ADVERTISEMENT
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಗೆ ಏಳು ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದಾರೆ.
ಎಡಪಕ್ಷಗಳ ಆಡಳಿತವಿರುವ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಗೈರಾಗಿದ್ದಾರೆ. ಆದರೆ ಸಭೆಗೆ ಹೋಗದೇ ಇರುವುದಕ್ಕೆ ನಿರ್ದಿಷ್ಟ ಕಾರಣ ನೀಡಿಲ್ಲ.
ಆಮ್ ಆದ್ಮಿ ಪಕ್ಷದ ಆಡಳಿತ ಇರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಅವರು ಪಂಜಾಬ್ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ನೀತಿ ಆಯೋಗದ ಸಭೆಗೆ ಗೈರಾಗಿದ್ದಾರೆ. ರಾಜ್ಯದ ಪರವಾಗಿ ನಾವು ಎತ್ತಿರುವ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸುವವರೆಗೆ ನೀತಿ ಆಯೋಗದ ಸಭೆಗೆ ಹಾಜರಾಗಿ ಏನೂ ಪ್ರಯೋಜವಿಲ್ಲ, ಈ ಸಭೆ ಕೇವಲ ಫೋಟೋ ತೆಗೆಸಿಕೊಳ್ಳಷ್ಟೇ ಸೀಮಿತ ಎಂದು ಸಿಎಂ ಮನ್ ಆಕ್ರೋಶ ಹೊರಹಾಕಿದ್ದಾರೆ.
ದೆಹಲಿ ಸರ್ಕಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ಸಭೆಗೆ ಗೈರಾಗಿದ್ದಾರೆ. ದೆಹಲಿ ಆಡಳಿತದಲ್ಲಿ ಅಲ್ಲಿನ ಸರ್ಕಾರಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಿದ್ದ ಸುಪ್ರೀಂಕೋರ್ಟ್ನ್ನು ಐತಿಹಾಸಿಕ ತೀರ್ಪನ್ನು ಉಲ್ಲಂಘಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವ ಹೊಸ ಕಾನೂನನ್ನು ವಿರೋಧಿಸಿ ನೀತಿ ಆಯೋಗದ ಸಭೆಗೆ ದೆಹಲಿ ಸಿಎಂ ಗೈರಾಗಿದ್ದಾರೆ.
ಬಿಜೆಪಿ ವಿರುದ್ಧ ರಾಷ್ಟ್ರರಾಜಕಾರಣದಲ್ಲಿ ಮೈತ್ರಿಕೂಟ ರಚಿಸುವ ಪ್ರಯತ್ನದಲ್ಲಿರುವ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡಾ ಗೈರಾಗಿದ್ದಾರೆ.
ADVERTISEMENT