EXCLUSIVE BREAKING: ಮುನಿಯಾಲು ಉದಯ್​​ ಕುಮಾರ್​ ಶೆಟ್ಟಿ ಅವರಿಗೆ ಕಾರ್ಕಳ ಕಾಂಗ್ರೆಸ್​ ಟಿಕೆಟ್​ ಸಾಧ್ಯತೆ

ಅಕ್ಷಯ್​ ಕುಮಾರ್​ ಯು – ಮುಖ್ಯ ಸಂಪಾದಕರು, ಪ್ರತಿಕ್ಷಣ ನ್ಯೂಸ್​
ಕಾರ್ಕಳ ವಿಧಾನಸಭಾ ಕ್ಷೇತ್ರ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು. ಈ ಬಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ನಿಂದ ಯಾರಿಗೆ ಟಿಕೆಟ್​..? ಯಾರಾಗಲಿದ್ದಾರೆ ಕಾಂಗ್ರೆಸ್​ ಅಭ್ಯರ್ಥಿ..?
ಕಾರ್ಕಳದಲ್ಲಿ ಈ ಬಾರಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್​ ಕುಮಾರ್​ ಅವರ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರ ಕುತೂಹಲಕಾರಿ.
ಆದರೆ ಕಾಂಗ್ರೆಸ್​​ನಿಂದ ಯಾರು ಅಭ್ಯರ್ಥಿ ಆಗ್ತಾರೆ ಎನ್ನುವುದು ಕಾರ್ಕಳ ಕ್ಷೇತ್ರದ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ನಿರ್ಧರಿಸಲಿದೆ.
ಕಾಂಗ್ರೆಸ್​​ನಲ್ಲಿ ಟಿಕೆಟ್​ ಆಕಾಂಕ್ಷಿಗಳು:
ಕಾರ್ಕಳ ಕಾಂಗ್ರೆಸ್​ನಲ್ಲಿ ಐವರು ಟಿಕೆಟ್​ ಆಕಾಂಕ್ಷಿಗಳಿದ್ದಾರೆ.
1. ಸುಧಾಕರ್​ ಶೆಟ್ಟಿ – ತಾಲೂಕು ಪಂಚಾಯತ್​ ಮಾಜಿ ಸದಸ್ಯರು, ಕೆಎಂಎಫ್​ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಉದ್ಯಮಿ
2. ಡಿ ಆರ್​ ರಾಜು – ಗುತ್ತಿಗೆದಾರರು ಮತ್ತು ಉದ್ಯಮಿ
3. ಮಂಜುನಾಥ ಪೂಜಾರಿ – ಜಿಲ್ಲಾ ಪಂಚಾಯತ್​ ಮಾಜಿ ಸದಸ್ಯರು
4. ನೀರೆ ಕೃಷ್ಣ ಶೆಟ್ಟಿ – ಕಾರ್ಕಳ ಕಾಂಗ್ರೆಸ್​ ಮುಖಂಡರು
5. ಸುರೇಂದ್ರ ಶೆಟ್ಟಿ – ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ಸದಸ್ಯರು ಮತ್ತು ಉದ್ಯಮಿ
ಜಯಪ್ರಕಾಶ್​ ಹೆಗ್ಡೆ ಕಾಂಗ್ರೆಸ್​​ಗೆ ಬರ್ತಾರಾ..?
ಆದರೆ ಸುಧಾಕರ್​ ಶೆಟ್ಟಿ ಅವರನ್ನು ಹೊರತುಪಡಿಸಿ ಟಿಕೆಟ್​ ಬಯಸಿ ಅರ್ಜಿ ಸಲ್ಲಿಸಿದವರು ನಾಲ್ವರು. ಆದರೆ  ಅರ್ಜಿ ಸಲ್ಲಿಸಿದವರ ಪೈಕಿ ಯಾರಿಗೆ ಟಿಕೆಟ್​ ಕೊಟ್ಟರೂ ಈ ಆಕಾಂಕ್ಷಿಗಳ ವರ್ಚಸ್ಸಿನಲ್ಲಿ  ಕಾರ್ಕಳದ ಸದ್ಯದ ರಾಜಕೀಯ ವಾತಾವರಣದಲ್ಲಿ ಕಾಂಗ್ರೆಸ್​ ಗೆಲ್ಲುವುದು ಕಷ್ಟ ಎನ್ನುವುದು ಕಾರ್ಕಳ ಕಾಂಗ್ರೆಸ್​ ಕಾರ್ಯಕರ್ತರ ಅಭಿಪ್ರಾಯ.
ಸತತವಾಗಿ ಎರಡು ಬಾರಿ ಕಾರ್ಕಳದಲ್ಲಿ ಸೋಲು ಕಂಡಿರುವ ಕಾಂಗ್ರೆಸ್​​ಗೆ ಈ ಬಾರಿ ಗೆಲ್ಲುವುದು ರಾಜಕೀಯ ಅಸ್ತಿತ್ವದ ಹಿನ್ನೆಲೆಯಲ್ಲಿ ಅತ್ಯಂತ ಅನಿವಾರ್ಯ.
ಈ ಹಿನ್ನೆಲೆಯಲ್ಲಿ ಸುನಿಲ್​ ಕುಮಾರ್​ ಅವರಿಗೆ ಪ್ರಬಲ ಸ್ಪರ್ಧಿಯಾಗಿ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗಗಳ ಅಧ್ಯಕ್ಷರೂ, ಮಾಜಿ ಸಚಿವರೂ, ಮಾಜಿ ಸಂಸದರೂ ಆಗಿರುವ ಜಯಪ್ರಕಾಶ್​ ಹೆಗ್ಡೆ ಅವರನ್ನು ಕಾಂಗ್ರೆಸ್​ಗೆ ಮತ್ತೆ ಕರೆದುಕೊಂಡು ಅವರನ್ನು ಕಾರ್ಕಳದಲ್ಲಿ ಕಣಕ್ಕಿಳಿಸುವ ಬಗ್ಗೆ ಕಾರ್ಕಳ ಕಾಂಗ್ರೆಸ್​ ನಾಯಕರು ಪ್ರಯತ್ನ ಮಾಡಿದ್ದರು.
ಕಾಂಗ್ರೆಸ್​ ತೊರೆದಿದ್ದ ಹೆಗ್ಡೆ ಅವರು ಮತ್ತೆ ಕಾಂಗ್ರೆಸ್​​ಗೆ ಬಂದು ಕಾರ್ಕಳದಲ್ಲಿ ಸ್ಪರ್ಧಿಸಿದರೆ ಈ ಬಾರಿ ಕಾಂಗ್ರೆಸ್​ ಗೆದ್ದೇ ಗೆಲ್ಲುತ್ತೆ ಎನ್ನುವ ಅಭಿಪ್ರಾಯ ಕಾರ್ಕಳ ಕಾಂಗ್ರೆಸ್​ ನಾಯಕರು ಮತ್ತು ಕಾರ್ಯಕರ್ತರದ್ದು.
ಈ ಸಂಬಂಧ ಕಾರ್ಕಳ ಕಾಂಗ್ರೆಸ್​ ನಿಯೋಗ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಮತ್ತು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ವಿಧಾನಪರಿಷತ್​ನಲ್ಲಿ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್​ ಅವರ ಮುಂದೆ ಜಯಪ್ರಕಾಶ್​​ ಹೆಗ್ಡೆ ಅವರನ್ನು ಮತ್ತೆ ಕಾಂಗ್ರೆಸ್​ಗೆ ಕರೆತರುವ ಪ್ರಸ್ತಾಪ ಮುಂದಿಟ್ಟಿತ್ತು.
ಉಡುಪಿಯಲ್ಲಿ ನಡೆದಿದ್ದ ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆಯ ವೇಳೆಯೂ ಕಾರ್ಕಳ ಕಾಂಗ್ರೆಸ್​ ನಾಯಕರೂ ಪಕ್ಷದ ರಾಜ್ಯ ನಾಯಕರಿಗೆ ಹೆಗ್ಡೆ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.
ಇದಲ್ಲದೇ ಕಾರ್ಕಳ ಕಾಂಗ್ರೆಸ್​ ನಾಯಕರು ಹೆಗ್ಡೆ ಅವರನ್ನು ಭೇಟಿಯಾಗಿ ಮತ್ತೆ ಕಾಂಗ್ರೆಸ್​​ಗೆ ಬರುವಂತೆ ಮನವೊಲಿಕೆ ಪ್ರಯತ್ನವನ್ನೂ ಮಾಡಿದ್ದರು. ಹೆಗ್ಡೆ ಅವರ ರಾಜಕೀಯ ಎದುರಾಳಿ ವಿಧಾನಪರಿಷತ್​ ಮಾಜಿ ಸಭಾಪತಿ ಪ್ರತಾಪ್​ಚಂದ್ರ ಶೆಟ್ಟಿ ಅವರು ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ್ದರಿಂದ ಹೆಗ್ಡೆ ಅವರು ಕಾಂಗ್ರೆಸ್​ಗೆ ಬಂದೇ ಬರುತ್ತಾರೆ ಎಂಬ ನಿರೀಕ್ಷೆ ಕಾರ್ಕಳ ಕಾಂಗ್ರೆಸ್ಸಿಗರಲ್ಲಿತ್ತು.
ಆದರೆ ಮೂಲಗಳ ಮಾಹಿತಿ ಪ್ರಕಾರ ಕೊನೆ ಘಳಿಗೆಯಲ್ಲಿ ಜಯಪ್ರಕಾಶ್​ ಹೆಗ್ಡೆ ಅವರನ್ನು ಕಾಂಗ್ರೆಸ್​​ಗೆ ಕರೆತರುವ ಪ್ರಯತ್ನ ಕೈಗೊಡಿಲ್ಲ.
ಮುನಿಯಾಲು ಉದಯ್​ಕುಮಾರ್ ಶೆಟ್ಟಿ ಅವರಿಗೆ ಕಾಂಗ್ರೆಸ್​ ಟಿಕೆಟ್​..?
ಈ ಎಲ್ಲ ಕಾರಣಗಳಿಂದ ಈ ಬಾರಿ ಮುನಿಯಾಲು ಉದಯ್​​ಕುಮಾರ್​ ಶೆಟ್ಟಿ ಅವರಿಗೆ ಕಾರ್ಕಳದಿಂದ ಕಾಂಗ್ರೆಸ್​ ಟಿಕೆಟ್​ ಸಿಗಬಹುದು ಎನ್ನಲಾಗಿದೆ.
2018ರ ಚುನಾವಣೆಯಲ್ಲಿ ವೈಯಕ್ತಿಕ ವರ್ಚಸ್ಸಿನ ಉದ್ಯಮಿ ಆಗಿರುವ ಉದಯ್​ ಕುಮಾರ್​ ಶೆಟ್ಟಿ ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡಲಿದೆ ಎನ್ನುವ ವಾತಾವರಣ ಇದ್ಯಾಗಿಯೂ ಕೂಡಾ ಕಾಂಗ್ರೆಸ್​ ಆಂತರಿಕ ಸಂಘರ್ಷದ ಕಾರಣ ಕೊನೆಗೆ ಗೋಪಾಲ ಭಂಡಾರಿಗೆ ಅವರಿಗೆ ಟಿಕೆಟ್​ ಘೋಷಿಸಲಾಗಿತ್ತು.
ಆ ಬಳಿಕ ನಡೆದ ಬೆಳವಣಿಗೆಯ ಹಿನ್ನೆಲೆಯಲ್ಲಿ ಉದಯ್​ ಕುಮಾರ್​ ಶೆಟ್ಟಿ ಅವರು ಕಾಂಗ್ರೆಸ್​ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದರು ಮತ್ತು ಅವರ ಬೆಂಬಲಿಗರೂ ತಟಸ್ಥರಾದರು.
ಆದರೆ ಈ ಬಾರಿ ಉದಯ್​ ಕುಮಾರ್​ ಮತ್ತೆ ಮುನಿಯಾಲು ಉದಯ್​ ಕುಮಾರ್​ ಶೆಟ್ಟಿ ಅವರಿಗೆ ಕಾಂಗ್ರೆಸ್​ ಮಣೆ ಹಾಕುವ ನಿರೀಕ್ಷೆ ಇದೆ ಎಂದು ಮೂಲಗಳು ಪ್ರತಿಕ್ಷಣನ್ಯೂಸ್​​ಗೆ ತಿಳಿಸಿವೆ.
ಕಾರ್ಕಳದಲ್ಲಿ ಕಾಂಗ್ರೆಸ್​ ಗೆಲ್ಲಬೇಕಾದ್ರೆ ಮುನಿಯಾಲು ಉದಯ್​ ಕುಮಾರ್​ ಶೆಟ್ಟಿ ಅವರಿಗೆ ಟಿಕೆಟ್​ ಕೊಡುವುದು ಅನಿವಾರ್ಯ ಮತ್ತು ಒಂದು ವೇಳೆ ಟಿಕೆಟ್​ ಕೊಟ್ಟರೆ ಕಾಂಗ್ರೆಸ್​ ಗೆಲುವು ನಿರೀಕ್ಷಿಸಬಹುದು ಎನ್ನುವುದು ಕಾಂಗ್ರೆಸ್ಸಿಗರ ಮಾತು.
ಸ್ಪರ್ಧೆಗೆ ಉತ್ಸುಕ:
ಸದ್ಯಕ್ಕೆ ಕಾರ್ಕಳದಲ್ಲಿ ಸಚಿವ ವಿ ಸುನಿಲ್​ ಕುಮಾರ್​ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇರುವ ಕಾರಣ ಮತ್ತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಸ್ಪರ್ಧೆಯ ಕಾರಣ ಈ ಬಾರಿ ಕಾಂಗ್ರೆಸ್​​ಗೆ ಮೇಲುಗೈ ಆಗುವ ವಾತಾವರಣ ಇದೆ ಎಂಬ ಅಭಿಪ್ರಾಯ ಕಾಂಗ್ರೆಸ್ಸಿಗರದ್ದು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಟಿಕೆಟ್​ ಕೊಟ್ಟರೆ ಸ್ಪರ್ಧೆಗೆ ಮುನಿಯಾಲು ಉದಯ್​ಕುಮಾರ್​ ಶೆಟ್ಟಿ ಅವರು ಮನಸ್ಸು ಮಾಡಿದ್ದಾರೆ ಎಂದು ಮೂಲಗಳು ಪ್ರತಿಕ್ಷಣ ನ್ಯೂಸ್​​ಗೆ ತಿಳಿಸಿವೆ.
ಮೊಯ್ಲಿ ನಿರ್ಧಾರ ಏನು..?
ಕಳೆದ ಬಾರಿ ಉದಯ್​ ಕುಮಾರ್​ ಶೆಟ್ಟಿ ಅವರಿಗೆ ಟಿಕೆಟ್​ ಕೈ ತಪ್ಪಿದ್ದರ ಹಿಂದೆ ಮತ್ತು ಆ ಮೂಲಕ ಕಾರ್ಕಳದಲ್ಲಿ ಕಾಂಗ್ರೆಸ್​ ಸೋಲಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕಾರಣರಾದರು ಎಂಬ ಸಿಟ್ಟು ಕಾರ್ಕಳ ಕಾಂಗ್ರೆಸ್​ ನಾಯಕರು ಮತ್ತು ಕಾರ್ಯಕರ್ತರಲ್ಲಿದೆ.
ಸಚಿವ ಸುನಿಲ್​ ಕುಮಾರ್​ ಅವರ ಜೊತೆಗೆ ವೀರಪ್ಪಮೊಯ್ಲಿ ಅವರು ಚೆನ್ನಾಗಿದ್ದಾರೆ. ಕಾರ್ಕಳದಲ್ಲಿ ಯಾರಿಗೆ ಕೊಡಬೇಕು ಎನ್ನುವುದರ ಪಕ್ಷದ ತೀರ್ಮಾನದ ಹಿಂದೆ ಮೊಯ್ಲಿ ಅವರು ಯಾರನ್ನು ಬೆಂಬಲಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.
ಕಳೆದ ಬಾರಿ ಎಸಗಲಾದ ಪ್ರಮಾದವನ್ನು ಈ ಬಾರಿ ಮತ್ತೆ ಎಸಗಿದರೆ, ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸುನಿಲ್​ ಕುಮಾರ್​ ಗೆಲುವಿಗೆ ಕಾರಣವಾದರೆ ಮತ್ತೆ ಕಾರ್ಕಳದಲ್ಲಿ ಪಕ್ಷವನ್ನು ಉಳಿಸಿಕೊಳ್ಳುವುದು ಅಸಾಧ್ಯವಾಗಬಹುದು ಎನ್ನುವುದು ಕಾರ್ಕಳ ಕಾಂಗ್ರೆಸ್​ ಕಾರ್ಯಕರ್ತತರ ಎಚ್ಚರಿಕೆಯ ಮಾತುಗಳು.
ಹೀಗಾಗಿ ವೀರಪ್ಪ ಮೊಯ್ಲಿ ಅವರ ನಿರ್ಧಾರ ಏನು ಎನ್ನುವುದು ಕಾರ್ಕಳ ಕಾಂಗ್ರೆಸ್​ ಭವಿಷ್ಯದ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ. 
ಮುತ್ಸದಿತನ ತೋರುತ್ತಾರಾ ಮೊಯ್ಲಿ..?
ಕಾರ್ಕಳ ಕಾಂಗ್ರೆಸ್​ನ ಹಿತಾಸಕ್ತಿ ಮತ್ತು ಭವಿಷ್ಯದ ದೃಷ್ಟಿಯಲ್ಲಿ ಮೊಯ್ಲಿ ಅವರು ತಮ್ಮ ವೈಯಕ್ತಿಕ ವೈಮನಸ್ಸನ್ನು ದೂರವಿಟ್ಟು, ಕಾರ್ಕಳ ಕ್ಷೇತ್ರದ ಇತರೆ ಟಿಕೆಟ್​ ಆಕಾಂಕ್ಷಿಗಳು ಮತ್ತು ಎಲ್ಲ ಮುಖಂಡರನ್ನು ಒಗ್ಗೂಡಿಸಿ ಮುನಿಯಾಲು ಉದಯ್​ ಕುಮಾರ್​ ಶೆಟ್ಟಿ ಅವರಿಗೆ ಟಿಕೆಟ್​ ಕೊಡಿಸಿ ಮೊಯ್ಲಿ ತಮ್ಮ ರಾಜಕೀಯ ಮುತ್ಸದಿನ ತೋರುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾರ್ಕಳ ಕಾಂಗ್ರೆಸ್​ ನಾಯಕರು ಮತ್ತು ಕಾರ್ಯಕರ್ತರಿದ್ದಾರೆ.

LEAVE A REPLY

Please enter your comment!
Please enter your name here