ತುಳುನಾಡಿನ ಭವ್ಯ ಪರಂಪರೆ, ಸಂಸ್ಕೃತಿಗಳ ಪರಿಪಾಲಕರು, ದಾನ ಧರ್ಮಾಧಿಗಳಲ್ಲಿ ಅಗ್ರಗಣ್ಯರು, ಪರೋಪಕಾರಿಗಳು ಆಗಿರುವಂತಹ ಶ್ರೀಮಂತ ಜೈನ ಮನೆತನದ ವಾರಸುದಾರ, ಬಲ್ಲಾಳ್ ಕುಟುಂಬದ ಕಣ್ಮಣಿ ರಾಹುಲ್ ಬಲ್ಲಾಳ್ ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ.
ಕೃಷಿಕರೂ, ಉದ್ಯಮಿಗಳು ಆಗಿರುವಂತಹ ಶಿಸ್ತಿನ ಸಿಪಾಯಿ ಆಗಿರುವ ಜಯವರ್ಮರಾಜ್ ಬಲ್ಲಾಳ್ ಅವರ ಸುಪುತ್ರರಾಗಿದ್ದ ರಾಹುಲ್ ಬಲ್ಲಾಳ್ ಕಾನೂನು ಪಧವೀಧರರು. ತನ್ನ ಕುಟುಂಬದ ಕೃಷಿ ಹಾಗೂ ಹೋಟೇಲ್ ಉದ್ಯಮವನ್ನು ಮುನ್ನಡೆಸಲು ರಾಹುಲ್ ಅವರು ಕುಟುಂಬದ ಹಿರಿಮೆ ಗರಿಮೆಗೆ ಅನುಸಾರವಾಗಿ ವಹಿವಾಟು ನಡೆಸುತ್ತಾ ಬಂದರು.
ಚೆನ್ನೈ, ಬೆಂಗಳೂರು, ಮಂಗಳೂರು , ಮೂಡುಬಿದಿರೆಗಳಲ್ಲಿರುವ ಬೃಹತ್ ಹೋಟೇಲ್ ಗಳು, ವಿವಿಧ ರೀತಿಯ ಕೃಷಿ, ವಿದೇಶಿ ಹಸುಗಳ ಹೈನುಗಾರಿಕೆ ( ರಾಜ್ಯದ ಪ್ರಪ್ರಥಮ ಹವಾನಿಯಂತ್ರಿತ ದನದ ಕೊಟ್ಟಿಗೆ ) , ಸಾರಿಗೆ ವ್ಯವಸ್ಥೆ, ಆಸ್ಪತ್ರೆಗಳು ವಾಹನಗಳ ಅಧಿಕೃತ ಮಾರಾಟಗಾರರು, ಮುಂತಾದ ಕ್ಷೇತ್ರಗಳಲ್ಲಿ ಅಪಾರವಾದ ವ್ಯವಹಾರವನ್ನು ಮಾಡಿದ ಬಲ್ಲಾಳ್ ಕುಟುಂಬದ ಕುಡಿಯಾಗಿ ರಾಹುಲ್ ಬಲ್ಲಾಳ್ ಸರಳ ಸಜ್ಜನ, ಸ್ನೇಹಶೀಲ ವ್ಯಕ್ತಿತ್ವದವರಾಗಿದ್ದರು.
ಬಸದಿಗಳು, ಹಿಂದೂ ದೇವಸ್ಥಾನಗಳು, ಪೂಜಾ ಮಂದಿರಗಳ ಸ್ಥಾಪಕರಾಗಿ, ಭೂತಾಲಯಗಳ ಅನುವಂಶೀಯ ಆಡಳಿತ ಮೊಕ್ತೇಸರರಾಗಿ ನಾಡಿನ ಧಾರ್ಮಿಕ ಪರಂಪರೆಗೆ ತನ್ನದೇ ಆದ ಅನುಪಮ ಕಾಣಿಕೆ ಸಲ್ಲಿಸಿದ ಬಲ್ಲಾಳ್ ಕುಟುಂಬದ ಆಶಾಕಿರಣವಾಗಿ ಹೊರಹೊಮ್ಮಿದವರು ರಾಹುಲ್ ಬಲ್ಲಾಳ್ .
ಬಲ್ಲಾಳ್ ಕುಟುಂಬಸ್ಥರು ಆರ್ಥಿಕವಾಗಿ ಎಷ್ಟು ಶ್ರೀಮಂತರೋ ಅಷ್ಟೇ ಹೃದಯ ಶ್ರೀಮಂತಿಕೆಯಲ್ಲೂ ಮೇಲುಗೈ ಸಾಧಿಸಿದವರು. ಇಂತಹ ಭವ್ಯ ಪರಂಪರೆಯ ಕುಟುಂಬದ ಯುವ ನಾಯಕ ರಾಹುಲ್ ಯುವ ಜನಾಂಗಕ್ಕೆ ಮಾದರಿಯಾದವರು. ತನ್ನ ಆಕರ್ಷಕ ವ್ಯಕ್ತಿತ್ವ, ಸ್ನೇಹಶೀಲತೆಗಳಿಂದ ರಾಹುಲ್ ಎಲ್ಲರನ್ನು ಆಕರ್ಷಿಸಿದ್ದರು.
ಪರರಿಗೆ ಉಪಕಾರ ಮಾಡುವುದರಲ್ಲಿ ರಾಹುಲ್ ಮುಂಚೂಣಿಯಲ್ಲಿದ್ದರು. ಇವರ ಹೋಟೇಲ್ ಮುಂತಾದ ಉದ್ಯಮಗಳಲ್ಲಿ ಅದೆಷ್ಟೋ ಜೈನರು ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರ ಆಸ್ಪತ್ರೆಗಳಲ್ಲಿ ಅದೆಷ್ಟೋ ಬಡವರು ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆದವರಿದ್ದಾರೆ. ಬಡ ಬಗ್ಗರಿಗೆ ಸಹಾಯ ಮಾಡುವುದು ಇವರಿಗೆ ರಕ್ತದಲ್ಲಿ ಬಂದಂತಹ ಪರಂಪರೆಯಾಗಿದೆ.
ಬಲ್ಲಾಳ್ ಮನೆತನದ ಸೇವಾಕೈಂಕರ್ಯಗಳನ್ನು ದಾನ ಧರ್ಮಾಧಿಗಳನ್ನು ರಾಹುಲ್ ಬಲ್ಲಾಳ್ ಮುಂದುವರೆಸಿಕೊಂಡು ಬಂದಿದ್ದರು. ಅವಿಬನಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈಭವದ ಪಂಚಕಲ್ಯಾಣಕ್ಕೆ , ಮಹಾಮಸ್ತಕಾಭಿಷೇಕಗಳಿಗೆ ವೈಭವತೆಯನ್ನು ತಂದುಕೊಟ್ಟವರು ಬಲ್ಲಾಳ್ ಮನೆತನದವರಾಗಿದ್ದಾರೆ. ಬಸದಿಗಳನ್ನು , ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಪಡಿಸಿ ಧಾರ್ಮಿಕ ಪರಂಪರೆಗೆ ಭವ್ಯತೆಯನ್ನು ತಂದವರು ಬಲ್ಲಾಲ್ ಮನೆತನದವರು.
ಶ್ರೀಮಂತಿಕೆಯ ಆಡಂಬರವಿಲ್ಲದೇ ಜನ ಸಾಮಾನ್ಯರೊಡನೆ ಸಾಮಾನ್ಯರಾಗಿ ವ್ಯವಹಾರ ನಡೆಸಿದವರು ರಾಹುಲ್ ಬಲ್ಲಾಳ್ ಅವರು. ತನ್ನ ಸಂಸ್ಥೆಯ ಕೆಲಸಗಾರರಿಗೆ ಪ್ರೀತಿಯ ಯಜಮಾನನಾಗಿ, ಧಾರ್ಮಿಕ ಶೃದ್ಧಾಳುವಾಗಿ ದಾನ ಧರ್ಮಾದಿಗಳಲ್ಲಿ ಅನುಪಮ ಸೇವೆಗೈದು ಪರ್ಯಾಯ ಬದಲಾವಣೆ ಮಾಡಿಕೊಂಡ ಧೀಮಂತ ಯುವ ಮುಂದಾಳು ರಾಹುಲ್ ಬಲ್ಲಾಳ್ ಅವರ ಆತ್ಮಕ್ಕೆ ಸದ್ಗತಿ ದೊರಕಿರಲಿ ಎಂದು ಈ ಲೇಖನ ವಿನಯಾಂಜಲಿಯಾಗಿದೆ.
-ನಿರಂಜನ್ ಜೈನ್ ಕುದ್ಯಾಡಿ