ಮೈಸೂರಿನ ಪಿರಿಯಾಪಟ್ಟಣದ ಕುಗ್ಗುಂಡಿ ಗ್ರಾಮದಲ್ಲಿ ತಂದೆಯೇ ಮಗಳನ್ನು ಕೊಂದಿರುವ ಘಟನೆ ವರದಿಯಾಗಿದ್ದು, ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ.
ಸುರೇಶ್ ಹಾಗೂ ಬೇಬಿ ದಂಪತಿಯ ಶಾಲಿನಿ (17) ಮರ್ಯಾದಾ ಹತ್ಯೆಗೀಡಾದ ಯುವತಿ.
ಶಾಲಿನಿ ಪಿಯುಸಿ ಓದುವ ಸಮಯದಲ್ಲಿ ಪಕ್ಕದ ಮೆಲ್ಲಹಳ್ಳಿ ಗ್ರಾಮದ ಮಂಜು ಎನ್ನುವ ಯುವಕನೊಂದಿಗೆ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಪೋಷಕರ ಆಕ್ಷೇಪವಿದ್ದರೂ ಯುವತಿ ಕಿವಿಗೊಟ್ಟಿರಲಿಲ್ಲ. ಶಾಲಿನಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ಮಂಜು ಹಾಗೂ ಸುರೇಶ್ ಅವರ ನಡುವೆ ಗಲಾಟೆ ನಡೆದು, ಪೊಲೀಸ್ ಠಾಣೆಗ ಮೆಟ್ಟಿಲೇರಿತ್ತು.
ಮದುವೆಯಾಗಲು ನಿರ್ಧರಿಸಿದ್ದ ಶಾಲಿನಿ ಹಾಗೂ ಮಂಜು ಮನೆ ಬಿಟ್ಟು ಓಡಿ ಹೋಗಿದ್ದರು. ಆದರೆ, ಯುವತಿಗೆ ವಯಸ್ಸಾಗದ ಹಿನ್ನೆಲೆಯಲ್ಲಿ ಪೊಲೀಸರು ಯುವತಿಯನ್ನು ಮೈಸೂರಿನ ಬಾಲ ಮಂದಿರಕ್ಕೆ ಕಳುಹಿಸಿದ್ದರು. ಬಾಲ ಮಂದಿರದಿಂದ ಪೋಷಕರಿಗೆ ಕರೆ ಮಾಡಿದ್ದ ಯುವತಿ ತನ್ನನ್ನು ಬಂದು ಕರೆದುಕೊಂಡು ಹೋಗಲು ಹೇಳಿದ್ದಳು.
ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದ ಪೋಷಕರು ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಮತ್ತೆ ಜೂನ್ 6 ರಂದು ಯುವತಿ ಮಂಜುವಿನೊಂದಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿದಾಗ ಪೋಷಕರು ವಿರೋಧಿಸಿದ್ದಾರೆ. ಆದಾಗ್ಯೂ, ಮಗಳು ಹಠ ಹಿಡಿದಾಗ ತಂದೆ ಸುರೇಶ್ ಮಗಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ.
ಮಗಳ ದೇಹವನ್ನು ಪ್ರೀತಿಸುತ್ತಿದ್ದ ಯುವಕನ ಗ್ರಾಮದ ಜಮೀನಿನಲ್ಲಿ ಎಸೆದು ಹೋಗಿದ್ದಾರೆ. ಮಂಗಳವಾರ ಬೆಳಿಗ್ಗೆ ಪರಿಯಾಪಟ್ಟಣ ಪೊಲೀಸ್ ಸ್ಟೇಷನ್ಗೆ ತಂದೆ ಸುರೇಶ್ ಹೋಗಿ ಶರಣಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.