ರಾಜ್ಯಾದ್ಯಂತ ಯುವಜನರಿಗೆ ಸ್ಪೂರ್ತಿಯಾಗಿದ್ದ ಯುವ ಪೊಲೀಸ್ ಅಧಿಕಾರಿ ರವಿ ಡಿ . ಚನ್ನಣ್ಣನವರ್ ಮೇಲೆ ಭ್ರಷ್ಟಾಚಾರದ ಆರೋಪ ಬಂದಿರುವ ಹಿನ್ನೆಲೆಯಲ್ಲಿ. ಈ ಕೂಡಲೇ ಅವರು ಸಾರ್ವಜನಿಕವಾಗಿ ಸ್ಪಷ್ಟಿಕರಣ ನೀಡಬೇಕು ಹಾಗೂ ತಮ್ಮ ಮತ್ತು ತಮ್ಮ ಕುಟುಂಬದ ಸ್ಥಿರ ಮತ್ತು ಚರಾಸ್ತಿಗಳನ್ನು ಬಹಿರಂಗಪಡಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ರವಿ ಕೃಷ್ಣಾ ರೆಡ್ಡಿಯವರು ಆಗ್ರಹಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಪೊಲೀಸ್ ಅಧಿಕಾರಿ ರವಿ ಡಿ . ಚನ್ನಣ್ಣನವರ್ ಮೇಲೆ ಭ್ರಷ್ಟಾಚಾರದ ಆರೋಪ ಬಂದಿರುವ ಹಿನ್ನೆಲೆಯಲ್ಲಿ. ಈ ಕೂಡಲೇ ಸಾರ್ವಜನಿಕವಾಗಿ ಸ್ಪಷ್ಟಿಕರಣ ನೀಡಬೇಕು ಹಾಗೂ ತಮ್ಮ ಮತ್ತು ತಮ್ಮ ಕುಟುಂಬದ ಸ್ಥಿರ ಮತ್ತು ಚರಾಸ್ತಿಗಳನ್ನು ಬಹಿರಂಗಪಡಿಸಬೇಕು. ಅಯೋಗ್ಯ, ಅದಕ್ಷ ನಾಲಾಯಕ್ ಸಂಸ್ಥೆಯಾದ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ( ACB ) ಈ ಕೂಡಲೇ ಅವರ ಮನೆಯ ಮೇಲೆ ” ಆದಾಯಮೀರಿದ ಆಸ್ತಿ ” ( Disproportionate Assets ) ವಿಚಾರವಾಗಿ ದಾಳಿ ಮಾಡಬೇಕು. IPS ಅಧಿಕಾರಿ ತಮ್ಮ ಕೆಲಸದಲ್ಲಿ ಮಾಡಿರಬಹುದಾದ ಸಾಧನೆಗಳಿಗಿಂತ ಅವರ ಜನಪ್ರಿಯ ಭಾಷಣಗಳ ಮೂಲಕ ರಾಜ್ಯಾದ್ಯಂತ ಲಕ್ಷಾಂತರ ಯುವಕಯುವತಿಯರಿಗೆ ಕನಸು ಮತ್ತು ಆದರ್ಶ ಕಟ್ಟಿಕೊಳ್ಳಲು ಸ್ಪೂರ್ತಿಯಾದವರು . ಸಾಮಾಜಿಕ ಮಾಧ್ಯಮಗಳ ಮೂಲಕ ಅವರ ಭಾಷಣಗಳು ರಾಜ್ಯದ ಮೂಲೆಮೂಲೆಗೂ ತಲುಪಿವೆ ಮತ್ತು ಅವರೊಬ್ಬ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎನ್ನುವ ಭಾವನೆ ಇಲ್ಲಿಯತನಕ ಸಾರ್ವಜನಿಕ ವಲಯದಲ್ಲಿ ಅಚ್ಚಾಗಿತ್ತು .
The-file.in ನಲ್ಲಿ ಪ್ರಕಟವಾದ ವರದಿಯಲ್ಲಿದ್ದ ದಾಖಲೆಗಳು ಮತ್ತು ತದನಂತರದ ಬೆಳವಣಿಗೆಗಳಲ್ಲಿ ಬೆಂಗಳೂರಿನ ವಕೀಲ Jagadesh K N Mahadev ರವರು ತಮ್ಮ ಫೇಸ್ಟುಕ್ ಖಾತೆಯಲ್ಲಿ ಪ್ರಕಟಿಸಿರುವ ಹಲವಾರು ಮಾಹಿತಿಗಳ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ರವಿ ಡಿ . ಚನ್ನಣ್ಣನವರ್ ತಮ್ಮ ಅಧಿಕೃತ ಆದಾಯಕ್ಕೆ ಮೀರಿದ ಆಸ್ತಿಯನ್ನು ಸಂಪಾದಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೋ ಇಲ್ಲವೋ, ಆದರೆ ಹತ್ತಾರು ಕೋಟಿ ರೂಪಾಯಿಗಳ ಆಸ್ತಿಯಂತೂ ಇದ್ದಹಾಗೆ ಕಾಣಿಸುತ್ತಿದೆ. ಅದು ನಿಜವಾಗಿದ್ದರೆ ಇಷ್ಟೊಂದು ಆಸ್ತಿಯನ್ನು ಅವರು ಭ್ರಷ್ಟಾಚಾರ ಮಾಡದೇ ಸಂಪಾದಿಸಲು ಸಾಧ್ಯವಿಲ್ಲ ಎಂದು ಯಾರು ಬೇಕಾದರೂ ಊಹಿಸಬಹುದು. ಈ ಹಿನ್ನೆಲೆಯಲ್ಲಿ ರವಿ ಡಿ . ಚನ್ನಣ್ಣನವರ್ ಈ ಕೂಡಲೇ ಸಾರ್ವಜನಿಕವಾಗಿ ಸ್ಪಷ್ಟಿಕರಣ ನೀಡಬೇಕು ಮತ್ತು ತಮ್ಮ ಮತ್ತು ತಮ್ಮ ಕುಟುಂಬದ ಸ್ಥಿರ ಮತ್ತು ಚರಾಸ್ತಿಗಳನ್ನು ಪತ್ರಿಕಾ ಪ್ರಕಟಣೆಯ ಮೂಲಕ ಬಹಿರಂಗಪಡಿಸಬೇಕು. ತಮ್ಮ ಇಲಾಖಾ ವೃತ್ತಿಗೆ ಸಂಬಂಧಿಸಿಲ್ಲದ ಕಾರಣಗಳಿಗೆ ಸೆಲೆಬ್ರಿಟಿಯಾಗಿ ಸಾರ್ವಜನಿಕ ರಂಗದಲ್ಲಿ ಚಾಲ್ತಿಯಲ್ಲಿದ್ದ ಇವರು , ಈಗ ಇಲಾಖಾ ನಿಯಮಗಳ ಮರೆಯಲ್ಲಿ ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬಾರದು.
ಅದಕ್ಷ ಹಾಗೂ ನಾಲಾಯಕ್ ಆಗಿರುವ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ರವಿ ಡಿ . ಚನ್ನಣ್ಣನವರ್ ಅವರ ಕುಟುಂಬ ಮತ್ತು ಟ್ರಸ್ಟ್ನ ಕಟ್ಟಡ ಮತ್ತಿತರ ಕಡೆ ದಾಳಿ ಮಾಡಬೇಕು. ಇಷ್ಟೆಲ್ಲ ಆರೋಪಗಳು ಇದ್ದಾಗ್ಯೂ, ತಮ್ಮ ಸಹೋದ್ಯೋಗಿ ಅಧಿಕಾರಿಗೆ ಎಸಿಬಿ ರಕ್ಷಣೆ ನೀಡುತ್ತಿರುವುದು ನಾಚಿಕೆಗೇಡು.
ಇನ್ನು , ರವಿ ಡಿ . ಚನ್ನಣ್ಣನವರ್ ಭ್ರಷ್ಟಾಚಾರ ಮಾಡಿರುವುದು ನಿಜವೇ ಆದಲ್ಲಿ ಅದು ಅವರು ರಾಜ್ಯದ ಜನತೆಗೆ ಮಾಡಿದ ಬಹುದೊಡ್ಡ ವಿಶ್ವಾಸದ್ರೋಹ. ನ್ಯಾಯ, ನೀತಿ, ಧರ್ಮದ ಬಗ್ಗೆ ಭಾಷಣ ಮಾಡುತ್ತಾ, ಅದಕ್ಕೆ ತದ್ವಿರುದ್ದವಾಗಿ ನಡೆದುಕೊಂಡಿರುವ ಆತ್ಮದ್ರೋಹದ ಕೆಲಸವೂ ಹೌದು. ಅವರು ಈ ಕೂಡಲೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕು. ಮತ್ತಿನ್ಯಾವುದಾದರೂ ಕೆಲಸ ಹುಡುಕಿಕೊಳ್ಳಬೇಕು ಮತ್ತು ಭಾಷಣ ಮಾಡುವುದನ್ನು ನಿಲ್ಲಿಸಬೇಕು. ನೈತಿಕತೆ ಮತ್ತು ಮನಸ್ಸಾಕ್ಷಿ ಇರುವ ಯಾವುದೇ ವ್ಯಕ್ತಿ ಮಾಡಬಹುದಾದ ಕನಿಷ್ಠ ಕೆಲಸ ಇದು.
ಅತ್ತಿಬೆಲೆಯ ಮಂಜುನಾಥ್ ಎನ್ನುವವರು ನೀಡಿರುವ ದೂರಿನ ಪ್ರಕರಣದಲ್ಲಿ ಬೆಂಗಳೂರು ಕೇಂದ್ರ ವಲಯದ ಐಜಿಪಿ ಎಂ . ಚಂದ್ರಶೇಖರ್ ವಿಚಾರಣೆ ನಡೆಸಿ ರವಿ ಡಿ . ಚನ್ನಣ್ಣವರ್ ಅವರಿಗೆ ” ಕ್ಲೀನ್ ಚಿಟ್ ” ನೀಡಿದ್ದಾರೆ. ಕೆಳ ಹಂತದ ಅಧಿಕಾರಿಗಳನ್ನು ಬಲಿಪಶು ಮಾಡಿ, ಹಿರಿಯ ಅಧಿಕಾರಿಗಳನ್ನು ರಕ್ಷಿಸುವ ಇಂತಹ ಕೆಲಸಗಳಿಗೆ ಪೊಲೀಸ್ ಇಲಾಖೆ ಕುಖ್ಯಾತಿ ಪಡೆದಿದೆ. ಯಾವೆಲ್ಲಾ ರೀತಿ ವಿಚಾರಣೆ ನಡೆಸಿದ್ದಾರೆ ಎನ್ನುವ ವಿವರಗಳಿಲ್ಲದ ಇಂತಹ ತನಿಖಾ ನಾಟಕಗಳನ್ನು ಬಂದ್ ಮಾಡಿ ಪೊಲೀಸ್ ಇಲಾಖೆ ತನ್ನ ಗೌರವ ಉಳಿಸಿಕೊಳ್ಳಬೇಕು .
ಜನರಲ್ಲಿ ಸ್ಫೂರ್ತಿ ತುಂಬುವ ಹಾಗೂ ಉತ್ತಮ ನಡವಳಿಕೆಯ ಮತ್ತು ಆದರ್ಶ ವ್ಯಕ್ತಿಗಳ ಕೊರತೆ ತೀವ್ರವಾಗಿದೆ ಮತ್ತು ಅಂತಹವರು ಕೆಲವರೇ ಇದ್ದಾರೆ. ಸಾರ್ವಜನಿಕರಲ್ಲಿ ಸದಭಿಪ್ರಾಯ ಇರುವ ವ್ಯಕ್ತಿಗಳನ್ನು ಒಂದೇಸಲಕ್ಕೆ ಹಠಕ್ಕೆ ಬಿದ್ದವರಂತೆ ಟೀಕಿಸಬಾರದು ಮತ್ತು ಜನರಲ್ಲಿ ಎಲ್ಲದರ ಮತ್ತು ಎಲ್ಲರ ಬಗ್ಗೆಯೂ ಸಂಶಯವನ್ನು ಹುಟ್ಟಿಸಿ ಅವರನ್ನು ನಿರಾಶೆಯ ಕೂಪಕ್ಕೆ ನೂಕಬಾರದು ಎನ್ನುವ ಕಾರಣಕ್ಕೆ ನಾನು ಹಲವಾರು ವ್ಯಕ್ತಿಗಳ ಕುರಿತು ಪ್ರಜ್ಞಾಪೂರ್ವಕವಾಗಿ ಮಾತನಾಡುತ್ತಿಲ್ಲ. ಈಗಲೂ ಸಮಾಜದಲ್ಲಿ ಪ್ರಾಮಾಣಿಕರೆಂದು ಬಿಂಬಿತವಾಗಿರುವ ಹಲವಾರು ಸಿಂಗಂಗಳು ಮತ್ತು ಅಧಿಕಾರಿಗಳು ಎಂತಹ ಭ್ರಷ್ಟರು, ಅಪ್ರಾಮಾಣಿಕರು ಮತ್ತು ಖದೀಮರು ಎನ್ನುವ ವಿಷಯ ನನಗೆ ನಂಬಲರ್ಹ ಮೂಲಗಳಿಂದ ಇದೆ . ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ, ಮತ್ತು ಅದಕ್ಕೂ ಮುಖ್ಯವಾಗಿ ಪ್ರಾಮಾಣಿಕತೆ, ಆದರ್ಶ ಮತ್ತು ಆಶಾವಾದದ ಪ್ರತಿಮೆಗಳನ್ನು ಅತ್ಯುತ್ಸಾಹದಿಂದ ಮುನ್ನುಗ್ಗಿ ಒಡೆಯಬಾರದು ಎನ್ನುವ ಕಾರಣಕ್ಕೆ ನಾನು ಮಾತನಾಡುವುದಿಲ್ಲ. ಹಾಗಾಗಿಯೇ ರವಿ ಡಿ . ಚನ್ನಣ್ಣನವರ್ ವಿಷಯಕ್ಕೆ ನಾನು ಇಷ್ಟು ದಿನಗಳ ಕಾಲ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ರವಿ ಕೃಷ್ಣಾ ರೆಡ್ಡಿಯವರು ಬರೆದುಕೊಂಡಿದ್ದಾರೆ.
ರವಿ ಚನ್ನಣ್ಣನವರ್ ಅವರ ಆರೋಪದ ಬಗ್ಗೆ ಬರೆದುಕೊಂಡಿರುವ ರವಿ ಕೃಷ್ಣಾ ರೆಡ್ಡಿಯವರು, ಐಪಿಎಸ್ ಅಧಿಕಾರಿ ಸಾರ್ವಜನಿಕವಾಗಿ ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಬೇಕು. ತಮ್ಮ ಚಿರ ಹಾಗೂ ಚರಾಸ್ತಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಇಷ್ಟೊಂದು ಆರೋಪ ಬಂದಿದ್ದರೂ ರಾಜ್ಯ ಭ್ರಷ್ಠಾಚಾರ ನಿಗ್ರಹ ದಳ ಅವರ ಮನೆ ಮೇಲೆ ದಾಳಿ ಮಾಡದೇ ಇರುವುದರ ಬಗ್ಗೆ ಅವರು ಆಕ್ಷೇಪಿಸಿದ್ದಾರೆ. ಅಧಿಕಾರಿ ವರ್ಗ ಇವರ ಸಹಾಯಕ್ಕೆ ನಿಂತು ಕ್ಲೀನ್ ಚಿಟ್ ನೀಡಿದೆ. ತನಿಖಾ ವರದಿಯೇ ಪಾರದರ್ಶಕವಾಗಿಲ್ಲ.
ಇನ್ನು, ರವಿ ಡಿ ಚನ್ನಣ್ಣನವರ್ ಅವರು ಅಕ್ರಮವಾಗಿ ಏನಾದರು ಆಸ್ತಿ ಮಾಡಿದ್ದರೆ ಬಟ್ಟೆ ಕಳಿಚಿ ಬೇರೆ ಕೆಲಸ ಹುಡುಕಿಕೊಂಡು ಭಾಷಣ ಮಾಡುವುದನ್ನು ಬಿಡಬೇಕು ಎಂದು ರವಿಕೃಷ್ಣಾ ರೆಡ್ಡಿಯವರು ಆಗ್ರಹಿಸಿದ್ದಾರೆ.