ಶರದ್ ಪವಾರ್‌ಗೆ ಜೀವ ಬೆದರಿಕೆ ಹಾಕಿದ್ದು ಬಿಜೆಪಿ ಕಾರ್ಯಕರ್ತ

ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ಜೀವ ಬೆದರಿಕೆ ಹಾಕಿದ್ದು ಮಹಾರಾಷ್ಟ್ರದ ಅಮರಾವತಿಗೆ ಸೇರಿದ ಬಿಜೆಪಿ ಕಾರ್ಯಕರ್ತ ಸೌರಭ್ ಪಿಂಪಾಲ್ಕರ್ ಎಂದು ತಿಳಿದುಬಂದಿದೆ.

ನಿನಗೂ ನರೇಂದ್ರ ದಾಬೋಲ್ಕರ್ ಗತಿಯೇ ಆಗಲಿದೆ ಎಂದು ಶರದ್ ಪವಾರ್‌ಗೆ ಬೆದರಿಕೆ ಹಾಕುವ ವಾಟ್ಸಪ್ ಸಂದೇಶಗಳು ಬಂದಿವೆ ಎಂದು ಸಂಸದೆ ಸುಪ್ರಿಯಾ ಸುಳೆ ಆರೋಪ ಮಾಡಿದ್ದರು. ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಏಕನಾಥ್ ಶಿಂಧೆ ಆದೇಶದ ಮೇರೆಗೆ ಮುಂಬೈ ಪೊಲೀಸರು ತನಿಖೆ ನಡೆಸಿದ್ದರು.

ಶರದ್ ಪವಾರ್‌ಗೆ ಜೀವ ಬೆದರಿಕೆಯ ಸಂದೇಶ ಕಳಿಸಿದ್ದು ಸೌರಭ್ ಪಿಂಪಾಲ್ಕರ್ ಎನ್ನುವುದು ಪೊಲೀಸ್ ಗೊತ್ತಾಗಿದೆ. ಇದೇ ಬೆದರಿಕೆ ಸಂದೇಶವನ್ನು ಸೌರಭ್ ಪಿಂಪಾಲ್ಕರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ.. ಟ್ವಿಟ್ಟರ್ ಬಯೋದಲ್ಲಿ ಸೌರಭ್ ಪಿಂಪಾಲ್ಕರ್ ತನ್ನನ್ನು ತಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ. 

ಸದ್ಯ ಆರೋಪಿ ಸೌರಭ್ ಪಿಂಪಾಲ್ಕರ್ ಪರಾರಿಯಲ್ಲಿದ್ದಾನೆ. ಆತನ ಮೊಬೈಲ್ ಕೂಡ ಸ್ವಿಚ್ ಆಫ್‌ನಲ್ಲಿದೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಈ ಬಗ್ಗೆ ಸ್ಪಂದಿಸಿದ ಶರದ್ ಪವಾರ್,

ಆರೋಪಿ ಬಿಜೆಪಿ ಕಾರ್ಯಕರ್ತ ಎಂದು ತಿಳಿದುಬಂದಿದೆ. ಇದನ್ನು ತನಿಖಾ ಸಂಸ್ಥೆಗಳು ತೀವ್ರವಾಗಿ ಪರಿಗಣಿಸಿ, ಆತನನ್ನು ಕೂಡಲೇ ಅರೆಸ್ಟ್ ಮಾಡಬೇಕು. ಇದರ ಹಿಂದಿನ ಅಸಲಿ ಸೂತ್ರದಾರರು ಯಾರು ಎನ್ನುವುದನ್ನು ಬಹಿರಂಗಪಡಿಸಬೇಕು

ಎಂದು ಆಗ್ರಹಿಸಿದ್ದಾರೆ.

ಅಮರಾವತಿ ವಿವಿಯ ಕಾನೂನು ಪರೀಕ್ಷೆಯ ಪೇಪರ್ ಲೀಕ್ ಹಗರಣದಲ್ಲಿ ಸೌರಭ್ ಪಿಂಪಾಲ್ಕರ್ ಆರೋಪಿಯಾಗಿದ್ದಾನೆ.