ಹಾಸನ ಮತ್ತು ಮಂಡ್ಯ ಜೆಡಿಎಸ್​ನಲ್ಲಿ ಹೊಸ ಬೆಳವಣಿಗೆ..?

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್​ನಲ್ಲಿ ಮಹತ್ವದ ಬೆಳವಣಿಗೆ ಆಗುವ ಎಲ್ಲಾ ಸಾಧ್ಯತೆಗಳಿವೆ.

ಅದರಲ್ಲೂ ಹಾಸನ ಮತ್ತು ಮಂಡ್ಯ ಜಿಲ್ಲೆಗೆ ಸಂಬಂಧಪಟ್ಟಂತೆ ಜೆಡಿಎಸ್​ ವರಿಷ್ಠರೂ ಆಗಿರುವ ಮಾಜಿ ಪ್ರಧಾನಿ ದೇವೇಗೌಡರು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಹೊಳೆನರಸೀಪುರ ಕ್ಷೇತ್ರದಲ್ಲಿ ಈ ಬಾರಿ ಹೆಚ್​ ಡಿ ರೇವಣ್ಣ ಅವರು ಸ್ಪರ್ಧೆ ಮಾಡಲ್ಲ. ಬದಲಿಗೆ ಆ ಕ್ಷೇತ್ರವನ್ನು ತಮ್ಮ ಪತ್ನಿ ಭವಾನಿ ರೇವಣ್ಣ ಅವರಿಗೆ ಬಿಟ್ಟುಕೊಡುವ ನಿರೀಕ್ಷೆ ಇದೆ.

ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದ ಟಿಕೆಟ್​​ಗಾಗಿ ಬೇಡಿಕೆ ಇಟ್ಟಿದ್ದಾರೆಯಾದರೂ ಅಲ್ಲಿ ಮಾಜಿ ಶಾಸಕ ದಿವಂಗತ ಹೆಚ್​ ಎಸ್​ ಪ್ರಕಾಶ್​ ಅವರ ಪುತ್ರ ಹೆಚ್​ ಪಿ ಸ್ವರೂಪ್​ ಅವರಿಗೆ ಟಿಕೆಟ್​ ನೀಡುವುದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನಸ್ಸು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹಾಸನ ಬದಲು ಸುರಕ್ಷಿತ ಕ್ಷೇತ್ರವಾಗಿ ಹೊಳೆನರಸೀಪುರದಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್​ ಸಿಗುವ ನಿರೀಕ್ಷೆ ದಟ್ಟವಾಗಿದೆ.

ಇತ್ತ ಹೆಚ್​ ಡಿ ರೇವಣ್ಣ ಅವರು ತಮ್ಮ ಚುನಾವಣಾ ರಾಜಕೀಯವನ್ನು ಮಂಡ್ಯ ಜಿಲ್ಲೆಯ ಕೆ ಆರ್​ ಪೇಟೆ ಕ್ಷೇತ್ರಕ್ಕೆ ವರ್ಗಾಯಿಸುವ ನಿರೀಕ್ಷೆ ಇದೆ.

ಕೆ ಆರ್​ ಪೇಟೆಯಲ್ಲಿ ಈಗಾಗಲೇ ಜೆಡಿಎಸ್​ ಅಭ್ಯರ್ಥಿ ಘೋಷಣೆ ಮಾಡಿದೆಯಾದರೂ ಪಕ್ಷದ ಈಗಿನ ಅಭ್ಯರ್ಥಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಹೆಚ್​ ಟಿ ಮಂಜು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಕೆ ಅರ್​ ಪೇಟೆಯಿಂದ ರೇವಣ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here