ಕಳೆದ ವರ್ಷ ನಾಲ್ಕು ಸಾರಿಗೆ ನಿಗಮಗಳ ನೌಕರರ ಮುಷ್ಕರ ನಡೆದಿತ್ತು. ರಾಜ್ಯ ಸರ್ಕಾರ ಸಾರಿಗೆ ನೌಕರರ ಹೋರಾಟ ನಿಯಂತ್ರಣಕ್ಕೆ ಯಾವುದೇ ಪ್ರಯತ್ನ ಮಾಡಿದ್ದರೂ, ಫಲ ನೀಡಿರಲಿಲ್ಲ. ನೌಕರರ ಹೋರಾಟ ಮತ್ತಷ್ಟು ಕಠಿಣವಾಗುತ್ತಾ ಸಾಗಿತ್ತು. ನೌಕರರ ಹೋರಾಟಕ್ಕೆ ಮಣಿದ ಸರ್ಕಾರ ಅವರ ಬಹುತೇಕ ಬೇಡಿಕೆಗಳಿಗೆ ಅಸ್ತು ಎಂದಿತ್ತು. ಆದರೆ, ಸಾರಿಗೆ ನೌಕರರ ಪ್ರತಿಭಟನೆ ವಾಪಸ್ ಪಡೆಯುವ ಸಂದರ್ಭದಲ್ಲಿ ವ್ಯಾಪಕ ಭ್ರಷ್ಟಚಾರಾ ನಡೆದಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೆಎಸ್ಆರ್ಟಿಸಿ ಸ್ಟಾಫ್ ಆಯಂಡ್ ವರ್ಕರ್ಸ್ ಫೆಡರೇಷನ್ (ಎಐಟಿಯುಸಿ) ಒತ್ತಾಯಿಸಿದೆ.
2021ರ ಏಪ್ರಿಲ್ 7ರಿಂದ 21ರವರೆಗೆ ಕರೆ ನೀಡಿದ್ದ ಮುಷ್ಕರ ಯಾವುದೇ ‘ಕೈಗಾರಿಕಾ ಒಪ್ಪಂದ’ ಇಲ್ಲದೆ ಅಂತ್ಯಗೊಂಡಿತ್ತು. ಈ ಮುಷ್ಕರ ವಾಪಸ್ ಪಡೆಯುವ ವಿಚಾರದಲ್ಲಿ ಮುಷ್ಕರದ ನೇತೃತ್ವ ವಹಿಸಿದವರಿಗೆ ಕೋಟ್ಯಂತರ ರೂಪಾಯಿ ಕಿಕ್ಬ್ಯಾಕ್ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ ಎಂದು ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ತಿಳಿಸಿದ್ದಾರೆ.
ನೌಕರರ ನಾಯಕತ್ವವನ್ನು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿದ್ದರು. ಮುಷ್ಕರವನ್ನು ವಾಪಸ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು ₹35 ಕೋಟಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಕಿಕ್ಬ್ಯಾಕ್ನ ಅರ್ಧ ಮೊತ್ತವನ್ನು ಕಪ್ಪು ಹಣದ ರೂಪದಲ್ಲಿ ಮತ್ತು ಉಳಿದರ್ಧ ಹಣವನ್ನು ದುಬೈನಲ್ಲಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರ ಪತ್ನಿ ಮತ್ತು ಮಗನ ಖಾತೆಗೆ ಹಾಕಿದ್ದಾರೆ ಎನ್ನಲಾಗಿದೆ. ಕಪ್ಪು ಹಣ ಯಾರಿಗೆ ನೀಡಲಾಗಿದೆ ಎನ್ನುವುದು ಬಹಿರಂಗವಾಗಬೇಕು. ಹೀಗಾಗಿ, ತಕ್ಷಣವೇ ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪದ ಮೇಲೆ ಮೊಕದ್ದಮೆ ದಾಖಲಿಸಬೇಕು ಮತ್ತು ಎಲ್ಲ ಅಂಶಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದೀಗ, ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹಲವು ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.