ಪ್ರತಿಷ್ಠಿತ ಸಂಘಟನೆಯಾದ ಎಸ್.ಕೆ.ಪಿ.ಎ ರಿ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ ಗುರುತಿನ ಚೀಟಿಯನ್ನು ಎಡಿಟ್ ಮಾಡಿ ಉಪಯೋಗಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬೈಲಂಗಡಿ ಬಸ್ತಿಮನೆ ನಿವಾಸಿ ಛಾಯಾಗ್ರಾಹಕ ಸಂಕಿರಣ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ರಿ. ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ 14 ವಲಯಗಳಲ್ಲಿ ಪಸರಿಸಿಕೊಂಡಿದ್ದು ಸುಮಾರು 4 ಸಾವಿರಕ್ಕೂ ಅಧಿಕ ಸದಸ್ಯ ಬಲವನ್ನು ಹೊಂದಿದೆ.
ಪ್ರತಿವರ್ಷ ಜಿಲ್ಲಾ ಮಹಾಸಭೆಗೆ ಮುಂಚಿತವಾಗಿ ಸದಸ್ಯತ್ವ ನವೀಕರಣ ಪ್ರಕ್ರಿಯೆ ಆರಂಭಗೊಂಡು ನಿಗದಿತ ವಾರ್ಷಿಕ ಶುಲ್ಕದೊಂದಿಗೆ ಸದಸ್ಯರಿಗೆ ಜಿಲ್ಲಾ ಸಂಘಟನೆಯ ಗುರುತಿನ ಚೀಟಿಯನ್ನು ವಿತರಣೆ ಮಾಡುತ್ತಿದ್ದು, ಸಂಕಿರಣ ಎಂಬವರು 2017 ನೇ ಇಸವಿಯಿಂದ ತಮ್ಮ ಸದಸ್ಯತ್ವವನ್ನು ನವೀಕರಣಗೊಳಿಸಿದಿದ್ದರೂ ಕೂಡ ಹಳೆಯ ಗುರುತಿನ ಚೀಟಿಯನ್ನು ಎಡಿಟ್ ಮಾಡಿ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಚಾರ ಮಾಡಲು ಮತ್ತು ಇತರ ಕೆಲವು ಸಂದರ್ಭಗಳಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಬೆಳ್ತಂಗಡಿ ವಲಯದ ದೂರನ್ನು ಆಧರಿಸಿ ಜಿಲ್ಲಾ ಸಮಿತಿಯು ಮಂಗಳೂರಿನಲ್ಲಿ ಪೊಲೀಸ್ ಕಮೀಷನರಿಗೆ ಮನವಿ ನೀಡಿ, ದೂರು ದಾಖಲಿಸಿತ್ತು.
ಈ ದೂರಿಗೆ ಸಂಬಂಧಪಟ್ಟಂತೆ ಪೊಲೀಸರು ಸಂಕಿರಣ ಎಂಬವರನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿದ್ದು, ಸಂಕಿರಣ್ ತಾವು ಹಳೆಯ ಸದಸ್ಯತ್ವದ ಗುರುತಿನ ಚೀಟಿಯನ್ನು ಎಡಿಟ್ ಮಾಡಿ ಉಪಯೋಗಿಸಿದ್ದಾಗಿ ಒಪ್ಪಿಕೊಂಡಿದ್ದು, ಈ ಬಗ್ಗೆ ಬೆಳ್ತಂಗಡಿ ವಲಯದ ಅಧ್ಯಕ್ಷರ ಬಳಿ ಕ್ಷಮೆ ಯಾಚಿಸಿದ್ದೇನೆಂದು ಪೊಲೀಸರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಎಸ್.ಕೆ.ಪಿ.ಎ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು ರಿಜಿಸ್ಟರ್ಡ್ ಸಂಘಟನೆಯ ಗುರುತಿನ ಚೀಟಿಯನ್ನು ಅನಧಿಕೃತವಾಗಿ ತಿದ್ದುಪಡಿ ಮಾಡಿ ದುರುಪಯೋಗಪಡಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದ್ದು ಈ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ದೂರು ದಾಖಲಿಸಲಾಗಿದೆ ಎಂದಿದ್ದಾರೆ. ಯಾರೇ ಇಂತಹ ಚಟುವಟಿಕೆಗಳನ್ನು ನಡೆಸಿದ್ದು ನಮ್ಮ ಗಮನಕ್ಕೆ ಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.