ADVERTISEMENT
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿದೆ. ಮಾರ್ಚ್ 17ರಂದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಿದೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಪದ್ಮರಾಜ್ ರಾಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದಕ್ಕೆ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿಕ್ಷಣ ವೆಬ್ಸೈಟ್ಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಯೋಗಕ್ಕೆ ಮುಂದಾಗಿದೆ.
ಯಾರು ಪದ್ಮರಾಜ್ ರಾಮಯ್ಯ..?
ಪದ್ಮರಾಜ ರಾಮಯ್ಯ ಅವರು ಮಾಜಿ ಕೇಂದ್ರ ಸಚಿವ, ಬಿಲ್ಲವ ಸಮುದಾಯದ ನಾಯಕ ಜನಾರ್ದನ ಪೂಜಾರಿ ಅವರ ಆಪ್ತ ಶಿಷ್ಯ. ಪ್ರಸಿದ್ಧ ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ. ವೃತ್ತಿಯಲ್ಲಿ ವಕೀಲರು ಆಗಿರುವ ಪದ್ಮರಾಜ್ ಅವರು ಗುರು ಬೆಳದಿಂಗಳು ಎಂಬ ಸಂಸ್ಥೆ ಮೂಲಕವೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಟಿಕೆಟ್ಗಾಗಿ ಅರ್ಜಿ ಸಲ್ಲಿಸಿಲ್ಲ:
ಅಂದಹಾಗೆ ಪದ್ಮರಾಜ ರಾಮಯ್ಯ ಅವರು ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿಲ್ಲ. ಮಾಜಿ ಶಾಸಕ ಜೆ ಆರ್ ಲೋಬೋ ಮತ್ತು ಮಾಜಿ ಎಂಎಲ್ಸಿ ಐವಾನ್ ಡಿಸೋಜಾ ಈ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿತರು.
ಪದ್ಮರಾಜ್ ರಾಮಯ್ಯ ಅವರಿಗೆ ಟಿಕೆಟ್ ಹಿಂದಿನ ಲೆಕ್ಕಾಚಾರ:
ಮಾಹಿತಿಗಳ ಪ್ರಕಾರ ಈ ಬಾರಿ ಪದ್ಮರಾಜ ರಾಮಯ್ಯ ಅವರಿಗೆ ಟಿಕೆಟ್ ಕೊಡುವ ತೀರ್ಮಾನದ ಹಿಂದೆ ಜಾತಿ ಸಮೀಕರಣ ಹೊಸ ಲೆಕ್ಕಾಚಾರವನ್ನು ಕಾಂಗ್ರೆಸ್ ಹೆಣೆದಿದೆ.
ಪದ್ಮರಾಜ್ ಅವರು ಬಿಲ್ಲವ ಸಮುದಾಯದ ನಾಯಕ. ಬಿಲ್ಲವರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡವರು.
ಈ ಕ್ಷೇತ್ರದಲ್ಲಿ ಬಿಲ್ಲವ, ಕ್ರೈಸ್ತ, ಮುಸಲ್ಮಾನ ಮತ್ತು ಕೊಂಕಣಿ ಸಮುದಾಯದವರ ಮತಗಳು ಅಧಿಕ ಇವೆ.
ಈ ಬಾರಿ ಕ್ರಿಶ್ಚಿಯನ್ ಮತ್ತು ಮುಸಲ್ಮಾನ ಸಮುದಾಯದವರೂ ಪದ್ಮರಾಜ್ ಅವರಿಗೆ ಟಿಕೆಟ್ ಕೊಟ್ಟರೆ ಒಳ್ಳೆದು ಎಂಬ ಅಭಿಪ್ರಾಯದಲ್ಲಿದ್ದಾರೆ ಎನ್ನುವುದು ಮಾಹಿತಿ.
ಈ ಹಿಂದೆ ಈ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಸಮುದಾಯದ ಜೆ ಆರ್ ಲೋಬೋಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.
ಹೊಸ ಬಿಲ್ಲವ ನಾಯಕನಿಗೆ ಟಿಕೆಟ್ ಕೊಡುವ ಮೂಲಕ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಲ್ಲವ ಮತಗಳನ್ನು ಸೆಳೆಯಲು ಸಹಕಾರಿ ಆಗಬಹುದು ಎನ್ನುವುದು ಕಾಂಗ್ರೆಸ್ನ ಲೆಕ್ಕಾಚಾರ.
ADVERTISEMENT