ಸರ್ಕಾರಿ ಆಸ್ಪತ್ರೆಯೆಂದರೆ ಈಗಲೂ ಮೂಗುಮುರಿಯುವವರೇ ಅಧಿಕ ಮಂದಿ. ಸರ್ಕಾರಿ ಆಸ್ಪತ್ರೆ ಬಡವರಿಗೆ ಮಾತ್ರ ಎಂಬ ಮನೋಭಾವನೆ ಹಲವರಿಗೆ. ಧೈರ್ಯದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲು ಜನ ಹಿಂದೇಟು ಹಾಕುತ್ತಾರೆ.
ಅಂತಹುದರಲ್ಲಿ ಬಳ್ಳಾರಿ ಜಿಲ್ಲಾ ಪಂಚಾಯತ್ ಸಿಇಓ ಆಗಿರುವ ಐಎಎಸ್ ಅಧಿಕಾರಿ ಕೆ ಆರ್ ನಂದಿನಿ ಅವರು ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಮೊನ್ನೆ ಬುಧವಾರ ಹೆರಿಗೆ ಮಾಡಿಸಿಕೊಂಡಿದ್ದು, ಸಹಜ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಈ ಅಧಿಕಾರಿ ನಂದಿನಿಯವರು ಮಾದರಿಯಾಗಿದ್ದಾರೆ. ಬಳ್ಳಾರಿಯ ಗೌಸ್ ಜಿಲ್ಲಾ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಮ್ಮ ಹಾಗೂ ಮಗು ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಐಎಎಸ್ ಅಧಿಕಾರಿ ನಂದಿನಿಯವರ ಸರಳತೆಯನ್ನು ಇದು ತೋರಿಸುತ್ತದೆ. ಜಿಲ್ಲೆಯ ಒಬ್ಬ ಅಧಿಕಾರಿಣಿಯಾಗಿ ನಂದಿನಿಯರ ನಡೆ ಬೇರೆಯವರಿಗೆ ಮಾದರಿಯಾಗಿದೆ ಎಂದು ಬಳ್ಳಾರಿಯ ವಾರ್ತಾ ಇಲಾಖೆ ಅಧಿಕಾರಿಯಾಗಿರುವ ರಾಮಲಿಂಗಪ್ಪ ಹೇಳುತ್ತಾರೆ.
ನಂದಿನಿ ಕೋಲಾರದ ಕೆಂಬೋಡಿ ಗ್ರಾಮದವರು, 2016 ನೇ ಬ್ಯಾಚಿನ ಐಎಎಸ್ ಅಧಿಕಾರಿ ಕೆ ಆರ್ ನಂದಿನಿ ಅವರು ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಬೆಂಗಳೂರಿನ ಎಂ ಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿ ಐಎಎಸ್ ಪರೀಕ್ಷೆ ಬರೆದು ಕರ್ನಾಟಕ ಕೇಡರ್ ಅಧಿಕಾರಿಯಾದರು. ಎರಡು ವರ್ಷಗಳ ಹಿಂದೆ ಬಳ್ಳಾರಿಗೆ ಬಂದವರು. ಅದಕ್ಕೂ ಮುನ್ನ ತಿಪಟೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದರು.