ಹಳೆ ಮೈಸೂರು ಪದವೀಧರ ಕ್ಷೇತ್ರ ಚುನಾವಣಾ ಮತ ಎಣಿಕೆ ಕಾರ್ಯ ಭರದಿಂದ ಸಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಹಾವು ಏಣಿಯಾಟ ಮುಂದುವರೆದಿದೆ. ಆದರೆ, ಈ ಬಾಗದ ಪ್ರಬಲ ಪಕ್ಷವಾಗಿದ್ದ ಜೆಡಿಎಸ್ ಮತ ಎಣಿಕೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಮೈ.ವಿ.ರವಿಶಂಕರ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಆದರೆ, ಜೆಡಿಎಸ್ ಕಾರ್ಯಕರ್ತರು ತೀವ್ರ ನಿರಾಶೆಯಲ್ಲಿದ್ದಾರೆ.
ಜೆಡಿಎಸ್ನ ಎಮ್ಎಲ್ಸಿ ಆಗಿರುವ ಮರಿತಿಬ್ಬೇಗೌಡ ಅವರು ಜಯರಾಮ್ ಕೀಲಾರ್ಗೆ ಟಿಕೇಟ್ ನೀಡುವಂತೆ ಪಕ್ಷಕ್ಕೆ ಒತ್ತಾಯಿಸಿದ್ದರು. ಆದರೆ, ಜೆಡಿಎಸ್ ಎಚ್ಕೆ ರಾಮ್ ಅವರಿಗೆ ಮಣೆ ಹಾಕಿತ್ತು. ಇದರಿಂದ ಜೆಡಿಎಸ್ ವರಿಷ್ಠರ ವಿರುದ್ಧ ಮರಿತಿಬ್ಬೇಗೌಡರು ಅಸಮಾಧಾನಗೊಂಡಿದ್ದರು. ಆ ಕಾರಣದಿಂದ ಚುನಾವಣೆ ಪ್ರಚಾರದುದ್ದಕ್ಕೂ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ ಅವರಿಗೆ ಬಹಿರಂಗ ಬೆಂಬಲ ಘೋಷಿಸಿದ್ದರು.
ಇದೀಗ, ಮರಿತಿಬ್ಬೇಗೌಡರ ಬಂಡಾಯದಿಂದ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದ ಬಲ ಕುಸಿದಿದೆ. ಮರಿತಿಬ್ಬೇಗೌಡರ ಹೊಡೆತಕ್ಕೆ ಜೆಡಿಎಸ್ ಅಭ್ಯರ್ಥಿ ತತ್ತರಗೊಂಡಿದ್ದಾರೆ.
ಅಧಿಕೃತವಾಗಿ ಜೆಡಿಎಸ್ ತೆಕ್ಕೆಯಿಂದ ದಕ್ಷಿಣ ಪದವೀಧರ ಕ್ಷೇತ್ರ ಜಾರಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕ್ಷಣ ಕ್ಷಣಕ್ಕೂ ಮತಗಳ ಎಣಿಕೆ ರೋಚಕತೆ ಹೆಚ್ಚಿಸುತ್ತಿದೆ. ಇನ್ನು ಕೆಲವೇ ತಾಸುಗಳಲ್ಲಿ ಅಧಿಕೃತ ಫಲಿತಾಂಶ ಪ್ರಕಟಗೊಳ್ಳಲಿದೆ.