ತ್ರಿವಿಧ ದಳಗಳ ಸೈನಿಕ ನೇಮಕಾತಿಗಾಗಿ ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದ ಅಗ್ನಿಪಥ ಯೋಜನೆಗೆ ದೇಶದ ಹಲವೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ನಾಲ್ಕು ವರ್ಷದ ಸರ್ವೀಸ್ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ತಮ್ಮನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿರುವ ಯುವಕರು ಕಿಡಿಕಾರಿದ್ದಾರೆ. ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿದ್ದಾರೆ. ಶಸ್ತ್ರಾಸ್ತ್ರ ಸೇನೆಯ ಶೌರ್ಯ, ಪರಾಕ್ರಮದ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಿಯಾಗಬಾರದು ಎಂದು ಒತ್ತಾಯಿಸಿದ್ದಾರೆ. ಹಾಗೆಯೇ ಕೆಲವರು ಹಲವು ಸೂಚನೆ ನೀಡಿದ್ದಾರೆ.
ಅಗ್ನಿಪಥ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಬಿಹಾರದ ಪಾಟ್ನಾ, ಮುಜಾಫರ್ಪುರ್, ಬಕ್ಸಾರ್, ಬೆಗುಸರಾಯ್ ಮತ್ತು ರಾಜಸ್ತಾನದ ಜೈಪುರ ಸೇರಿ ಹಲವೆಡೆ ಯುವಕರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಾಲ್ಕು ವರ್ಷ ಮಾತ್ರ ಸರ್ವೀಸ್ ಅಂದರೇ ಹೇಗೆ..? 4 ವರ್ಷದ ನಂತರ ಏನು ಮಾಡಬೇಕು. ಮತ್ತೆ ಸರ್ಕಾರಿ ಉದ್ಯೋಗ ಪಡೆಯಲು ಪೈಪೋಟಿ ನಡೆಸಬೇಕೇ..? ನಮ್ಮಲ್ಲಿ ಆಗ ಓದಿನ ತಾಳ್ಮೆ ಉಳಿದಿರುತ್ತದೆಯೇ ಎಂದು ಸೇನೆ ಸೇರಲು ತಯಾರಿ ಮಾಡಿಕೊಳ್ಳುತ್ತಿರುವ ಯುವಕರು ಪ್ರಶ್ನೆ ಮಾಡುತ್ತಾರೆ.
ನಾನು ಎರಡು ವರ್ಷದಿಂದ ಓಡುತ್ತಿರುವೆ. ಶರೀರವನ್ನು ಮತ್ತಷ್ಟು ಸದೃಢ ಮಾಡಿಕೊಳ್ಳುತ್ತಿವೆ. ಈಗ ನಾಲ್ಕು ವರ್ಷ ಮಾತ್ರ ಸರ್ವೀಸ್ ಮಾಡಬೇಕಾ? ಎಂದು ಕಳೆದ ಕೆಲ ದಿನಗಳಿಂದ ಸೇನೆ ಸೇರಲು ತಯಾರಿ ಮಾಡಿಕೊಳ್ಳುತ್ತಿರುವ ಶಿವಮ್ ಕುಮಾರ್ ಕೇಳುತ್ತಾರೆ.
ಭಾರತಕ್ಕೆ ಎರಡು ಕಡೆಯ ಶತ್ರುಗಳಿಂದ ಅಪಾಯ ಇರುವ ಈ ಸಮಯದಲ್ಲಿ ಈ ಅಗ್ನಿಪಥ ಯೋಜನೆ ನಮ್ಮ ಸೇನೆಯ ನಿರ್ವಹಣೆ ಸಾಮರ್ಥ್ಯವನ್ನು ಕುಂದಿಸುತ್ತದೆ. ನಮ್ಮ ಪಡೆಗಳ ಗೌರವ, ಸಂಪ್ರದಾಯ, ಪರಾಕ್ರಮ, ಶಿಸ್ತು ವಿಚಾರದಲ್ಲಿ ರಾಜಿಯಾಗುವುದನ್ನು ಬಿಜೆಪಿ ಸರ್ಕಾರ ಬಿಡಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಪ್ರಿಯಾಂಕ ಗಾಂಧಿ ಸಹ ಅಗ್ನಿಪಥ ಯೋಜನೆಯನ್ನು ವಿಮರ್ಶೆ ಮಾಡಿದ್ದಾರೆ. ಸೈನಿಕರ ಸುದೀರ್ಘ ಸೇವೆಯನ್ನು ಕೇಂದ್ರ ಸರ್ಕಾರ ಭಾರ ಎಂದು ಪರಿಗಣಿಸುತ್ತಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಸೇನಾ ನೇಮಕಾತಿ ವಿಳಂಬ , ನಿರುದ್ಯೋಗ ಹೆಚ್ಚಳ ಕುರಿತಾಗಿ ಮೊದಲಿನಿಂದಲೂ ದನಿ ಎತ್ತುತ್ತಲೇ ಬಂದಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಆಳುವ ಸರ್ಕಾರದ ಅವಧಿಯೇ ಐದು ವರ್ಷ ಇರುವಾಗ, ಬಿಸಿ ರಕ್ತ ಇರುವ ಯುವಕರ ಸೇನಾ ಸರ್ವಿಸ್ ಗೆ ನಾಲ್ಕು ವರ್ಷಗಳ ಅವಧಿ ನಿಗದಿ ಮಾಡಿರುವುದು ಸರಿಯೇ ಎಂದು ತಮ್ಮದೇ ಪಕ್ಷದ ಸರ್ಕಾರವನ್ನು ಕೇಳಿದ್ದಾರೆ. ಅಲ್ಲದೇ ಅಗ್ನಿಪಥ ಯೋಜನೆಯಡಿ ನೀಡಲಾಗುವ ವೇತನದ ಕುರಿತು ಜನರ ಅಭಿಪ್ರಾಯ ಏನು ಎಂಬುದನ್ನು ವರುಣ್ ಗಾಂಧಿ ಕೇಳಿದ್ದಾರೆ.
ದೇಶದ ಗಡಿ ಕಾಯುವ ಯೋಧರನ್ನು ಗುತ್ತಿಗೆ ಆಧಾರದಲ್ಲಿ ಸೇವೆ ಮಾಡುವ ಕೇಂದ್ರ ಸರ್ಕಾರದ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ದೇಶದ ಭದ್ರತೆ ಎಂಬುದು ಕಡೆಗಣನೆಗೆ ಒಳಪಡುತ್ತಿರುವುದು ಆತಂಕದ ವಿಷಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹೆಚ್ ಸಿ ಮಹದೇವಪ್ಪ ಹೇಳುತ್ತಾರೆ.
ಅಗ್ನಿಪಥ ಯೋಜನೆ ಕುರಿತಾಗಿ ನಿವೃತ್ತ ಮೇಜರ್ ಜನೆರಲ್ ಬಿಎಸ್ ಧನೋವಾ ಟ್ವೀಟ್ ಮೂಲಕ ಎರಡು ಸಲಹೆ ನೀಡಿದ್ದಾರೆ.
ಹೊಸದಾಗಿ ಸೇನೆಗೆ ನೇಮಕ ಮಾಡಿಕೊಳ್ಳುವವರಿಗೆ ಕನಿಷ್ಠ ಏಳು ವರ್ಷ ಸರ್ವೀಸ್ ಇರುವ ರೀತಿ ನೋಡಿಕೊಳ್ಳಬೇಕು. ಅವರಲ್ಲಿ ಶೇಕಡಾ ೫೦ರಷ್ಟು ಮಂದಿಯನ್ನು ಶಾಶ್ವತ ಸರ್ವೀಸ್ಗೆ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೇನಾ ನೇಮಕಾತಿಯನ್ನು ಆರ್ಥಿಕ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಸೇನೆಯ ಹಿರಿಯ ಅಧಿಕಾರಿ ಮೇಜರ್ ಜನೆರಲ್ ಯಶ್ ಮೋರ್ ಅಭಿಪ್ರಾಯಪಟ್ಟಿದ್ದಾರೆ. ಸೈನಿಕರ ವೇತನ, ವೃತ್ತಿ ವಿಚಾರದಲ್ಲಿ ಖಜಾನೆಯಲ್ಲಿ ದುಡ್ಡು ಉಳಿಸುವ ಯತ್ನ ಸರಿಯಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಅಗ್ನಿಪಥ ಯೋಜನೆ ಬಗ್ಗೆ ಹಲವು ಟೀಕೆ, ಪ್ರಶ್ನೆ ಕೂಡ ಕೇಳಿಬಂದಿವೆ.
* ನಾಲ್ಕು ವರ್ಷದ ಸರ್ವೀಸ್ ಯುವಕರ ಹೋರಾಟ ಸ್ಪೂರ್ತಿಗೆ ಹೊಡೆತ ನೀಡುತ್ತದೆ
* ನಾಲ್ಕು ವರ್ಷದ ಸರ್ವೀಸ್ ಇದ್ದಲ್ಲಿ ಯುವಕರು ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ
* ಸೇನೆಯ ಕಾರ್ಯಕ್ಷಮತೆಗೆ ಹೊಡೆತ ಬೀಳಲಿದೆ