BREAKING: ಬಿಲ್ಲವ ನಾಯಕ ಸತ್ಯಜಿತ್​ ಸುರತ್ಕಲ್​ಗೆ ಬಿಜೆಪಿ ಸರ್ಕಾರದಿಂದ ಭದ್ರತೆ ವಾಪಸ್​

ಕರಾವಳಿಯಲ್ಲಿ ಹಿಂದೂ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ, ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿಯೂ ಆಗಿದ್ದ ಪ್ರಮುಖ ಬಿಲ್ಲವ ನಾಯಕ ಸತ್ಯಜಿತ್​ ಸುರತ್ಕಲ್​ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ರಾಜ್ಯ ಬಿಜೆಪಿ ಸರ್ಕಾರ ವಾಪಸ್​ ಪಡೆದಿದೆ.

ರಾಜ್ಯ ಸರ್ಕಾರ ನೀಡಿರುವ ಭದ್ರತೆ ವಾಪಸ್​ ಪಡೆಯುವ ಬಗ್ಗೆ ಮಂಗಳೂರು ಉಪ ಪೊಲೀಸ್​ ಆಯುಕ್ತ ಅಂಶುಕುಮಾರ್​ ಅವರು ಮಾರ್ಚ್​ 4ರಂದು ಸತ್ಯಜಿತ್​ ಸುರತ್ಕಲ್​ ಅವರಿಗೆ ಪತ್ರ ಬರೆದಿದ್ದಾರೆ.

ಒಂದು ವೇಳೆ ಪೊಲೀಸ್​ ಇಲಾಖೆಯಿಂದ ಭದ್ರತೆ ಬೇಕಾಗಿದ್ದಲ್ಲಿ ಭದ್ರತಾ ವೆಚ್ಚವನ್ನು ಪಾವತಿಸಿ ಪೊಲೀಸ್​ ಅಂಗರಕ್ಷಕ ಭದ್ರತೆಯನ್ನು ಪಡೆಯುವಂತೆ ಸತ್ಯಜಿತ್​ ಸುರತ್ಕಲ್​ ಅವರಿಗೆ ಪೊಲೀಸ್ ಇಲಾಖೆ ಸೂಚಿಸಿದೆ.

ಇತ್ತ ಮಾರ್ಚ್​ 13ರಂದು ಉಪ ಪೊಲೀಸ್​ ಆಯುಕ್ತರಿಗೆ ಪತ್ರ ಬರೆದಿರುವ ಸತ್ಯಜಿತ್​ ಸುರತ್ಕಲ್​ ಅವರು

ನನಗೆ ಕಳೆದ 16 ವರ್ಷಗಳಿಂದ ಮುಸ್ಲಿಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇದೆ. ಈ ಕಾರಣಕ್ಕಾಗಿ ಸರ್ಕಾರದಿಂದ ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗಿತ್ತು.

ನಾನು ಆರ್ಥಿಕವಾಗಿ ಶುಲ್ಕ ಪಾವತಿಸಿ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಲು ಆರ್ಥಿಕ ಸಶಕ್ತನಾಗದೇ ಇರುವುದರಿಂದ ಮತ್ತು ನನಗೆ ಈಗಲೂ ಮುಸ್ಲಿಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇರುವುದರಿಂದ ಹಿಂದಿನಂತೆ ಸರ್ಕಾರ ವತಿಯಿಂದಲೇ ಶುಲ್ಕವಿಲ್ಲದೇ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮುಂದುವರೆಸುವಂತೆ

ಸತ್ಯಜಿತ್​ ಸುರತ್ಕಲ್​ ಮನವಿ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ಬಗ್ಗೆ ಸತ್ಯಜಿತ್​ ಸುರತ್ಕಲ್​ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿಯೇ ಅವರನ್ನು ಬಿಜೆಪಿ ಸರ್ಕಾರ ಭದ್ರತೆ ವಾಪಸ್​ ಪಡೆದಿದೆ ಎಂದು ಹಿಂದೂ ಪರ ಕಾರ್ಯಕರ್ತರು ಮತ್ತು ಬಿಲ್ಲವ ಸಮುದಾಯ ಕಿಡಿಕಾರಿದೆ.​