ದಲಿತರ ಪೂಜೆಗೆ ಅವಕಾಶ ನಿರಾಕರಣೆ; ದೇವಾಲಯಕ್ಕೆ ಬೀಗ ಹಾಕಿದ ಸರ್ಕಾರ

ದಲಿತರ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೇಲ್ಪಡಿ ಗ್ರಾಮದ ಶ್ರೀಧರ್ಮರಾಜ ದ್ರೌಪದಿ ಅಮ್ಮನ್ ದೇವಾಲಯಕ್ಕೆ ಸಿಎಂ ಸ್ಟಾಲಿನ್ ಸರ್ಕಾರ ಬೀಗ ಹಾಕಿದೆ.

ಮೇಲ್ಪಡಿ ಗ್ರಾಮದಲ್ಲಿ ವನ್ನಿಯಾರ್ ಸಮುದಾಯದ ಪ್ರಾಬಲ್ಯವಿದೆ. ಈ ದೇವಾಲಯ ಧಾರ್ಮಿಕ ದತತ್ತಿ ಇಲಾಖೆ ವ್ಯಾಪ್ತಿಗೆ ಸೇರಿದೆ.

ಏಪ್ರಿಲ್ ತಿಂಗಳಲ್ಲಿ ನಡೆದ ಊರಹಬ್ಬದ ವೇಳೆ ಪೂಜೆ ಸಲ್ಲಿಸಲು ದೇವಾಲಯಕ್ಕೆ ಬಂದ ದಲಿತರನ್ನು ವನ್ನಿಯಾರ್ ಸಮುದಾಯದವರು ತಡೆದಿದ್ದರಿಂದ ಘರ್ಷಣೆ ಸಂಭವಿಸಿತ್ತು.

ಈ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತ ಹಲವು ಸುತ್ತುಗಳ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ವನ್ನಿಯಾರ್ ಸಮುದಾಯದ ಊರ ಮುಖಂಡರು, ದಲಿತರಿಗೆ ದೇವಾಲಯ ಪ್ರವೇಶಿಸಲು ಅವಕಾಶ ಕೊಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಹೀಗಾಗಿ ಶ್ರೀಧರ್ಮರಾಜ ದ್ರೌಪದಿ ಅಮ್ಮನ್ ದೇವಾಲಯಕ್ಕೆ ಸಿಎಂ ಸ್ಟಾಲಿನ್ ಸರ್ಕಾರ ಬೀಗ ಹಾಕಿದೆ.

ಮುಂಜಾಗ್ರತಾ ಕ್ರಮವಾಗಿ ದೇವಾಲಯಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬರೋಬ್ಬರಿ ಒಂದು ಸಾವಿರ ಪೊಲೀಸರನ್ನು ಗ್ರಾಮದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.