ರೈಲು ದುರಂತ: ಮೃತರಲ್ಲಿ ಕನ್ನಡಿಗರಿಲ್ಲ – ಸಿಲುಕಿದ್ದವರು ವಿಮಾನ ಮೂಲಕ ಬೆಂಗಳೂರಿಗೆ ರವಾನೆ

ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆ ಆಗಿದೆ.
ರೈಲು ದುರಂತದಿಂದ ಕೋಲ್ಕತ್ತಾ ಮತ್ತು ಹೌರಾದಲ್ಲಿ ಸಿಲುಕಿಕೊಂಡಿರುವ 32 ಮಂದಿ ವಾಲಿಬಾಲ್​ ಆಟಗಾರರನ್ನು ಕರ್ನಾಟಕ ಸರ್ಕಾರ ವಿಮಾನ ಮೂಲಕ ಬೆಂಗಳೂರಿಗೆ ಕರೆ ತರುವ ವ್ಯವಸ್ಥೆ ಮಾಡಿದೆ.
ಅಪಘಾತದ ಹಿನ್ನೆಲೆಯಲ್ಲಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಯಾವುದೇ ರೈಲುಗಳಿಲ್ಲ.
ನಾಳೆ ಬೆಳಿಗ್ಗೆ ಕೊಲ್ಕತ್ತಾದಿಂದ ಬೆಂಗಳೂರಿಗೆ ಕ್ರೀಡಾಪಟುಗಳು ತೆರಳಲಿದ್ದು ಅವರನ್ನು ಕ್ಷೇಮವಾಗಿ ರಾಜ್ಯಕ್ಕೆ ಕರೆತರಲು ಸಕಲ ವ್ಯವಸ್ಥೆ ಮಾಡಲಾಗಿದೆ.
ಸಚಿವ ಸಂತೋಷ್​ ಲಾಡ್​ ಭೇಟಿ:
ಅಪಘಾತಕ್ಕೊಳಗಾಗಿರುವ ಒಡಿಶಾ ರಾಜ್ಯದ ಬಾಲಸೋರ್​ಗೆ ಕಾರ್ಮಿಕ ಸಚಿವ ಸಂತೋಷ್​ ಲಾಡ್​ ಅವರು ಭೇಟಿ ನೀಡಿದ್ದಾರೆ. ಸಚಿವರಿಗೆ ನೈಸರ್ಗಿಕ ವಿಪತ್ತ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್​ ರಂಜನ್ ಕೂಡಾ ಜೊತೆಯಾಗಿದ್ದಾರೆ.
ಮೃತರಲ್ಲಿ ಕನ್ನಡಿಗರಿಲ್ಲ:
ರೈಲ್ವೆ ಇಲಾಖೆ ನೀಡಿರುವ ಹೊಸ ಮಾಹಿತಿಯ ಪ್ರಕಾರ ಅಪಘಾತದಲ್ಲಿ ಮೃತಪಟ್ಟವರಲ್ಲಿ ಕನ್ನಡಿಗರು ಯಾರೂ ಇಲ್ಲ. ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, 33 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.