ಮದ್ಯಪಾನ ಹಗರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ದೆಹಲಿ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪರಮಾಪ್ತ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದೆ.
ಮನೀಶ್ ಸಿಸೋಡಿಯಾ ಅವರನ್ನು ಇವತ್ತು ಸಿಬಿಐ ವಿಚಾರಣೆಗೆ ಕರೆದಿತ್ತು. ವಿಚಾರಣೆಗೆ ಹಾಜರಾದ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ.
ನವೆಂಬರ್ 21, 2021ರಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ದೆಹಲಿಯಲ್ಲಿ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು.
DSIDC, DTTDC, DSCSC ಮತ್ತು DCCWS ಮೂಲಕ ದೆಹಲಿಯಲ್ಲಿ ಸರ್ಕಾರದಿಂದ ಮದ್ಯ ಪೂರೈಕೆ ಮತ್ತು ಮಾರಾಟ ಆಗುತ್ತಿತ್ತು. ಆದರೆ ಹೊಸ ಅಬಕಾರಿ ನೀತಿಯಲ್ಲಿ ಈ ಸರ್ಕಾರಿ ಕಂಪನಿಗಳ ಬಳಿ ಮದ್ಯ ಮಾರಾಟದ ಅನುಮತಿಯನ್ನು ಹಿಂಪಡೆದು ಖಾಸಗಿಯವರಿಗೆ ಹಂಚಿಕೆ ಮಾಡಲಾಯಿತು.
ಜೊತೆಗೆ ಒಂದು ವೇಳೆ ಖಾಸಗಿಯವರು ಮದ್ಯ ಮಾರಾಟದ ಪರವಾನಿಗೆಯನ್ನು ಪಡೆಯಲು ಅವರು ವಾರ್ಷಿಕ ಕನಿಷ್ಠ 150 ಕೋಟಿ ರೂಪಾಯಿಯಷ್ಟು ವಹಿವಾಟನ್ನು ಮೂರು ವರ್ಷದಲ್ಲಿ ನಡೆಸಿರಬೇಕು ಎಂಬ ಷರತ್ತು ಹೊಸ ಅಬಕಾರಿ ನೀತಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ವಿಧಿಸಿತ್ತು.
ಹೊಸ ಅಬಕಾರಿ ನೀತಿಯಿಂದಾಗಿ ದೆಹಲಿಯಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಮದ್ಯ ವಹಿವಾಟು ನಡೆಸುತ್ತಿದ್ದ ಉದ್ಯಮಿಗಳಿಗೆ ದೊಡ್ಡ ಆಘಾತ ಆಯಿತು. ಸರ್ಕಾರದ ವಿಧಿಸಿದ್ದ ಹೊಸ ಬಿಡ್ಡಿಂಗ್ ಷರತ್ತಿನಿಂದಾಗಿ ಅರ್ಹತೆ ಕಳೆದುಕೊಂಡು ಸಣ್ಣ ಮದ್ಯ ವ್ಯಾಪಾರಸ್ಥರು ಸರ್ಕಾರ ತಮಗೆ ಈ ಹಿಂದೆ ನೀಡಿದ್ದ ಪರವಾನಿಗೆಯನ್ನು ವಾಪಸ್ ನೀಡಿದರು.
ಆಮ್ ಆದ್ಮಿ ಪಕ್ಷದ ಹೊಸ ಅಬಕಾರಿ ನೀತಿ ದೊಡ್ಡ ಮದ್ಯ ಉದ್ಯಮಿಗಳಷ್ಟೇ ಲಾಭ ಎಂದು ಆರೋಪಿಸಿ ದೆಹಲಿ ಮದ್ಯ ಮಾರಾಟ ಸಂಘ ದೂರನ್ನು ನೀಡಿತ್ತು.
ಬಿಜೆಪಿ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಈ ಸಂಬಂಧ ಸಿಬಿಐಗೂ ದೂರು ನೀಡಿದ್ದರು.
ADVERTISEMENT
ADVERTISEMENT