SCP ಅನುದಾನದ SCಗಳಿಗಷ್ಟೇ ಬಳಕೆ ಆಗ್ಬೇಕು – ಸಮಾಜ ಕಲ್ಯಾಣ ಸಚಿವ ಹೆಚ್​ ಸಿ ಮಹದೇವಪ್ಪ ಸೂಚನೆ

ಪರಿಶಿಷ್ಟ ಜಾತಿ ವರ್ಗದ ಜನರ ಏಳಿಗೆಗಾಗಿ ಈ ಹಿಂದೆ ಜಾರಿಗೊಳಿಸಲಾಗಿದ್ದ SCP ಕಾಯ್ದೆಯಡಿಯಲ್ಲಿ ಹಂಚಿಕೆ ಮಾಡಲಾಗಿರುವ ಹಣವನ್ನು ಈ ಹಿಂದೆ  ಬೇರೆ ಇಲಾಖೆಗಳಿಗೆ ವರ್ಗಾಯಿಸಿರುವುದು SCP ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿದ್ದು, ಕಾಯ್ದೆಯ ನಿಯಮಾವಳಿಯಂತೆ SCP ಕಾಯ್ದೆಯ ಹಣವನ್ನು ಪರಿಶಿಷ್ಟ ಜಾತಿಯ ಜನರ ಏಳಿಗೆಗೆ ಮಾತ್ರವೇ ಬಳಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಹೆಚ್​ ಸಿ ಮಹದೇವಪ್ಪ ಅವರು  ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಾಯ್ದೆಗಳನ್ನು ಮಾಡುವುದು ಜನರ ಅನುಕೂಲಕ್ಕಾಗಿಯೇ ಹೊರತು ಕಾಯ್ದೆಯನ್ನು ಉಲ್ಲಂಘಿಸಲು ಅಲ್ಲ. ಈ ಹಿನ್ನಲೆಯಲ್ಲಿ SCP ಕಾಯ್ದೆಯಡಿ ನಿಗದಿ ಪಡಿಸಿರುವ ಅನುದಾನವನ್ನು ಎಲ್ಲಾ ಇಲಾಖೆಗಳು ಸಮರ್ಥವಾಗಿ ಬಳಸಿಕೊಂಡು ಜನರ ಬದುಕಿಗೆ ಸಹಾಯ ಮಾಡಬೇಕು. ಇದರ ಜೊತೆಗೆ ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುವುದನ್ನು ಕಲಿಯಬೇಕು ಎಂದು ಸಚಿವರು ಸಲಹೆ ನೀಡಿದರು.

ಅತ್ಯಂತ ಮುಖ್ಯವಾಗಿ ಯಾವುದೇ ಕಾರಣಕ್ಕೂ SCP ಕಾಯ್ದೆಯ ಹಣವನ್ನು ಬೇರೆಡೆಗೆ ವರ್ಗಾಯಿಸದೇ ಪರಿಶಿಷ್ಟ ಜಾತಿಯ ಜನರ ಏಳಿಗೆಗೆ ಬಳಸಬೇಕು ಮತ್ತು ಯೋಜನೆಯ ಅನುಕೂಲಗಳು ಮಧ್ಯವರ್ತಿಗಳನ್ನು ದಾಟಿ ನಿಜವಾದ ಫಲಾನುಭವಿಗಳಿಗೆ ದೊರಕಬೇಕು ಎಂದು ಸಚಿವ ಮಹದೇವಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದೇ ವೇಳೆ ಎಲ್ಲಾ ಇಲಾಖೆಗಳಲ್ಲಿ SCP ಉದ್ದೇಶಕ್ಕಾಗಿ ಇರುವ ಅನುದಾನದ ಬಳಕೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆಯನ್ನೂ ಸಚಿವರು ನಡೆಸಿದರು.