Moral Policing: ದಕ್ಷಿಣ ಕನ್ನಡದಲ್ಲಿ ಅನೈತಿಕ ಪೊಲೀಸ್​ಗಿರಿ ಹೆಚ್ಚಳ – ಎರಡೇ ತಿಂಗಳಲ್ಲಿ 4 ಪ್ರಕರಣ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಅನೈತಿಕ ಪೊಲೀಸ್​ಗಿರಿ ಸಂಬಂಧ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. 

ಬೆಂಗಳೂರಿಗೆ ಹೊರಟ್ಟಿದ್ದ ವಿದ್ಯಾರ್ಥಿನಿಯನ್ನು ಧರ್ಮಸ್ಥಳದ ಕೆಎಸ್​ಆರ್​ಟಿಸಿ ಬಸ್​ಸ್ಯಾಂಡ್​​ಗೆ ಕರೆದುಕೊಂಡು ಹೋಗುತ್ತಿದ್ದ ಉಜಿರೆ ಮೂಲದ ಆಟೋ ಚಾಲಕ ಮಹಮ್ಮದ್​ ಅಶಿಕ್​ ಎಂಬ ಯುವಕನ ಮೇಲೆ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ.

ಆಗಸ್ಟ್​ 2ರಂದು ರಾತ್ರಿ 9 ಗಂಟೆಗೆ ನಡೆದಿರುವ ಕೃತ್ಯ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಐಪಿಸಿ ಕಲಂ 143, 147,341,323,504,506 ಮತ್ತು 149 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಳೆದ 2 ತಿಂಗಳಲ್ಲಿ ಐದನೇ ಪ್ರಕರಣ:

ಜೂನ್​ 2ರಿಂದ ಆಗಸ್ಟ್​ 2ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 5 ಅನೈತಿಕ ಪೊಲೀಸ್​​ಗಿರಿ ಪ್ರಕರಣ ದಾಖಲಾಗಿದೆ.

ಪ್ರಕರಣ 1:

ಜೂನ್​ 2ರಂದು ಉಡುಪಿ ಜಿಲ್ಲೆಯ ಸೋಮೇಶ್ವರ ಕಡಲ ತೀರದಲ್ಲಿ ಮೂವರು ವಿದ್ಯಾರ್ಥಿನಿಯರು ಅನ್ಯ ಧರ್ಮದ ಮೂವರು ವಿದ್ಯಾರ್ಥಿಗಳೊಂದಿಗೆ ಇದ್ದರು ಎಂಬ ಕಾರಣಕ್ಕೆ ಹಿಂದೂ ಸಂಘಟನೆ ಆರು ಮಂದಿ ಸದಸ್ಯರು ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಆರು ಮಂದಿ ದುಷ್ಕರ್ಮಿಗಳನ್ನು ಬಂಧಿಸಲಾಗಿತ್ತು.

ಪ್ರಕರಣ 2:

ಜುಲೈ 28ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ ಸಿ ರೋಡ್​ನಲ್ಲಿ ರಾತ್ರಿ ಪತ್ನಿ ಮತ್ತು ಸಹೋದರಿ ಜೊತೆಗೆ ಊಟ ಮುಗಿಸಿ ಪೊಲೀಸ್​ ಅಧಿಕಾರಿಯನ್ನು ಅಡ್ಡಗಟ್ಟಿ ಅನೈತಿಕ ಪೊಲೀಸ್​​ಗಿರಿ ನಡೆಸಲಾಗಿತ್ತು.

ವಿಚಿತ್ರ ಎಂದರೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಳ್ಯದಲ್ಲಿ ಕೊಲೆಯಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ತಂಡದಲ್ಲಿ ಆ ಪೊಲೀಸ್​ ಅಧಿಕಾರಿ ಇದ್ದಾರೆ. 

ಕೃತ್ಯ ಸಂಬಂಧ ಮನೀಶ್​ ಪೂಜಾರಿ ಮತ್ತು ಮಂಜುನಾಥ ಆಚಾರ್ಯ ಎಂಬ ಇಬ್ಬರು ಕಿಡಿಗೇಡಿಗಳನ್ನು ಬಂಧಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣ 3: 

ಜುಲೈ 29ರಂದು ಕಾರಿನಲ್ಲಿ ಪ್ರಯಾಣಿಸ್ತಿದ್ದ ಮಂಗಳೂರಿನ ಕಾಲೇಜಿನ ವೈದ್ಯರು ಮತ್ತು ಮಹಿಳಾ ಪ್ರೊಫೆಸರ್​ಗಳನ್ನು ಕಾರ್ಕಳದ ಕುಂಟಲ್ಪಾಡಿಯಲ್ಲಿ ಅಡ್ಡಗಟ್ಟಿ ಹಿಂದೂ ಸಂಘಟನೆ ಕಾರ್ಯಕರ್ತರು ಬೆದರಿಕೆ ಹಾಕಿದ್ದರು. 

ಈ ಪ್ರಕರಣ ಸಂಬಂಧ ಸಂತೋಷ್​ ನಂದಳಿಕೆ, ಕಾರ್ತಿಕ್​ ಪೂಜಾರಿ, ಸುನಿಲ್​ ಮೂಲ್ಯ ಮಿಯ್ಯಾರು​, ಸಂದೀಪ್​ ಪೂಜಾರಿ ಮಿಯ್ಯಾರು, ಸುಜಿತ್​ ಸಫಲಿಗ ಎಂಬ ನಾಲ್ವರನ್ನು ಬಂಧಿಸಲಾಗಿದೆ.

ಪ್ರಕರಣ 4:

ಜುಲೈ 29ರಂದು ಮಂಗಳೂರು ನಗರದ ಕಾವೂರಿನಲ್ಲಿ ಪತ್ರಕರ್ತ ಅಭಿಜಿತ್​ ಕೊಲ್ಪೆ ಸ್ನೇಹಿತೆಯ ಜೊತೆಗೆ ರೆಸ್ಟೋರೆಂಟ್​ನಲ್ಲಿ ಊಟ ಮಗಿಸಿ ಮಧ್ಯಾಹ್ನ 3 ಗಂಟೆಗೆ ಹೊರಬರುವ ವೇಳೆ ಇಬ್ಬರು ಕಿಡಿಗೇಡಿಗಳು ಅಡ್ಡಗಟ್ಟಿ ಧರ್ಮದ ಹೆಸರಲ್ಲಿ ಬೆದರಿಕೆ ಹಾಕಿದ್ದರು.

ಈ ಕೃತ್ಯ ಸಂಬಂಧ ಚೇತನ್​ ಕುಮಾರ್​ ಮತ್ತು ನವೀನ್​ ವಿರುದ್ಧ ಎಫ್​ಐಆರ್​ ದಾಖಲಾಗಿ ಬಳಿಕ ಅವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ:

ಆಗಸ್ಟ್​ 1ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೈತಿಕ ಪೊಲೀಸ್​ಗಿರಿಯನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕುವಂತೆ ಸೂಚಿಸಿದ್ದರು.

ಅಲ್ಲದೇ ಸಿಎಂ ಆದ ಬಳಿಕ ನಡೆಸಿದ ಪೊಲೀಸ್​ ಅಧಿಕಾರಿಗಳ ಮೊದಲ ಸಭೆಯಲ್ಲಿ ಅನೈತಿಕ ಪೊಲೀಸ್​ಗಿರಿ ವಿರುದ್ಧ ಕ್ರಮಕೈಗೊಳ್ಳದೇ ಹೋದರೆ ಇನ್ಸ್​ಪೆಕ್ಟರ್​ ಮತ್ತು ಡಿಸಿಪಿಯನ್ನು ಹೊಣೆ ಮಾಡುವ ಎಚ್ಚರಿಕೆ ನೀಡಿದ್ದರು.

ಜೂನ್​ 6ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಗೃಹ ಸಚಿವ ಡಾ ಜಿ ಪರಮೇಶ್ವರ್​ ಅವರು ಅನೈತಿಕ ಪೊಲೀಸ್​ಗಿರಿ ಮಟ್ಟಹಾಕಲು ವಿಶೇಷ ಕಾರ್ಯಪಡೆ ರಚಿಸುವ ಘೋಷಣೆ ಮಾಡಿದ್ದರು.

ಆ ಬಳಿಕ ಮಂಗಳೂರು ಪೊಲೀಸ್​ ಆಯುಕ್ತ ಕುಲದೀಪ್​ ಜೈನ್​ ಅವರು ವಿಶೇಷ ತಂಡವನ್ನು ರಚಿಸಿದ್ದರು. ಆ ಬಳಿಕ ಅನೈತಿಕ ಪೊಲೀಸ್​ಗಿರಿ ಕೃತ್ಯದಲ್ಲಿ ಪದೇ ಪದೇ ಭಾಗಿ ಆಗಿದ್ದ ಮೂವರಿಗೆ ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದು ಎಂದು ನೋಟಿಸ್​ ನೀಡಲಾಗಿದೆ.

2019ರಿಂದ ಕಳೆದ ವರ್ಷದ ಮಾರ್ಚ್​ ಅಂತ್ಯಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ 32 ಅನೈತಿಕ ಪೊಲೀಸ್​ಗಿರಿ ಪ್ರಕರಣ ದಾಖಲಾಗಿತ್ತು. ಇವುಗಳಲ್ಲಿ 12 ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ, 11 ಪ್ರಕರಣ ಮಂಗಳೂರು ಪೊಲೀಸ್​ ಆಯುಕ್ತರ ವ್ಯಾಪ್ತಿಯಲ್ಲಿ, ಉಡುಪಿ ಜಿಲ್ಲೆಯಲ್ಲಿ 6 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 2 ಪ್ರಕರಣ ದಾಖಲಾಗಿತ್ತು.

2021ರಲ್ಲಿ ಮೂಡಬಿದ್ರೆ ಬಿಜೆಪಿ ಶಾಸಕ ಉಮಾನಾಥ್​ ಕೋಟ್ಯಾನ್​ ಅನೈತಿಕ ಪೊಲೀಸ್​​ಗಿರಿ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಠಾಣೆಗೆ ತೆರಳಿ ಬಿಡಿಸಿಕೊಂಡು ಬಂದಿದ್ದರು. ಅನೈತಿಕ ಪೊಲೀಸ್​​ಗಿರಿ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here