ಪ್ರಧಾನಿ ಕಚೇರಿಯಿಂದಲೇ ನನ್ನ ಬಂಧನಕ್ಕೆ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಗಂಭೀರ ಆರೋಪ ಮಾಡಿದ್ದಾರೆ.
ಅಸ್ಸಾಂನಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದು ಬಿಡುಗಡೆಯಾದ ನಂತರ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಗ್ನೇಶ್ ಮೇವಾನಿ, ನನ್ನ ಬಂಧನಕ್ಕೆ ಪ್ರಧಾನಿ ಕಚೇರಿಯಿಂದಲೇ ಷಡ್ಯಂತ್ರ ರೂಪಿಸಲಾಗಿದೆ. ಇದು ನನ್ನನ್ನು ನಾಶಮಾಡಲು ಪೂರ್ವ ಯೋಜಿತ ಸಂಚು. ಅವರು ನನ್ನನ್ನು ಕರೆದೊಯ್ದಾಗ ಪ್ರಕರಣದ ವಿವರಗಳನ್ನು ನೀಡಲಿಲ್ಲ. ನಾನು ವಕೀಲ ಮತ್ತು ಶಾಸಕ. ಅವರು ನನ್ನ ವಿರುದ್ಧ ಬಳಸಲಾದ ಸೆಕ್ಷನ್ಗಳನ್ನು ಅವರು ನನಗೆ ಹೇಳಲಿಲ್ಲ ಮತ್ತು ನನ್ನ ಹೆತ್ತವರೊಂದಿಗೆ ಮಾತನಾಡಲು ಬಿಡಲಿಲ್ಲ. ನನ್ನ ವಕೀಲರೊಂದಿಗೆ ಮಾತನಾಡಲೂ ಸಹ ನನಗೆ ಅವಕಾಶ ನೀಡಲಿಲ್ಲ ಎಂದು ಮೇವಾನಿ ಹೇಳಿದ್ದಾರೆ.
ಅಲ್ಲದೆ ತಮ್ಮ ಬಂಧನದ ವೇಳೆ ಶಾಸಕರ ಪ್ರೋಟೋಕಾಲ್ ಅನ್ನು ನಿರ್ಲಕ್ಷಿಸಲಾಯಿತು. ಈ ಬಗ್ಗೆ ಗುಜರಾತ್ ವಿಧಾನಸಭಾ ಸ್ಪೀಕರ್ ಅವರಿಗೂ ಮಾಹಿತಿ ನೀಡಿಲ್ಲ. ಅಸ್ಸಾಂನಲ್ಲಿದ್ದಾಗಲೇ ಈ ವಿಷಯ ತಿಳಿಯಿತು. ನಂತರ, ಅವರು ಮಹಿಳೆಗೆ ಸಂಬಂಧಪಟ್ಟ ಮತ್ತೊಂದು ಪ್ರಕರಣ ದಾಖಲಿಸಿದರು. ಇದು 56 ಇಂಚಿನ ಎದೆಯಲ್ಲಿನ ಭಯವನ್ನುಬಿಂಬಿಸುತ್ತದೆ ಎಂದು ನೇರವಾಗಿ ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮೇವಾನಿ ವಾಗ್ದಾಳಿ ನಡೆಸಿದರು.
‘2,500 ಕಿಮೀ ದೂರದಲ್ಲಿರುವ ಶಾಸಕರೊಬ್ಬರ ಮೇಲೆ ಮಹಿಳೆಗೆ ಸಂಬಂಧಿಸಿ ಸುಳ್ಳು ಪ್ರಕರಣ ದಾಖಲಿಸುವುದು ಹೇಗೆ? ಎಂದು ಪ್ರಶ್ನಿಸಿದ ಮೇವಾನಿ, ನನ್ನ ಬಂಧನದ ಹಿಂದೆ ಪಿಎಂಒದಲ್ಲಿ ಕುಳಿತಿರುವ ಕೆಲವು ಗೋಡ್ಸೆ ಭಕ್ತರು ಇದ್ದಾರೆ ಎಂದು ಹೇಳಿದರು.
ತನಗೆ ಜಾಮೀನು ನೀಡಿದ ಅಸ್ಸಾಂ ನ್ಯಾಯಾಲಯವನ್ನು ಉಲ್ಲೇಖಿಸಿ ಮಾತನಾಡಿ ಮೇವಾನಿ “ಎರಡನೇ ಪ್ರಕರಣದಲ್ಲಿ ತ್ವರಿತ ಎಫ್ಐಆರ್ ತಯಾರಿಸಲಾಗಿದೆ ಎಂದು ತೋರುತ್ತದೆ. ಈ ಎಫ್ಐಆರ್ ನಿರ್ವಹಿಸುವಂತಿಲ್ಲ. ಯಾವುದೇ ವ್ಯಕ್ತಿ ಎಂದಿಗೂ ಇತರ ಪುರುಷ ಅಧಿಕಾರಿಗಳು ಇರುವಾಗ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾರ. ನನ್ನನ್ನು ಹೆಚ್ಚು ಕಾಲ ಕಸ್ಟಡಿಯಲ್ಲಿಡಲು ಪ್ರಕರಣವನ್ನು ಸಿದ್ಧಪಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ ಎಂದು ಮೇವಾನಿ ಹೇಳಿದರು. ಅಲ್ಲದೆ ಗುಜರಾತ್ ಚುನಾವಣೆಗೆ ಸಜ್ಜಾಗುತ್ತಿದ್ದು, ಇದೇ ಕಾರಣಕ್ಕೆ ನನ್ನ ವಿರುದ್ಧ ಈ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದರು.
ಕಳೆದ ವಾರ ಸ್ಥಳೀಯ ನ್ಯಾಯಾಲಯವು ಕಾಂಗ್ರೆಸ್ ನಾಯಕನಿಗೆ ಜಾಮೀನು ನೀಡಿತ್ತು. ಏಪ್ರಿಲ್ 20 ರಂದು ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ಗಳಿಗಾಗಿ ಅವರನ್ನು ಬಂಧಿಸಲಾಗಿತ್ತು. ಇದಾದ ನಂತರ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಏಪ್ರಿಲ್ 25 ರಂದು ಮತ್ತೆ ಬಂಧಿಸಲಾಗಿತ್ತು.