ಮಧ್ಯರಾತ್ರಿ ತಮಿಳುನಾಡು ಮಂತ್ರಿ ಬಂಧನ -ಕುಸಿದು ಬಿದ್ದ ಸಚಿವನಿಗೆ ಎದೆನೋವು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತಮಿಳುನಾಡು ಸರ್ಕಾರದ ಇಂಧನ ಸಚಿವ ಸೆಂಥಿಲ್​ ಬಾಲಾಜಿ ಅವರನ್ನು ಬಂಧಿಸಿದೆ.

ಚೆನ್ನೈನಲ್ಲಿರುವ ಸೆಂಥಿಲ್​ ಅವರ ನಿವಾಸದಲ್ಲಿ 18 ಗಂಟೆಗಳ ಸುದೀರ್ಘ ವಿಚಾರಣೆಯ ಬಳಿಕ ಈಡಿ ಬಂಧಿಸಿದೆ.

ಇವತ್ತು ಮಧ್ಯರಾತ್ರಿ 2 ಗಂಟೆಗೆ ಈಡಿ ಸೆಂಥಿಲ್​ ಅವರನ್ನು ಬಂಧಿಸಿತು.

ಬಂಧನವಾಗುತ್ತಿದ್ದಂತೆ ಕುಸಿದು ಬಿದ್ದ ಸೆಂಥಿಲ್​ ಅವರನ್ನು ಚೆನ್ನೈನಲ್ಲಿರುವ ಸರ್ಕಾರಿ ಬಹು ಸೌಲಭ್ಯ ಇರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

2011ರಿಂದ 2016ರ ಅವಧಿಯಲ್ಲಿ ಎಐಡಿಎಂಕೆ ಸರ್ಕಾರದಲ್ಲಿ ಸೆಂಥಿಲ್​ ಅವರು ಸಾರಿಗೆ ಸಚಿವರಾಗಿದ್ದರು. ಈ ವೇಳೆ ಇಲಾಖೆಯಲ್ಲಿ ನೇಮಕಾತಿಯಲ್ಲಿ ನಡೆದಿದ್ದ ಭ್ರಷ್ಟಾಚಾರ ಸಂಬಂಧ 2021ರ ಮಾರ್ಚ್​ನಲ್ಲಿ ಚೆನ್ನೈ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದರು. 2014-15ರ ಅವಧಿಯಲ್ಲಿ ನಡೆದಿದ್ದ ನೇಮಕಾತಿ ಹಗರಣ ಸಂಬಂಧ ಪೊಲೀಸರು ಸಚಿವ ಸೆಂಥಿಲ್​ ಮತ್ತು ಇತರೆ ಅಧಿಕಾರಿಗಳು ಸೇರಿದಂತೆ ಒಟ್ಟು 46 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. 

ಕಳೆದ ತಿಂಗಳಷ್ಟೇ ಸುಪ್ರೀಂಕೋರ್ಟ್​ ಈಡಿಗೆ ವಿಚಾರಣೆ ನಡೆಸಲು ಅನುಮತಿ ನೀಡಿತ್ತು.