ಅಮರನಾಥಯಾತ್ರೆಗೆ ತೆರಳಿದ್ದ ನಟಿ ಸಾಯಿ ಪಲ್ಲವಿ ಯಾತ್ರೆಯ ಅನುಭಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಯಾತ್ರೆ ತನ್ನ ಸಂಕಲ್ಪ ಶಕ್ತಿಗೆ ಸವಾಲ್ ಹಾಕುವ ಜೊತೆಗೆ ಮಾನಸಿಕವಾಗಿ ಹಲವು ಪರೀಕ್ಷೆಗಳು ಒಡ್ಡಿತು ಎಂದಿದ್ದಾರೆ.
ವೈಯಕ್ತಿಕ ವಿಚಾರ ಹಂಚಿಕೊಳ್ಳಲು ನಾನು ಹೆಚ್ಚು ಆಸಕ್ತಿ ತೋರಿಸಲ್ಲ. ಆದರೆ, ಅಮರನಾಥ ಯಾತ್ರೆ ಬಗ್ಗೆ ಎಲ್ಲರಿಗೂ ಹೇಳಬೇಕು ಎಂದು ಭಾವಿಸಿರುವೆ.
ಎಷ್ಟೋ ವರ್ಷದಿಂದ ತೆರಳಬೇಕು ಎಂದು ಕನಸು ಕಂಡಿದ್ದ ಯಾತ್ರೆಯಿದು. 60 ವರ್ಷದ ತಂದೆ-ತಾಯಿಯನ್ನು ಈ ಯಾತ್ರೆಗೆ ಕರೆದೊಯ್ದಿದ್ದು ಎಷ್ಟೋ ಸವಾಲುಗಳನ್ನು ಎದುರಿಸಲು ಕಾರಣವಾಯಿತು.
ಕೆಲವೊಮ್ಮೆ ಅವರು ಉಸಿರೆಳೆದುಕೊಳ್ಳುವುದಕ್ಕೂ ಕಷ್ಟಪಟ್ಟಿದನ್ನು, ದಾರಿ ಮಧ್ಯೆ ಸುಸ್ತಾಗಿದ್ದನ್ನು ಕಂಡು ಸ್ವಾಮಿ ನೀವು ಇಷ್ಟು ದೂರದಲ್ಲೇಕೆ ನೀವು ನೆಲೆಸಿದ್ದೀರಿ ಎಂದು ಪ್ರಶ್ನಿಸುವಂತೆ ಮಾಡಿತು. ದೈವದರ್ಶನದ ನಂತರ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು.
ಬೆಟ್ಟ ಇಳಿದು ಬರುವಾಗ ಮನಸ್ಸನ್ನು ಟಚ್ ಮಾಡುವ ದೃಶ್ಯವನ್ನು ನೋಡಿದೆ.
ಯಾತ್ರೆಯನ್ನು ಮುಂದುವರೆಸಲಾಗದೇ ಕೆಲ ಯಾತ್ರಿಕರು ಒದ್ದಾಡುತ್ತಿರುವಾಗ.. ಅವರಿಗೆ ಧೈರ್ಯ ತುಂಬುವ ಸಲುವಾಗಿ ಅಕ್ಕಪಕ್ಕದಲ್ಲಿದ್ದವರು ಓಂ ನಮಃ ಶಿವಾಯ ಎಂದು ಸ್ವಾಮಿಯನ್ನು ಗಟ್ಟಿಯಾಗಿ ಸ್ಮರಿಸಿದರು.
ತೆರಳಲು ಆಗುವುದೇ ಇಲ್ಲ ಎಂದು ಭಾವಿಸಿದ ಯಾತ್ರಿಕರು ಕೂಡ ಸ್ವಾಮಿ ನಾಮವನ್ನು ಜಪಿಸುತ್ತಾ ಮುಂದಕ್ಕೆ ಹೆಜ್ಜೆ ಹಾಕಿದರು.
ನಮ್ಮಂತಹ ಲಕ್ಷಾಂತರ ಭಕ್ತರಿಗೆ ಅಮರನಾಥ ಯಾತ್ರೆ ಚಿರಸ್ಮರಣೀಯವಾಗಿಸಿದ ಶ್ರೀಅಮರನಾಥ್ಜಿ ಪುಣ್ಯಕ್ಷೇತ್ರ ಬೋರ್ಡ್ನಲ್ಲಿರುವ ಪ್ರತಿಯೊಬ್ಬರಿಗೂ ನನ್ನ ಪ್ರಣಾಮಗಳು.
ಹಾಗೆಯೇ ನಮ್ಮನ್ನು ಎಲ್ಲಾ ಸಂದರ್ಭದಲ್ಲೂ ಸಂರಕ್ಷಣೆ ಮಾಡುತ್ತಿರುವ ಸೇನೆ, ಸಿಆರ್ಪಿಎಫ್, ಪೊಲೀಸ್ ಸಿಬ್ಬಂದಿಗೆ ಧನ್ಯವಾದಗಳು.
ನಿಸ್ವಾರ್ಥ ಸೇವೆಗೆ ಇದು ಸಾಕ್ಷಿಯಾಗಿ ನಿಲ್ಲುವ ಕಾರಣ ಈ ಪ್ರದೇಶದ ಮಹಿಮೆ ಅಪಾರ. ಸಂಪತ್ತು, ಸೌಂದರ್ಯ, ಅಧಿಕಾರದ ಜೊತೆ ಸಂಬಂಧ ಇಲ್ಲದೇ ಇತರರಿಗೆ ಸಹಾಯ ಮಾಡುವುದು ಈ ಭೂಮಿಯ ಮೇಲಿನ ನಮ್ಮ ಪಯಣಕ್ಕೆ ಒಂದು ಮೌಲ್ಯ ನೀಡುತ್ತದೆ.
ಅಮರನಾಥ ಯಾತ್ರೆ ನನ್ನ ಸಂಕಲ್ಪ ಶಕ್ತಿಯನ್ನು, ನನ್ನ ಧೈರ್ಯವನ್ನು ಪರೀಕ್ಷಿಸಿತು. ನಮ್ಮ ಜೀವನವೇ ಒಂದು ತೀರ್ಥಯಾತ್ರೆ ಎಂಬ ಸತ್ಯವನ್ನು ತಿಳಿಯುವಂತೆ ಮಾಡಿತು.
ಮನುಷ್ಯನಾಗಿ ನಾವು ಇತರೆ ವ್ಯಕ್ತಿಗಳಿಗೆ ಸಹಾಯ ಮಾಡದಿದ್ದಲ್ಲಿ ಸತ್ತ ಹೆಣಕ್ಕೆ ಸಮಾನ ಎಂಬುದನ್ನು ಈ ಯಾತ್ರೆ ತಿಳಿಯಪಡಿಸಿತು.
ಹೀಗೆಂದು ನಟಿ ಸಾಯಿ ಪಲ್ಲವಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ವಿರಾಟಪರ್ವ ಬಳಿಕ ಯಾವುದೇ ಸಿನಿಮಾಗಳಲ್ಲಿ ನಟಿ ಸಾಯಿಪಲ್ಲವಿ ಕಾಣಿಸಿಕೊಂಡಿಲ್ಲ. ಇದೀಗ ಶಿವಕಾರ್ತಿಕೆಯನ್ ಜೊತೆಗಿನ ಸಿನಿಮಾಗೆ ಓಕೆ ಹೇಳಿದ್ದಾರೆ ಎನ್ನಲಾಗಿದೆ.
ADVERTISEMENT
ADVERTISEMENT