ಗುರುಗಳನ್ನು ಭೇಟಿ ಆಗಿ ಆರ್ಶೀವಾದ ಪಡೆದ ಆಂಧ್ರದ ನಿಯೋಜಿತ ರಾಜ್ಯಪಾಲ ನ್ಯಾ. ಅಬ್ದುಲ್​ ನಜೀರ್​

ಆಂಧ್ರಪ್ರದೇಶದ ನಿಯೋಜಿತ ರಾಜ್ಯಪಾಲ ಮತ್ತು ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಅಬ್ದುಲ್​ ನಜೀರ್​ ಅವರು ಪತ್ನಿ ಸಮೇತ ತಮ್ಮ ಗುರುಗಳಾದ ಖ್ಯಾತ ವಕೀಲ ಎಂ ಕೆ ವಿಜಯ್​ ಕುಮಾರ್​ ಅವರನ್ನು ಭೇಟಿ ಆಗಿ ಆರ್ಶೀವಾದ ಪಡೆದರು.
ಕಾರ್ಕಳದಲ್ಲಿರುವ ಎಂಕೆ ವಿಜಯ್​ ಕುಮಾರ್​ ಅವರ ನಿವಾಸ ಸುವ್ರತ ಭವನದಲ್ಲಿ ಈ ಭೇಟಿ ನಡೆಯಿತು.

ಹಿರಿಯ ನ್ಯಾಯವಾದಿ ಎಂ ಕೆ ವಿಜಯ್ ಕುಮಾರ್ ತಮ್ಮ ಶಿಷ್ಯ ನ್ಯಾಯಮೂರ್ತಿ ಶ್ರೀ ಅಬ್ದುಲ್ ನಜೀರ್​ರವರು ಭಾರತೀಯ ನ್ಯಾಯಾಂಗಕ್ಕೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು.

ಅಯೋಧ್ಯಾ ಪ್ರಕರಣದ ಬಗೆಹರಿಸುವಲ್ಲಿ ಅವರ ಐತಿಹಾಸಿಕ ತೀರ್ಪು , ತಲಾಖ್ ಪ್ರಕರಣದಲ್ಲಿ ಮುಸಲ್ಮಾನ ಮಹಿಳೆಯರ ಪರವಾದ ಚಾರಿತ್ರಿಕ ತೀರ್ಪು,  ಭಾರತೀಯ ಕ್ರಿಕೆಟ್ ಮಂಡಳಿಯ ಸ್ವಾಯತ್ತತೆಯ ಬಗೆಗಿನ ತೀರ್ಪು,  ಬೆಂಗಳೂರು ನಗರದ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗೆಗಿನ ಮಹತ್ವದ ತೀರ್ಪು ನೀಡಿದ್ದಾರೆ.

ತುಳುನಾಡಿನ ಕಂಬಳದ ನ್ಯಾಯಬದ್ದತೆಯನ್ನು ಎತ್ತಿಹಿಡಿದ ತೀರ್ಪು,  ಭಾರತೀಯ ನಾಗರಿಕರ ಖಾಸಗೀತನದ ಹಕ್ಕನ್ನು (Right to Privacy) ಮೂಲಭೂತ ಹಕ್ಕೆಂದು ಸಾರಿದ ಚಾರಿತ್ರಿಕ ತೀರ್ಪು, ಈ ರೀತಿಯ ಹಲವಾರು ಪ್ರಕರಣಗಳಲ್ಲಿ ಅತ್ಯಂತ ನ್ಯಾಯಬದ್ಧವಾಗಿ‌ ಹಾಗೂ ಸಂವಿಧಾನ ಬದ್ದವಾಗಿ ಅವರು ನೀಡಿರುವ ನೂರಾರು ತೀರ್ಪುಗಳು ಮುಂದಿನ ಹಲವು ಕಾಲ ಭಾರತೀಯ ನ್ಯಾಯವ್ಯವಸ್ಥೆಗೆ ದಾರಿ ದೀಪವಾಗಲಿದೆ .

ಕರ್ನಾಟಕ ಹಾಗೂ ಕರ್ನಾಟಕದ ಕರಾವಳಿಯ ನ್ಯಾಯಾಲಯಗಳ ಮೂಲ ಸೌಕರ್ಯ ಅಭಿವೃದ್ದಿ, ಬ್ರಹತ್ ನೂತನ ಮತ್ತು ಅತ್ಯಂತ ಸುಸಜ್ಜಿತ ನ್ಯಾಯಾಂಗ ಕಟ್ಟಡಗಳ ನಿರ್ಮಾಣ,  ವಕೀಲರ ಸಂಘಗಳ ಕಟ್ಟಡ ನಿರ್ಮಾಣ , ಯುವ ವಕೀಲರ ಕಲ್ಯಾಣ, ನ್ಯಾಯಾಂಗ ಸಿಬ್ಬಂದಿಯ ಯಶೋಭಿವ್ರದ್ದಿ ಈ ಮೊದಲಾದ ಕಾರ್ಯಗಳಲ್ಲಿ ಅತ್ಯಂತ ಕಾಳಜಿ ವಹಿಸಿ ಕಾರ್ಯನಿರ್ವಹಿಸಿದ್ದಾರೆ 

ಎಂದು ಹಿರಿಯ ವಕೀಲ ಎಂ ಕೆ ವಿಜಯ್​ ಕುಮಾರ್​ ಅವರು ಪ್ರಶಂಸಿದರು.

ರಾಜ್ಯಪಾಲರಾಗಿಯೂ ತಾವು ನ್ಯಾಯಬದ್ದವಾಗಿ ಮತ್ತು ಸಂವಿಧಾನಬದ್ದರಾಗಿ ಕಾರ್ಯನಿರ್ವಸುತ್ತೀರಿ ಎನ್ನುವ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ ಎಂಕೆ ವಿಜಯ್​ ಕುಮಾರ್​ ಅವರು, ಈ ಹಿಂದಿನಂತೆ ರಾಷ್ಟ್ರ ಧರ್ಮ ಪಾಲನೆ ಹಾಗೂ ಜನಕಲ್ಯಾಣ ಕಾರ್ಯಗಳಲ್ಲಿ ಸದಾ ತೊಡಗಿ ಯಶಸ್ಸನ್ನು ಸಾಧಿಸಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಮತ್ತು ಬಿಹಾರದ ರಾಜ್ಯಪಾಲರಾಗಿದ್ದ ದಿವಂಗತ ರಾಮಾ ಜೋಯಸ್ ಅವರು ಬರೆದಿರುವ ಕೃತಿಗಳಾದ ‘ Dharma and Global ethics ‘ ಮತ್ತು Legal and constitutional history of India ‘ ಎನ್ನುವ ಪುಸ್ತಕಮಾಲಿಕೆಗಳನ್ನು ನ್ಯಾಯಮೂರ್ತಿ ಅಬ್ದುಲ್ ನಜೀರ್​ ಅವರಿಗೆ ಸ್ಮರಣಿಕೆಯಾಗಿ ನೀಡಿದರು.
ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಮೂಡಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ ಕೆ ದಿವಿಜೇಂದ್ರ ಕುಮಾರ್ ,  ನ್ಯಾಯವಾದಿಗಳಾದ ಎಂ ಕೆ ಸುವ್ರತ್ ಕುಮಾರ್ , ಮುರಲೀದರ್ ಭಟ್,  ಎಂ‌ ಕೆ ವಿಪುಲ್ ತೇಜ್ , ಪದ್ಮಪ್ರಸಾದ್ ಜೈನ್, ಶ್ವೇತಾ ವಿಪುಲ್, ಪರೀತೋಷ್ , ಇತಿಹಾಸ್ , ಎಂ‌ ಕೆ ವಿದಿತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here