ಹಾಸನದ ಅರಸೀಕೆರೆಯ ಶಾಸಕ ಕೆ.ಶಿವಲಿಂಗೇಗೌಡ ಅವರು ಇಂದು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ತೊರೆಯುವ ಸ್ಪಷ್ಟ ಸೂಚನೆಯನ್ನು ಶಿವಲಿಂಗೇಗೌಡರು ನೀಡಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಮಾರು 40 ಲಕ್ಷ ತೆಂಗಿನಮರಗಳು ರೋಗದಿಂದ ನಾಶವಾಗಿದ್ದವು. ಇದಕ್ಕೆ ಪರಿಹಾರ ಕೊಡಬೇಕು ಅಂತ ನಾನು ಹನ್ನೊಂದು ದಿನ ಗಿಜಿಹಳ್ಳಿ ಪ್ರತಿಭಟನೆ ಮಾಡುತ್ತ ಮಲಗಿದ್ದೆ. ಅವತ್ತು ನನ್ನನ್ನು ಮಾತನಾಡಿಸಲು ಯಾರೂ ಬರಲಿಲ್ಲ. ನಂತರ ನಾನೇ ಎದ್ದು ಹೋಗಿ ಅರಸೀಕೆರೆಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ಶಪಥ ಮಾಡಿದೆ. ಆಗ ಅಲ್ಲಿಗೆ ರೇವಣ್ಣ ಅವರು ಬಂದರು.
ನಂತರ ಹಾಸನದಲ್ಲಿ ನಡೆದ ಸಭೆ ವೇಳೆ ರಾಜಕಾರಣದ ಹಿನ್ನಲೆಯಲ್ಲಿ ದೇವೇಗೌಡರಿಗೆ ಮಿಸ್ಗೈಡ್ ಮಾಡಿದ್ದಾರೆ. ನಾನು ಪ್ರತಿಭಟನೆ ಮಾಡುತ್ತ ಮಲಗಿರುತ್ತೇನೆ. ನೀವು ಬಂದು ಮೇಲೆ ಏಳಿಸಿಕೊಂಡು ಬನ್ನಿ ಎಂದು ನಾನು ನಾಟಕವಾಡಿದೆ ಎಂಬ ಪದವನ್ನು ನನ್ನ ಮೇಲೆ ದೇವೇಗೌಡರು ಪ್ರಯೋಗ ಮಾಡಿದ್ದಾರೆ. ಯಾವ ತಪ್ಪು ಗ್ರಹಿಕೆಯಿಂದ ಅವರು ಮಾತನಾಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ, ನಾನು ಯಾರ ಬಗ್ಗೆಯೂ ಮಾತನಾಡಲು ಹೋಗಲ್ಲ. ಒಂದು ವೇಳೆ ನಾನು ನಾಟಕ ಮಾಡಿದ್ದರೆ 50 ಕೋಟಿ ಹಣ ರೈತರ ಮನೆ ಮನೆಗೆ ಹೋಗುತ್ತಿತ್ತಾ ಎಂದು ಶಿವಲಿಂಗೇಗೌಡರು ಪ್ರಶ್ನಿಸಿದ್ದಾರೆ.
ರಾಜ್ಯಸಭೆ ಚುನಾವಣೆ ವೇಳೆ ದುಡ್ಡು ತೆಗೆದುಕೊಂಡು ನಾನು ಬೇರೆ ಪಕ್ಷಕ್ಕೆ ಓಟು ಹಾಕುತ್ತಾನೆ ಅಂತ ಬಹಳ ಜನ ಕಾಯ್ತಾ ಕುಳಿತಿದ್ದರು. ದುಡ್ಡಿಗೋಸ್ಕರ ಶಿವಲಿಂಗೇಗೌಡ ಮಾರಾಟ ಆಗ್ತಾನೆ ಅನ್ಕೊಂಡಿದ್ದರು. ನಿಮ್ಮ ಆಶೀರ್ವಾದದಿಂದ ಶಾಸಕನಾದ ನಾನು ಇಂತಹ ಹೇಯ ಕೃತ್ಯಕ್ಕೆ ಕೈ ಹಾಕುವುದಿಲ್ಲ.
ನನಗೆ ಕುಮಾರಸ್ವಾಮಿ ಮಧ್ಯೆ ಅನೇಕ ಭಿನ್ನಾಭಿಪ್ರಾಯವಿರೋದು ನಿಜ. ಅವರು ಕೊಟ್ಟಿರುವ ಬಿಫಾರಂ ಋಣ 2023 ರವರೆಗೆ ಇದೆ. ಅಲ್ಲಿಯವರೆಗೂ ಕಾಯುತ್ತೇನೆ. ಆನಂತರ ನನ್ನ ಕ್ಷೇತ್ರದ ಜನರ ಬಳಿ ಬರುತ್ತೇನೆ. ಜನರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆಯೇ ಹೊರತು, ನನ್ನ ಜನತೆಗೆ ದ್ರೋಹ ಬಗೆಯುವುದಿಲ್ಲ.
ಕ್ಷೇತ್ರದ ಜನ ಮನೆಗೆ ಹೋಗು ಅಂದರೆ ಮನೆಗೆ ಹೋಗುತ್ತೇನೆ, ಚುನಾವಣೆಗೆ ನಿಲ್ಲು ಅಂದರೆ ಚುನಾವಣೆಗೆ ನಿಲ್ಲುತ್ತೇನೆ. ನೀವು ಎಲ್ಲಿ ನಿಲ್ಲು ಅಂತಿರಾ ಅಲ್ಲಿ ನಿಲ್ಲುತ್ತೇನೆ, ನೀವು ಕೊಡುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಹೊರತು ಮತ್ತೊಬ್ಬರ ನಿರ್ಧಾರಕ್ಕೆ ಬದ್ಧನಾಗಿರುವುದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಜೆಡಿಎಸ್ ಪಪಕ್ಷ ತೊರೆಯುವ ಸ್ಪಷ್ಟ ಸೂಚನೆಯನ್ನು ಶಾಸಕರು ಕ್ಷೇತ್ರದ ಜನತೆಗೆ ನೀಡಿದ್ದಾರೆ.
ನಿಮ್ಮ ಗೌರವ, ಆತ್ಮಸಾಕ್ಷಿ ಮರೆತು, ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನೆಂದು ರಾಜಕಾರಣ ಮಾಡಲ್ಲ. ಕೆಲವರು ಸೋಗಲಾಡಿತನದಲ್ಲಿ ಬರ್ತಾರೆ. ನಾನು ಶಾಸಕನಾದ ಮೇಲೆ 530 ಹಳ್ಳಿಗಳಲ್ಲಿ ಸುಮಾರು 700 ರಿಂದ 800 ದೇವಾಲಯಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ನನಗಿದೆ. ನನ್ನ ಸಹಕಾರದಿಂದ ನಿರ್ಮಾಣವಾಗಿರುವ ದೇವಾಲಯಗಳ ದೊಡ್ಡ ಬುಕ್ನ್ನು ಜನತೆ ಮುಂದೆ ಇಡ್ತಿನಿ ಎಂದು ಇದೇ ವೇಳೆ ಶಾಸಕರು ತಮ್ಮ ಸಾಧನೆಯ ಬಗ್ಗೆ ಜನತೆಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಜನತೆಗೆ ದ್ರೋಹ ಬಗೆಯಲು ಕೆಲವರು ಇಲ್ಲಿಗೆ ಬರ್ತಾರೆ. ಬಹಳಷ್ಟು ಜನ ನನ್ನ ರಾಜಕೀಯವಾಗಿ ಮುಗಿಸಬೇಕು ಎಂದು ಬೆಂಗಳೂರಿನಿಂದ ಪಿತೂರಿಯನ್ನು ನಡೆಸಿಕೊಂಡು ಬಂದಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.