ಮಹಾರಾಷ್ಟ್ರದಲ್ಲಿ ಸಂಭವಿಸಿದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್ ಪವಾರ್ ಎನ್ಸಿಪಿಯಿಂದ ಹೊರಬಂದಿದ್ದಾರೆ. ಈ ಮೂಲಕ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಯಾಗಿದ್ದಾರೆ.
ಅಜಿತ್ ಪವಾರ್ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅವರ ಜೊತೆಗೆ ಇವರು ಡಿಸಿಎಂ ಹುದ್ದೆ ಹಂಚಿಕೊಳ್ಳಲಿದ್ದಾರೆ.
ಅವರ ಜೊತೆಗೆ ಎನ್ಸಿಪಿಯ 8 ಮಂದಿ ಶಾಸಕರು ಕೂಡಾ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹಿರಿಯ ಎನ್ಸಿಪಿ ನಾಯಕ ಛಗನ್ ಭುಜಬಲ್, ಹಸನ್ ಮುಶ್ರಿಫ್, ವಾಲ್ಸೆ ಪಾಟೀಲ್, ಧನಂಜಯ್ ಮುಂಡೆ, ಅದಿತಿ ತಟ್ಕರೆ, ಅನಿಲ್ ಭಾಯ್ದಾಸ್ ಪಾಟೀಲ್, ಬಾಬುರಾವ್ ಆತ್ಮಾರಾಮ್, ಸಂಜಯ್ ಬನ್ಸೋಡೆ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಲಿಸಲಿದ್ದಾರೆ.
ಈ ಮೂಲಕ ಶರದ್ ಪವಾರ್ ಅವರ ಪಕ್ಷ ಎನ್ಸಿಪಿ ವಿಭಜನೆಯಾಗಿದೆ.
ಅಜಿತ್ ಪವಾರ್ ಬಣದಲ್ಲಿ ಎನ್ಸಿಪಿಯ 43 ಮಂದಿ ಶಾಸಕರಿದ್ದಾರೆ. ಬಿಜೆಪಿ ಮತ್ತು ಏಕನಾಥ್ ಶಿಂಧೆ ಬಣದ ಸಮ್ಮಿಶ್ರ ಸರ್ಕಾರಕ್ಕೆ ಈ ಶಾಸಕರು ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಪತ್ರ ರವಾನಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸ್ಥಾನ ಬೇಡ ಎಂದಿದ್ದ ಅಜಿತ್ ಪವಾರ್ ಅವರು ಎನ್ಸಿಪಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಶರದ್ ಪವಾರ್ ಆ ಬೇಡಿಕೆಯನ್ನು ನಿರಾಕರಿಸಿದ್ದರು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್ಸಿಪಿ 54 ಶಾಸಕರನ್ನು ಹೊಂದಿದೆ. 43 ಶಾಸಕರು ಹೊರಬಂದಿರುವ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ನಿಯಮದಿಂದ ಪಾರಾಗಲಿದ್ದಾರೆ.
ADVERTISEMENT
ADVERTISEMENT