ಗೋವಾದಲ್ಲಿ ವಿಧಾನಸಭೆ ಫಲಿತಾಂಶಕ್ಕೂ ಮೊದಲೇ ರೆಸಾರ್ಟ್ ರಾಜಕಾರಣ ಗರಿಗೆದರಿದೆ. ನಾಳೆ ಮಾರ್ಚ್ 10 ರಂದು ಪಂಚರಾಜ್ಯ ವಿಧಾನಸಭೆಗಳ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿದ್ದು, ಗೋವಾದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿಯಿದೆ.
ನಿನ್ನೆಯಷ್ಟೇ ಕಾಂಗ್ರೆಸ್ ತನ್ನ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ರೆಸಾರ್ಟ್ಗೆ ಕರೆದೊಯ್ದ ಬೆನ್ನಲ್ಲೇ, ಇದೀಗ ಆಮ್ ಆದ್ಮಿ ಪಕ್ಷವೂ ಸಹಿತ ತನ್ನ ಅಭ್ಯರ್ಥಿಗಳನ್ನು ಕಾವಲು ಕಾಯುತ್ತಿದೆ ಎಂದು ವರದಿಯಾಗಿದೆ.
ಒಂದು ವೇಳೆ ಎರಡೂ ಪಕ್ಷಕ್ಕೆ ಬಹುಮತ ಬರದಿದ್ದಲ್ಲಿ ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬೇರೆ ಶಾಸಕರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಶ್ರಮಿಸುತ್ತವೆ. ಕಳೆದ ವಿಧಾನಸಭೆ ಚುನಾವಣೆ 2017 ರಲ್ಲಿಯೂ ಇದೇ ತರಹದ ಫಲಿತಾಂಶ ಹೊರಬಿದ್ದಿತ್ತು.
ರೆಸಾರ್ಟ್ಗೆ ಸೇರಿರುವ ಕಾಂಗ್ರೆಸ್ ಸದಸ್ಯರು ಮತ ಎಣಿಕೆ ಮುಗಿಯುವವರೆಗೂ ಅಲ್ಲಿಯೇ ಇರಲಿದ್ದಾರೆ. ಅಭ್ಯರ್ಥಿಗಳನ್ನು ರಕ್ಷಿಸಿಕೊಳ್ಳಲು ಅವರನ್ನು ಒಂದೆಡೆ ಸೇರಿಸಿ ರಕ್ಷಿಸುತ್ತಿದ್ದೇವೆ ಎಂದು ಗೋವಾ ಉಸ್ತುವಾರಿ ಪಿ.ಚಿದಂಬರಂ ಹೇಳಿದ್ದಾರೆ.
2017 ರಲ್ಲಿ ಕಾಂಗ್ರೆಸ್ ಏಕೈಕ ಬೃಹತ್ ಪಕ್ಷವಾಗಿ ಹೊರಹೊಮ್ಮಿದ್ದರೂ ಸಹಿತ, ಬಿಜೆಪಿ ಇತರೆ ಪಕ್ಷದ ಶಾಸಕರುಗಳ ಸಹಾಯದೊಂದಿಗೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು.
ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14 ರಂದು ಚುಬಾವಣೆ ನಡೆದಿತ್ತು. ನಾಳೆ ಮಾರ್ಚ್ 10 ಕ್ಕೆ ಫಲಿತಾಂಶ ಹೊರಬೀಳಲಿದೆ.