BREAKING: ಮುಸಲ್ಮಾನ, ದಲಿತ, ಲಿಂಗಾಯತ ಪ್ರಮುಖರಿಗೆ ಸಚಿವ ಸ್ಥಾನ ಬೇಡ – ಹೈಕಮಾಂಡ್​ ಎದುರು ಡಿಕೆಶಿವಕುಮಾರ್​ ಪಟ್ಟು

ಅಹಿಂದ ಸಮುದಾಯಕ್ಕೆ ಸೇರಿದ ಪ್ರಮುಖರಿಗೆ ಸಚಿವ ಸ್ಥಾನ ನೀಡುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ವಿರೋಧ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತ, ದಲಿತ ಮತ್ತು ಲಿಂಗಾಯತ ಸಮುದಾಯದ ಪ್ರಮುಖರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡದಂತೆ ಡಿಕೆಶಿವಕುಮಾರ್​ ಹೈಕಮಾಂಡ್​ ಎದುರು ಪಟ್ಟು ಹಿಡಿದಿದ್ದಾರೆ.

ದಲಿತ ಸಮುದಾಯದ ಮಾಜಿ ಸಚಿವ ಹೆಚ್​ ಸಿ ಮಹದೇವಪ್ಪ, ಲಿಂಗಾಯತ ಸಮುದಾಯದ ಬಸವರಾಯ ರಾಯರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅಹಿಂದ ಮತಗಳ ಕ್ರೋಢೀಕರಣದ ಹಿಂದೆ ಪ್ರಮುಖ ಪಾತ್ರ ವಹಿಸಿದ್ದ ಹೆಚ್​ ಸಿ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಲು ಡಿಕೆಶಿ ವಿರೋಧಿಸಿರುವುದು ದಲಿತ ಸಮುದಾಯದ ಕೆಂಗಣ್ಣಿಗೆ ಕಾರಣವಾಗಿದೆ. 

ಸಂತೋಷ್​ ಲಾಡ್​ಗೂ ವಿರೋಧ:

ಕಲಘಟಗಿ ಶಾಸಕ ಸಂತೋಷ್​ ಲಾಡ್​​ಗೆ ಸಚಿವ ಸ್ಥಾನ ನೀಡದಂತೆ ದೆಹಲಿಯಲ್ಲಿ ಡಿಕೆಶಿವಕುಮಾರ್​ ಪ್ರಯತ್ನ ತೀವ್ರಗೊಳಿಸಿದ್ದಾರೆ. ಆದ್ರೆ ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ಸಂತೋಷ್​ ಲಾಡ್​​ಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಮೂಲಗಳು ತಿಳಿಸಿವೆ.

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸಚಿವ ಸ್ಥಾನ ಸಾಧ್ಯತೆ:

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ.

ಜಮೀರ್​, ಎಂಬಿ ಪಾಟೀಲ್​ಗೂ ವಿರೋಧಿಸಿದ್ದ ಡಿಕೆಶಿ:

ಮೇ 20ರಂದು ಮೊದಲ ಪ್ರಮಾಣವಚನದ ವೇಳೆ ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್​ ಖಾನ್​ರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದನ್ನು ವಿರೋಧಿಸಿ ಡಿಕೆಶಿ ಪಟ್ಟು ಹಿಡಿದಿದ್ದರು. ಯಾವುದೇ ಕಾರಣಕ್ಕೂ ಜಮೀರ್​ಗೆ ಸಚಿವ ಸ್ಥಾನ ನೀಡಕೂಡದು ಎಂದು ಡಿಕೆಶಿ ಹಠ ಹಿಡಿದಿದ್ದರು.

ವಿಧಾನಭಾ ಚುನಾವಣೆಯಲ್ಲಿ ಜಮೀರ್​ ಅಹ್ಮದ್​ ಖಾನ್​ 100 ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಗೆಲುವಿಗೆ ಕೆಲಸ ಮಾಡಿದ್ದಾರೆ. ಒಂದು ವೇಳೆ ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ ಅಂದ್ರೆ ಮುಸಲ್ಮಾನ ಸಮುದಾಯಕ್ಕೆ ಬೇರೆಯದ್ದೇ ಸಂದೇಶ ರವಾನೆ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೈಕಮಾಂಡ್​​ಗೆ ಎಚ್ಚರಿಕೆ ಕೊಟ್ಟ ಬಳಿಕ ಜಮೀರ್​ ಹೆಸರು ಮೊದಲ ಪಟ್ಟಿಯಲ್ಲಿ ಅಂತಿಮಗೊಂಡಿತ್ತು.

ಎಂಬಿ ಪಾಟೀಲ್​ಗೂ ವಿರೋಧ:

ಎಂಬಿ ಪಾಟೀಲ್​ ಅವರಿಗೂ ಸಚಿವ ಸ್ಥಾನ ಕೊಡುವುದಕ್ಕೆ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದರು. ಎಂಬಿ ಪಾಟೀಲ್​ಗೆ ಸಚಿವ ಸ್ಥಾನ ಕೊಟ್ಟರೆ ಭವಿಷ್ಯದಲ್ಲಿ ತಮ್ಮ ಪ್ರತಿಸ್ಪರ್ಧಿ ಆಗ್ತಾರೆ ಎಂಬ ಆತಂಕ ಡಿಕೆಶಿ ಅವರದ್ದು. 

ಆದರೆ ಎಂಬಿ ಪಾಟೀಲ್​ ಕಾಂಗ್ರೆಸ್​ನಲ್ಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದು ಅವರಿಗೆ ಸಚಿವ ಸ್ಥಾನ ಕೊಡಲೇಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ ಬಳಿಕವಷ್ಟೇ ಅವರ ಹೆಸರು ಮೊದಲ ಪಟ್ಟಿಯಲ್ಲಿ ಅಂತಿಮಗೊಂಡಿತ್ತು.