ವಕೀಲ ಜಗದೀಶ್ ಕೆಎನ್ ಮಹಾದೇವ್ ಅವರನ್ನು ಇಂದು ಬೆಳ್ಳಂಬೆಳಿಗ್ಗೆ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇವರ ಬಂಧನವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಖಂಡಿಸಿದೆ.
ಈ ಬಗ್ಗ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು, ಸಚಿವರೊಬ್ಬರು ತನ್ನನ್ನು ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಕಳೆದ ವರ್ಷ ದೂರು ನೀಡಿದ್ದ ಮಹಿಳೆಗೆ ಕೆಲ ದಿನ ವಕೀಲರಾಗಿದ್ದ ಹಾಗೂ ಈಗ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿರುವ ಪ್ರಕರಣದ ಸುತ್ತಮುತ್ತ ಸಾಕಷ್ಟು ಸಾಕ್ಷ್ಯಗಳನ್ನು ಕಲೆಹಾಕಿ ಜನಾಭಿಪ್ರಾಯವನ್ನು ರೂಪಿಸುತ್ತಾ ಬಂದಿರುವ ಬೆಂಗಳೂರಿನ ವಕೀಲ ಜಗದೀಶ್ ಕೆಎನ್ ಮಹಾದೇವ್ ಒಂದು ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ.
ದುರದೃಷ್ಟವಶಾತ್, ಅವರ ಕೆಲವೊಂದು ಪ್ರಚೋದನಾತ್ಮಕ ಮಾತುಗಳೂ ಕಾರಣವಾಗಿ ಮೊನ್ನೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್’ನ ಆವರಣದಲ್ಲಿ ಅವರ ಅಪ್ರಾಪ್ತ ವಯಸ್ಸಿನ ಮಗನ ಮೇಲೆ ವಕೀಲರ ಕೋಟು ಧರಿಸಿದ್ದ ಕೆಲವರು ಬಹಳ ಕೆಟ್ಟದಾಗಿ ಹಲ್ಲೆ ಮಾಡಿದ್ದಾರೆ. ಹುಡುಗ ಎಂದೂ ನೋಡದೆ ಹೀನಾಯವಾಗಿ ದೈಹಿಕ ದೌರ್ಜನ್ಯ ಎಸಗಿದ್ದಾರೆ. ಸಮಯಕ್ಕೆ ಸರಿಯಾಗಿ ಪೊಲೀಸರು ಬಂದು ಆ ಹುಡುಗನನ್ನು ರಕ್ಷಿಸದೆ ಇದ್ದಿದ್ದರೆ ಬಹುಶಃ ಆ ಹುಡುಗ ಜೀವಂತ ಉಳಿಯುತ್ತಿರಲಿಲ್ಲ ಎನ್ನಿಸುವಷ್ಟು ಕ್ರೂರ ವಾತಾವರಣ ಅಲ್ಲಿ ನಿರ್ಮಾಣವಾಗುತ್ತಿತ್ತೇನೋ. ಜಗದೀಶರ ಪರವಾಗಿ ಅಲ್ಲಿ ಹೋಗಿದ್ದ ಇನ್ನೂ ಕೆಲವರ ಮೇಲೆ ಇದೇ ರೀತಿಯ ಹಲ್ಲೆ ಆಗಿದೆ ಎಂದು ಹೇಳಲಾಗುತ್ತಿದೆ.
ಇನ್ನೊಬ್ಬರ ಮೇಲೆ ಎಷ್ಟೇ ಅಸಹನೆ ಮತ್ತು ಭಿನ್ನಾಭಿಪ್ರಾಯ ಇದ್ದರೂ ಹೀಗೆ ಹಲ್ಲೆ ಮಾಡುವುದು ತಪ್ಪು ಮತ್ತು ಕಾನೂನುಬಾಹಿರ. ವಕೀಲರೇ ಹೀಗೆ ನ್ಯಾಯಾಲಯದ ಆವರಣದಲ್ಲಿ ದೌರ್ಜನ್ಯ ಎಸಗಿರುವುದನ್ನು ಇಡೀ ವಕೀಲ ಸಮೂಹ ಗಂಭೀರವಾಗಿ ಪರಿಗಣಿಸಬೇಕು ಮತ್ತು ಪೊಲೀಸರು ಈ ಕೂಡಲೇ ಕ್ರಮ ಕೈಗೊಂಡು ಹಲ್ಲೆ ಮಾಡಿದವರನ್ನು ಬಂಧಿಸಬೇಕು.
ಆದರೆ ಹಾಗೆ ಆಗದೆ, ಇಂದು ಬೆಳ್ಳಂಬೆಳಗ್ಗೆ ವಕೀಲ ಜಗದೀಶ್’ರ ಮನೆಗೆ ಹೋಗಿರುವ ಪೊಲೀಸ್ ತಂಡ ಅವರನ್ನು ಬಂಧಿಸಿ ಕರೆದೊಯ್ದಿದೆ ಎಂಬ ಮಾಹಿತಿ ಇದೆ.
ಇದೆಲ್ಲವನ್ನೂ ಗಮನಿಸಿದಾಗ, ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿರುವ ಕಾರಣಕ್ಕೆ ಹೀಗೆಲ್ಲಾ ಆಗುತ್ತಿದೆ ಎನ್ನುವ ಮಾತಿಗೆ ಪುಷ್ಟಿ ಕೊಡುವ ರೀತಿಯಲ್ಲಿ ಘಟನೆಗಳು ನಡೆಯುತ್ತಿರುವುದು ತೀರಾ ಕಳವಳಕಾರಿ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಭ್ರಷ್ಟಾಚಾರದ ವಿರುದ್ಧ ಮತ್ತು ಮೌಲ್ಯಾಧಾರಿತ ರಾಜಕಾರಣಕ್ಕಾಗಿ ಸಂಘಟಿತ ಹೋರಾಟವನ್ನು ಮಾಡುತ್ತಾ ಬಂದಿದೆ. ಅಂತಹ ಹೋರಾಟದ ಕಾರಣಕ್ಕೆ KRS ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಮೇಲೆ ಭ್ರಷ್ಟ ಅಧಿಕಾರಿಗಳು ಮತ್ತು ಪೊಲೀಸರು ಹತ್ತಾರು ಕಡೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ ಹಾಗೂ ಪಕ್ಷದ ಹಲವಾರು ಸೈನಿಕರು ಬಂಧನಕ್ಕೂ ಒಳಗಾಗಿ ಜೈಲಿಗೂ ಹೋಗಿ, ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಎಲ್ಲಾ ಸಂದರ್ಭಗಳಲ್ಲಿ ರಾಜ್ಯದ ಹತ್ತಾರು ನ್ಯಾಯವಾದಿಗಳು ಯಾವುದೇ ಪೀಜು ತೆಗೆದುಕೊಳ್ಳದೆ ನಮ್ಮ ಪರವಾಗಿ ವಾದಿಸಿದ್ದಾರೆ ಮತ್ತು ನಮ್ಮ ಹೋರಾಟವನ್ನು ಬೆಂಬಲಿಸಿದ್ದಾರೆ. ಅವರೆಲ್ಲರಿಗೂ KRS ಪಕ್ಷವು ಧನ್ಯವಾದಗಳನ್ನು ಅರ್ಪಿಸುತ್ತದೆ.
ಈ ಎಲ್ಲದರ ಹಿನ್ನೆಲೆಯಲ್ಲಿ, ವಕೀಲ ಜಗದೀಶರ ಅಪ್ರಾಪ್ತ ವಯಸ್ಸಿನ ಮಗನ ಮೇಲೆ ಆಗಿರುವ #ಹಲ್ಲೆ, ಆ ಪ್ರಕರಣದಲ್ಲಿ ಪೊಲೀಸರ #ನಿಷ್ಕ್ರಿಯತೆ, ಈಗ ಸದ್ಯ ಜಗದೀಶ್ ಅವರನ್ನು ಬಂಧಿಸಿರುವ ಪೊಲೀಸರ ಪಕ್ಷಪಾತಿತನದ ರೀತಿ, ಇವೆಲ್ಲವನ್ನೂ KRS ಪಕ್ಷವು ಖಂಡಿಸುತ್ತದೆ ಮತ್ತು ಭ್ರಷ್ಟಾಚಾರದ ವಿರುದ್ಧ ಸಂಯಮದಿಂದ, ಶಿಸ್ತಿನಿಂದ ಮತ್ತು ಸಂಘಟಿತವಾಗಿ ಹೋರಾಟ ಮಾಡುವವರ ಬೆಂಬಲಕ್ಕೆ ನಿಲ್ಲುತ್ತದೆ. ರಾಜ್ಯದ ನ್ಯಾಯವಾದಿ ಮತ್ತು ವಕೀಲ ಸಮೂಹವು ಸಹ ಈ ಪ್ರಕರಣವನ್ನು ಘನತೆ ಮತ್ತು ನ್ಯಾಯಪರತೆಯಿಂದ ನಿಭಾಯಿಸಬೇಕು ಎಂದು ಅವರನ್ನು ಕೋರುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ADVERTISEMENT
ADVERTISEMENT