ಏಳು ಬಾರಿ ಸತತವಾಗಿ ಮೇಲ್ಮನೆಗೆ ಆರಿಸಿಬಂದು ಹಿರಿಯ ಸದಸ್ಯರಾಗಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಮಾತೃ ಪಕ್ಷವಾದ ಜೆಡಿಎಸ್ ನಿಂದ ಒಂದು ಕಾಲು ಹೊರಗೆ ಇಟ್ಟಿದ್ದು, ಬಿಜೆಪಿಯತ್ತ ವಾಲಿದ್ದಾರೆ. ಈ ಬಾರಿ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ತಮ್ಮ ಅದೃಷ್ಟ ಪರೀಕ್ಷಿಸಲು ಸಜ್ಜಾಗಿದ್ದಾರೆ. ತಾವು ಬಿಜೆಪಿ ಸೇರುವುದಾಗಿ ಬಸವರಾಜ ಹೊರಟ್ಟಿ ನಿನ್ನೆಯಷ್ಟೇ ಅಧಿಕೃತವಾಗಿ ಘೋಷಿಸಿಯಾಗಿದೆ.
ಹೊರಟ್ಟಿ ಅವರ ಈ ನಿರ್ಧಾರದ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಮೊದಲಿಗೆ ಸಭಾಪತಿ ಹೊರಟ್ಟಿ ಹೇಳಿಕೆಯಿಂದ ನನಗೆ ಶಾಕ್ ಆಗಲಿಲ್ಲ ಎಂದಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರು ಖರ್ಚು ಮಾಡ್ತಾರೆ. ಅಷ್ಟೊಂದು ಖರ್ಚು ಮಾಡಲು ನನ್ನಿಂದ ಸಾಧ್ಯವಿಲ್ಲ ಅಂತಿದ್ದರು ಹೊರಟ್ಟಿ. ಅವರಿವರು ಕರೆಯುತ್ತಿದ್ದಾರೆ ಎಂದೂ ಕಳೆದ ವಾರವೇ ಹೇಳಿದ್ದರು. ನನಗಾಗಿ ನಿಮ್ಮ ಭವಿಷ್ಯ ಹಾಳುಮಾಡಿಕೊಳ್ಳಬೇಡಿ ಹೋಗಿ ಎಂದು ತಿಳಿಸಿದ್ದಾಗಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ 100ಕ್ಕೂ ಹೆಚ್ಚು ನಾಯಕರು ಜೆಡಿಎಸ್ನಿಂದ ಹೊರಹೋಗಿದ್ದಾರೆ. ಬಸವರಾಜ ಹೊರಟ್ಟಿ 101ನೇಯವರು, ಆದರೂ ಪಕ್ಷ ಉಳಿದಿದೆ. ಪಕ್ಷಕ್ಕೆ ಮತ್ತೊಬ್ಬ ಹೊರಟ್ಟಿ, ಮತ್ತೊಬ್ಬ ಕೋನರೆಡ್ಡಿ ಬರಬಹುದು. ಅವರಿದ್ದಾಗ ಏನು ಬಾಂಬೆ ಕರ್ನಾಟಕ ಉದ್ಧಾರ ಆಗಿತ್ತಾ? ಎಂದು ಪ್ರಶ್ನಿಸಿರುವ ಕುಮಾರಸ್ವಾಮಿಯವರು, ಹೊರಟ್ಟಿಯವರ ಭವಿಷ್ಯವನ್ನು ನಾನ್ಯಾಕೆ ಹಾಳು ಮಾಡಲಿ ಎಂದಿದ್ದಾರೆ.