ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ದೋಷಿ ಎಂದು ಸಾಬೀತಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ಗೆ 5 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಹಾಗೂ 60 ಲಕ್ಷ ರೂ.ಗಳ ದಂಡ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯವು ಕಳೆದ ವಾರ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ನೀಡಿತ್ತು. ಇದೀಗ ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ.
ಜಾರ್ಖಂಡ್ನ ಡೊರಾಂಡೋ ಖಜಾನೆಯ ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಮತ್ತು ಅಂತಿಮ ತೀರ್ಪು ನೀಡಿದ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯ 99 ಜನ ಆರೋಪಿಗಳಲ್ಲಿ, ಇತರ 75 ಆರೋಪಿಗಳೊಂದಿಗೆ ಅವರನ್ನು ದೋಷಿ ಎಂದೂ, 24 ಜನರ ವಿರುದ್ಧ ಸಾಕ್ಷಾಧಾರಗಳು ಇಲ್ಲದ ಕಾರಣ ನಿರ್ದೋಷಿಗಳನ್ನಾಗಿ ಕೋರ್ಟ್ ಪ್ರಕಟಿಸಿತ್ತು.
ಕಳೆದ ಜನವರಿ 29 ರಂದು ಲಾಲೂ ಪ್ರಸಾದ್ ಯಾದವ್ ಅವರನ್ನು ಒಳಗೊಂಡಿರುವ 139.35 ಕೋಟಿ ರೂಪಾಯಿ ಡೊರಾಂಡಾ ಖಜಾನೆ ಅವ್ಯವಹಾರ ಪ್ರಕರಣದ ವಾದಗಳನ್ನು ಆಲಿಸಿದ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಕೊನೆಯ ಆರೋಪಿ ಶೈಲೇಂದ್ರ ಕುಮಾರ್ ಪರವಾಗಿ ಜನವರಿ 29 ರಂದು ವಾದವನ್ನು ಪೂರ್ಣಗೊಳಿಸಲಾಯಿತು. ತೀರ್ಪಿನ ದಿನದಂದು ಎಲ್ಲಾ ಆರೋಪಿಗಳನ್ನು ನ್ಯಾಯಾಲಯದಲ್ಲಿ ಭೌತಿಕವಾಗಿ ಹಾಜರುಪಡಿಸಲು ಆದೇಶಿಸಲಾಗಿತ್ತು.
ಅವಿಭಜಿತ ಬಿಹಾರದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಸಾರ್ವಜನಿಕ ಹಣವನ್ನು ವಂಚನೆಯಿಂದ ಹಿಂತೆಗೆದುಕೊಳ್ಳುವ ರೂ 950 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಒಟ್ಟು 170 ಚಾರ್ಜ್ ಶೀಟ್ಗಳನ್ನು ಸಲ್ಲಿಸಿತ್ತು. ಲಾಲೂ ಸೇರಿದಂತೆ ಮಾಜಿ ಸಂಸದ ಜಗದೀಶ್ ಶರ್ಮಾ, ಅಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಧ್ರುವ ಭಗತ್, ಪಶುಸಂಗೋಪನಾ ಕಾರ್ಯದರ್ಶಿ ಬೆಕ್ ಜೂಲಿಯಸ್ ಮತ್ತು ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ.ಕೆ.ಎಂ.ಪ್ರಸಾದ್ ಪ್ರಮುಖ ಆರೋಪಿಗಳಾಗಿದ್ದಾರೆ, ಪ್ರಸ್ತುತ 99 ಮಂದಿ ವಿಚಾರಣೆ ಎದುರಿಸುತ್ತಿದ್ದರೆ, ಬಿಹಾರದ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್ ಮಿಶ್ರಾ ಸೇರಿದಂತೆ 55 ಆರೋಪಿಗಳು ಸಾವನ್ನಪ್ಪಿದ್ದಾರೆ, ಏಳು ಮಂದಿ ಸರ್ಕಾರಿ ಸಾಕ್ಷಿಯಾಗಿದ್ದಾರೆ, ಇಬ್ಬರು ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಆರು ಮಂದಿ ತಲೆಮರೆಸಿಕೊಂಡಿದ್ದಾರೆ.
ಏನಿದು ಮೇವು ಹಗರಣ..?
1996ರ ಜನವರಿಯಲ್ಲಿ ಅವಿಭಜಿತ ಬಿಹಾರ ರಾಜ್ಯದ ಪಶು ಸಂಗೋಪನಾ ಇಲಾಖೆ ಮೇಲೆ ಸಿಬಿಐ ದಾಳಿ ನಡೆಸಿದ ಬಳಿಕ ‘ಮೇವು ಹಗರಣ’ ಬೆಳಕಿಗೆ ಬಂದಿತ್ತು. ಸಿಬಿಐ ಜೂನ್ 1997 ರಲ್ಲಿ ಪ್ರಸಾದ್ ಅವರನ್ನು ಆರೋಪಿ ಎಂದು ಹೆಸರಿಸಿ, ಲಾಲು ಮತ್ತು ಮಾಜಿ ಬಿಹಾರ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ವಿರುದ್ಧ ಆರೋಪಗಳನ್ನು ದಾಖಲಿಸಿತು. ಸೆಪ್ಟೆಂಬರ್ 2013 ರಲ್ಲಿ, ವಿಚಾರಣಾ ನ್ಯಾಯಾಲಯವು ಮೇವು ಹಗರಣಕ್ಕೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಲಾಲು, ಮಿಶ್ರಾ ಮತ್ತು ಇತರ 45 ಜನರನ್ನು ದೋಷಿ ಎಂದು ಘೋಷಿಸಿತು ಮತ್ತು ಲಾಲು ಅವರನ್ನು ರಾಂಚಿ ಜೈಲಿನಲ್ಲಿರಿಸಲಾಯಿತು. ಡಿಸೆಂಬರ್ 2013 ರಲ್ಲಿ, ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಲಾಲು ಅವರಿಗೆ ಜಾಮೀನು ನೀಡಿತು. ಡಿಸೆಂಬರ್ 2017 ರಲ್ಲಿ, ಸಿಬಿಐ ನ್ಯಾಯಾಲಯವು ಲಾಲು ಮತ್ತು ಇತರ 15 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿ ಬಿರ್ಸಾ ಮುಂಡಾ ಜೈಲಿಗೆ ಕಳುಹಿಸಿತ್ತು.