್ಯಾಯ ಇರಕೂಡದು ಎಂಬಂತೆ ಹಿಂದೂ ಸಂಘಟನೆಗಳನ್ನು ಸಚಿವ ಸುನಿಲ್​ ಕುಮಾರ್​ ಹೊಸಕಿ ಹಾಕಿದ್ದರು ಎಂಬ ಆರೋಪ ಇದೆ.

ಇದಕ್ಕೆ ಪೂರಕವಾಗಿ ಕಳೆದ ಚುನಾವಣೆಯ ವೇಳೆ ತಮ್ಮ ರಾಜಕೀಯ ಪ್ರಭಾವ ಬಳಸಿ ಹಿಂದೂ ಸಂಘಟನೆಯೊಬ್ಬರ ನಾಯಕರೊಬ್ಬರ ಮೇಲೆ ಗೂಂಡಾ ಕಾಯ್ದೆಯಡಿ ಕೇಸ್​ ಹಾಕಿಸಿ ಅವರನ್ನು ಜೈಲಿಗಟ್ಟಿದರು ಎಂಬ ಆರೋಪ ಸುನಿಲ್​ ಕುಮಾರ್​ ವಿರುದ್ಧ ಹರಿದಾಡಿತ್ತು.

ನಂತರ ಆ ಹಿಂದೂ ಮುಖಂಡ ಆ ಹಿಂದೂ ಸಂಘಟನೆಯಿಂದ ಹೊರಬಂದು ಇನ್ನೊಂದು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡರು. ಅತ್ತೂರು ಪರ್ಪಲೆ ಗಿರಿ ವಿವಾದ ವೇಳೆಯೂ ಸಚಿವ ಸುನಿಲ್​ ಕುಮಾರ್​ ಮೌನವಹಿಸಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿತ್ತು.

ಹಿಂದೂ ಸಂಘಟನೆಗಳು ದೂರ:

ಈಗ ಸಚಿವ ಸುನಿಲ್​ ಕುಮಾರ್​ ಅವರಿಗೂ ಕಾರ್ಕಳದಲ್ಲಿನ ಹಿಂದೂ ಸಂಘಟನೆಗಳಿಗೂ ಅಷ್ಟಕ್ಕಷ್ಟೇ. ಈಗ ಉಡುಪಿ ಜಿಲ್ಲೆಯಲ್ಲಿ ಬಜರಂಗ ದಳ ಪ್ರಭಾವ ಕುಗ್ಗಿ ಹಿಂದೂ ಜಾಗರಣ ವೇದಿಕೆ ಬಲಿಷ್ಠಗೊಳ್ಳಲು ಕಾರಣ ಸಚಿವ ಸುನಿಲ್​ ಕುಮಾರ್​ ಅವರ ವರ್ತನೆಯೇ ಕಾರಣ ಎನ್ನುವ ಮಾತಿದೆ. ಬಜರಂಗ ದಳದಲ್ಲಿ ಆರಂಭದಲ್ಲಿದ್ದ ನಾಯಕರು ಸಚಿವ ಸುನಿಲ್​ ಕುಮಾರ್​ ಮತ್ತು ಸಂಘ ಪರಿವಾರದ ವಿರುದ್ಧ ಸಿಡಿದೆದ್ದು ಈಗ ಹಿಂದೂ ಜಾಗರಣ ವೇದಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಹೀಗಾಗಿ ಈಗ ಸುನಿಲ್​ ಕುಮಾರ್​ ಅವರಿಗೆ ಕಾರ್ಕಳ ಕ್ಷೇತ್ರದಲ್ಲಿ ಹಿಂದೂ ಸಂಘಟನೆಗಳ ಬೆಂಬಲ ಅಷ್ಟಾಗಿ ಇಲ್ಲ.

ಗೋ ಕಳ್ಳತನ ಹೆಚ್ಚಳ:

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗೋ ಕಳ್ಳತನ ಅಧಿಕವಾಗಿದೆ. ಬಿಜೆಪಿ ಸರ್ಕಾರದಲ್ಲೇ ಅದರಲ್ಲೂ ಸಚಿವ ಸುನಿಲ್​ ಕುಮಾರ್​ ಅವರಂತ ಪ್ರಭಾವಿಗಳ ಕ್ಷೇತ್ರದಲ್ಲೇ ಗೋವುಗಳಿಗೆ ರಕ್ಷಣೆ ಇಲ್ಲವಾದರೇ ಹೇಗೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿವೆ. ಗೋ ಕಳ್ಳತನ ಹೆಚ್ಚಳವೂ 2023ರ ವಿಧಾನಸಭಾ ಚುನಾವಣೆಗೆ ಚುನಾವಣೆ ವಿಷಯ ಆಗಬಹುದು.

ಹಿಜಾಬ್​ ವಿವಾದದಿಂದಲೂ ಅಂತರ:

ಈ ವರ್ಷ ಹಿಜಾಬ್​ ವಿವಾದ ಹುಟ್ಟಿಕೊಂಡಿದ್ದೇ ಉಡುಪಿ ಜಿಲ್ಲೆಯಲ್ಲಿ. ಆದರೆ ಅದೇ ಜಿಲ್ಲೆಯ ಶಾಸಕರೂ ಆಗಿರುವ ಸುನಿಲ್​ ಕುಮಾರ್​ ಅವರ ಕ್ಷೇತ್ರದಲ್ಲಿ ಹಿಜಾಬ್​ ವಿವಾದ ಆಗಲೇ ಇಲ್ಲ. ಹಿಜಾಬ್​ ಬಗ್ಗೆ ಚಕಾರ ಎತ್ತದಂತೆ ಹಿಂದೂ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದರಂತೆ ಸುನಿಲ್​ ಕುಮಾರ್​. ಈ ಮೂಲಕ ಅಲ್ಪಸಂಖ್ಯಾತರ ಮತಗಳನ್ನೂ ಸೆಳೆಯುವ ಪ್ರಯತ್ನ ಮಾಡಿದ್ದರು.

ಸೋಲ್ತಾರಾ ಸುನಿಲ್​ ಕುಮಾರ್​..?

ಆರಂಭದಲ್ಲಿಯೇ ಹೇಳಿದಂತೆ ಹಿಂದೂ ಸಂಘಟನೆಗಳು ಈಗ ಸುನಿಲ್​ ಕುಮಾರ್​ ಅವರ ಜೊತೆಗೆ ಇಲ್ಲ. ಈಗ ಇವರೆಲ್ಲರೂ ಮುತಾಲಿಕ್​ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಸುನಿಲ್​ ಕುಮಾರ್​ಗೆ ಈ ಬಾರಿ ಪಾಠ ಕಲಿಸಲೇಬೇಕೆಂದು ಹಠ ಹಿಡಿದು ಕೂತಿದ್ದಾರೆ.

ಒಂದು ವೇಳೆ ಮುತಾಲಿಕ್​ ಅವರು ಹಿಂದುತ್ವದ ಮತಗಳನ್ನು ಪಡೆದರೂ ಸುನಿಲ್​ ಕುಮಾರ್​ದ ಸೋಲ್ತಾರೆ ಎಂಬ ಮಾತು ಈಗ ಕಾರ್ಕಳ ಕ್ಷೇತ್ರದಲ್ಲಿ ಬಲವಾಗಿದೆ. ಹೀಗಾಗಿ ಸಚಿವರೂ ತಮ್ಮ ಕ್ಷೇತ್ರವನ್ನು ಬಿಟ್ಟು ಕದಲುತ್ತಿಲ್ಲ.

ಭ್ರಷ್ಟಾಚಾರದ ಕಳಂಕ:

ಸಚಿವ ಸುನಿಲ್​ ಕುಮಾರ್​ ಅವರ ವಿರುದ್ಧ ಭ್ರಷ್ಟಾಚಾರದ ಕಳಂಕ ಕೂಡಾ ಕ್ಷೇತ್ರದಲ್ಲಿ ಅವರ ಜನಪ್ರಿಯತೆಯನ್ನು ಕುಗ್ಗಿಸಿದೆ. ತಮ್ಮ ಕಚೇರಿಯನ್ನು ಕಟ್ಟಲು ಸರ್ಕಾರದ ಕಾಮಗಾರಿಗೆ ಮೀಸಲಿಟ್ಟಿದ್ದ ಸಿಮೆಂಟ್​ ಬಳಸಿಕೊಂಡರು ಎಂಬ ಆರೋಪವನ್ನು ಕಾಂಗ್ರೆಸ್​ ಮಾಡಿತ್ತು.