ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದು ಐದು ವರ್ಷಗಳಲ್ಲಿ ಕೃಷ್ಣ, ಮೇಕೆದಾಟು ಯೋಜನೆ ಜಾರಿಗೆ ತರದೇ ಹೋದರೆ ಜೆಡಿಎಸ್ ವಿಸರ್ಜಿಸುತ್ತೇನೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಶನಿವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕನಿಷ್ಠ 4-5 ಲಕ್ಷ ಕೋಟಿ ರೂಪಾಯಿ ಬೇಕಿದೆ.
ಇನ್ನೂ ನೂರು ವರ್ಷ ಕಾಂಗ್ರೆಸ್ – ಬಿಜೆಪಿ ದೇಶ ಆಳಿದರೂ ಮೇಕೆದಾಟು ಯೋಜನೆಗೆ ಚಾಲನೆ ನೀಡುವುದಿಲ್ಲ. ಈಗಾಗಲೇ ಯೋಜನೆ ವೆಚ್ಚ 12 ಸಾವಿರ ಕೋಟಿಗೆ ಏರಿಕೆ ಆಗಿದೆ. ಯೋಜನೆಗೆ ಚಾಲನೆ ನೀಡುವ ವೇಳೆಗೆ ವೆಚ್ಚ 20 ಸಾವಿರ ಕೋಟಿ ರೂಪಾಯಿಗೆ ಏರಿಕೆ ಆಗಬಹುದು.
ಮುಸ್ಲಿಮರ ವಿರುದ್ಧ ಇದೀಗ ಟ್ಯಾಕ್ಸಿ , ಆಟೋ ಏರಬಾರದು ಎಂದು ಹೊಸತಾಗಿ ಅಭಿಯಾನ ಶುರುವಾಗಿದೆ. ಇದು ಎಲ್ಲಿಗೆ ಮುಟ್ಟುತ್ತದೆಯೋ ಗೊತ್ತಿಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಹೊತ್ತಿ ಉರಿಯುತ್ತಿದೆ. ಇಡೀ ಹಿಂದು- ಮುಸ್ಲಿಂ ಸಮುದಾಯದ ನಡುವೆ ಬಿರುಕು ಮೂಡಿಸುವ ಪ್ರಯತ್ನ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಿತೂರಿಯಿಂದ ಮುಸ್ಲಿಮರು ಜೆಡಿಎಸ್ ಗೆ ಹೆಚ್ಚು ಮತ ಹಾಕಲಿಲ್ಲ. ಇದರಿಂದ ನಾವು 38 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡೆವು. ಇಲ್ಲದಿದ್ದರೆ ಕನಿಷ್ಠ 70 ಸ್ಥಾನ ಗೆಲ್ಲುತ್ತಿದ್ದೆವು ಎಂದು ಹೇಳಿದ್ದಾರೆ.