ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಪಾರದರ್ಶಕ ತನಿಖೆಗೆ ಒತ್ತಾಯಿಸಿ ಅವರ ಕುಟುಂಬಸ್ಥರು ರಾಜ್ಯಪಾಲರ ಮೊರೆ ಹೋಗಿದ್ದಾರೆ.
ಈ ಬಗ್ಗೆ ಮೃತ ಸಂತೋಷ್ ಪತ್ನಿ ರೇಣುಕಾ ಪಾಟೀಲ್ ಅವರು ರಾಜ್ಯಪಾಲರಿಗೆ ಪತ್ರದ ಮೂಲಕ ಆತ್ಮಹತ್ಯೆ ಪ್ರಕರಣದ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ, ಈ ಪ್ರಕರಣದ ತನಿಖೆ ಪ್ರಮುಖ ಆರೋಪಿ ಈಶ್ವರಪ್ಪ ನಿರ್ದೇಶನದಂತೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿರುವ ರೇಣುಕಾ ಪಾಟೀಲ್, ಕೇವಲ 15 ದಿನದಲ್ಲಿ ಕೇಸ್ ನಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆಂದು ಕೆಎಸ್ ಈಶ್ವರಪ್ಪ ಹೇಳಿಕೆ ನೀಡುತ್ತಾರೆ. ಈಶ್ವರಪ್ಪ ಮಾಜಿ ಉಪಮುಖ್ಯಮಂತ್ರಿ, ಮಾಜಿ ಸಚಿವ, ಬಿಜೆಪಿ ಮಾಜಿ ರಾಜಾಧ್ಯಕ್ಷ, ಪ್ರಭಾವಿ ಶಾಸಕರಾಗಿದ್ದಾರೆ. ತಮ್ಮ ಹಣಬಲ, ರಾಜಕೀಯ ಬಲ ಬಳಿಸಿ ಆತ್ಮಹತ್ಯೆ ಪ್ರಕರಣ ತನಿಖೆ ದಿಕ್ಕು ತಪ್ಪಿಸಿರುವ ಅನುಮಾನ ಹುಟ್ಟಿಕೊಂಡಿದೆ.
ಪೊಲೀಸ್ ಅಧಿಕಾರಿಗಳು ಈ ಕೇಸ್ ನ ಪ್ರತಿ ಹಂತದ ತನಿಖೆ ಸೋರಿಕೆ ಮಾಡುತ್ತಿದ್ದಾರೆ. ಈ ಮೂಲಕ ಈಶ್ವರಪ್ಪಗೆ ಅನುಕೂಲ ಮಾಡಿ ಕೇಸ್ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ. ಇದೇ ಕಾರಣಕ್ಕಾಗಿ ಈಶ್ವರಪ್ಪ ಅವರ ಬಹಿರಂಗವಾಗಿ ಪ್ರಕರಣದಿಂದ ಹೊರಬರುವ ಮಾತು ಆಡುತ್ತಿದ್ದಾರೆ. ಮಾಜಿ ಸಚಿವರ ಮಾತು ಗಮನಿಸಿದರೆ ಅವರ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ ಅನಿಸುತ್ತಿದೆ. ಕಾನೂನಿನ ಮುಂದೆ ಎಷ್ಟೇ ಪ್ರಭಾವಿಯಾದರೂ ಎಲ್ಲರೂ ಒಂದೇ ಎಂದು ಸಾಬೀತುಪಡಿಸಬೇಕಿದೆ. ಪಾರದರ್ಶಕ ತನಿಖೆ ನಡೆಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಲು ಮನವಿ ಈ ಪತ್ರದ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದು ರಾಜ್ಯಪಾಲರಿಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.