ಚಿಕ್ಕಮಗಳೂರು ನಗರದ ಐಡಿಎಸ್ಜಿ (IDSG) ಕಾಲೇಜಿನಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ತಿಕ್ಕಾಟ ಮುಂದುವರಿದಿದೆ. ಈ ನಡುವೆ ಹಲವು ಜನ ವಿದ್ಯಾರ್ಥಿಗಳು ಇಂದು ಕಾಲೇಜಿಗೆ ನೀಲಿ ಶಾಲು ಧರಿಸಿ ಬಂದಿದ್ದಾರೆ.
ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಹಿಜಾಬ್ ವಿರೋಧಿಸಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು.
ಕಾಲೇಜಿನಲ್ಲಿ ಹಿಜಾಬ್ಗೆ ಅವಕಾಶ ನೀಡಬಾರದು ಎಂದು ಕೆಲ ವಿದ್ಯಾರ್ಥಿಗಳು ಆಗ್ರಹಿಸಿದರು. ಹಿಜಾಬ್ ನಮ್ಮ ಹಕ್ಕು ಎಂದು ತೆಗೆಯಲ್ಲ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ಇದೇ ವೇಳೆ ಕಾಲೇಜಿನ ಬಹುಜನ ವಿದ್ಯಾರ್ಥಿ ಸಂಘಟನೆ (ಬಿವಿಎಸ್) ವಿದ್ಯಾರ್ಥಿಗಳ ಗುಂಪು ನೀಲಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ.
ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು, ಮುಸ್ಲೀಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಜೈ ಭೀಮ್ ಘೋಷಣೆಯನ್ನು ಈ ವಿದ್ಯಾರ್ಥಿಗಳು ಕೂಗಿದರು.
ಐಡಿಎಸ್ಜಿ ಕಾಲೇಜಿನಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು. ವಾತಾವರಣವನ್ನು ತಿಳಿಸಗೊಳಿಸಲು ಕಾಲೇಜಿನ ಆಡಳಿತ ಮಂಡಳಿ ಇಂದು ರಜೆ ಘೋಷಣೆ ಮಾಡಿದೆ.
ಹಿಜಾಬ್ ವಿವಾದ ಇದೀಗ ಹೈಕೋರ್ಟ್ ಅಂಗಳದಲ್ಲಿದೆ. ನಾಳೆ ಮಂಗಳವಾರ (ಫೆ.8) ದಂದು ಹೈಕೋರ್ಟ್ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಲಿದೆ.
ADVERTISEMENT
ADVERTISEMENT