ಬಿಜೆಪಿ ನೇತೃತ್ವದ ಎನ್ಡಿಎಯ ರಾಷ್ಟ್ರಪತಿ ಅಭ್ಯರ್ಥಿ ‘ದ್ರೌಪದಿ ಮುರ್ಮು’ ಅವರಿಗೆ ಬೆಂಬಲ ನೀಡುವುದಾಗಿ ತೆಲುಗು ದೇಶಂ ಪಕ್ಷ (ಟಿಡಿಪಿ) ಸೋಮವಾರ ಘೋಷಿಸಿದೆ.
ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರು ಪಕ್ಷದ ನೀತಿ ನಿರೂಪಣಾ ಸಮಿತಿ ಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಟಿಡಿಪಿ ಯಾವಾಗಲೂ ಸಾಮಾಜಿಕ ನ್ಯಾಯದ ಪರ ನಿಲ್ಲುತ್ತದೆ. ಈ ಹಿಂದೆ ಕೆ.ಆರ್.ನಾರಾಯಣನ್ ಮತ್ತು ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಬೆಂಬಲ ನೀಡಿತ್ತು. ಅದೇ ರೀತಿ ಈ ಬಾರಿ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಸ್ಪರ್ಧಿಸಿರುವ ಆದಿವಾಸಿ ಮಹಿಳೆ, ದ್ರೌಪದಿ ಮುರ್ಮು ಅವರನ್ನು ಪಕ್ಷವು ಬೆಂಬಲಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಟಿಡಿಪಿ ರಾಜ್ಯಸಭೆಯಲ್ಲಿ ಒಂದು ಸ್ಥಾನ, ಲೋಕಸಭೆಯಲ್ಲಿ 3 ಸ್ಥಾನ ಹಾಗೂ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ 23 ಸದಸ್ಯರನ್ನು ಹೊಂದಿದೆ.
ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಈಗಾಗಲೇ ಹಲವು ಪ್ರಾದೇಶಿಕ ಪಕ್ಷಗಳು ಬೆಂಬಲ ಘೋಷಣೆ ಮಾಡಿವೆ.